ಪಕ್ಷದ ಕೆಲಸ ನನಗೆ ವಹಿಸಿ, ಪ್ರತಿಪಕ್ಷ ನಾಯಕನ ಸ್ಥಾನ ಬೇಡ ಎಂದ ಎನ್ಸಿಪಿ ನಾಯಕ ಅಜಿತ್ ಪವಾರ್
ಮುಂಬೈ , ಜೂನ್. 21: ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯಿಂದ ತಮ್ಮನ್ನು ಮುಕ್ತಗೊಳಿಸಬೇಕು ಮತ್ತು ಪಕ್ಷ ಸಂಘಟನೆಯಲ್ಲಿ ಯಾವುದಾದರೂ ಪಾತ್ರವನ್ನು ನಿಯೋಜಿಸಬೇಕು ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಜಿತ್ ಪವಾರ್ ಬುಧವಾರ ಪಕ್ಷದ ನಾಯಕತ್ವಕ್ಕೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದ ಮುಂಬೈನಲ್ಲಿ ನಡೆದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ 24ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ತಮ್ಮ ಚಿಕ್ಕಪ್ಪ ಶರದ್ ಪವಾರ್ ಮತ್ತು ಇತರ ಹಿರಿಯ ನಾಯಕರು ಭಾಗವಹಿಸಿದ್ದಾಗ ಅವರು ಈ ಬೇಡಿಕೆಯನ್ನು ಮುಂದಿದ್ದಾರೆ. ಹೊಸ ಊಹಾಪೋಹಗಳಿಗೆ ಉತ್ತೇಜನ ನೀಡುವ ಟೀಕೆಯಲ್ಲಿ, "ನಾನು ವಿರೋಧ ಪಕ್ಷದ ನಾಯಕನಾಗಿ ಕಠಿಣವಾಗಿ ವರ್ತಿಸುವುದಿಲ್ಲ ಎಂದು ನನಗೆ ಹೇಳಲಾಗಿದೆ" ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಲು ನಾನು ಎಂದಿಗೂ ಆಸಕ್ತಿ ಹೊಂದಿಲ್ಲ, ಆದರೆ ಪಕ್ಷದ ಶಾಸಕರ ಬೇಡಿಕೆಯ ಮೇರೆಗೆ ಪಾತ್ರವನ್ನು ಒಪ್ಪಿಕೊಂಡಿದ್ದೇನೆ. ಪಕ್ಷ ಸಂಘಟನೆಯಲ್ಲಿ ಯಾವುದೇ ಹುದ್ದೆ ನೀಡಿದರೂ ನನಗೆ ವಹಿಸಿಕೊಡಿ, ನನಗೆ ವಹಿಸಿರುವ ಜವಾಬ್ದಾರಿಗೆ ಸಂಪೂರ್ಣ ನ್ಯಾಯ ಒದಗಿಸುತ್ತೇನೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ತಮ್ಮ ಬೇಡಿಕೆಯ ಬಗ್ಗೆ ನಿರ್ಧರಿಸುವುದು ಎನ್ಸಿಪಿ ನಾಯಕತ್ವಕ್ಕೆ ಬಿಟ್ಟದ್ದು ಎಂದು ಈ ವೇಳೆ ಸೇರಿಸಿದ್ದಾರೆ. ಶಿವಸೇನೆಯ ಬಂಡಾಯದಿಂದಾಗಿ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಿದ್ದ ಎಂವಿಎ ಸರ್ಕಾರ ಪತನಗೊಂಡ ನಂತರ ಕಳೆದ ಜುಲೈನಲ್ಲಿ ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಇತ್ತೀಚೆಗೆ ತಮ್ಮ ಪುತ್ರಿ ಮತ್ತು ಸಂಸದೆ ಸುಪ್ರಿಯಾ ಸುಳೆ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಮಹಾರಾಷ್ಟ್ರದ ಜವಾಬ್ದಾರಿಯನ್ನು ವಹಿಸಿದ್ದರು. ಪ್ರಫುಲ್ ಪಟೇಲ್ ಇತರ ರಾಜ್ಯಗಳಿಗೆ ಮತ್ತೊಬ್ಬ ಕಾರ್ಯಾಧ್ಯಕ್ಷರಾಗಿದ್ದಾರೆ.
ಇನ್ನು, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಮತ್ತು ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ್ ಅಘಾಡಿ (ವಿಬಿಎ) ಅನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಅಜಿತ್ ಪವಾರ್ ಹೇಳಿದ್ದಾರೆ. "2019 ರಲ್ಲಿ ವಿಬಿಎ ಮಾತ್ರ ಕಾಂಗ್ರೆಸ್-ಎನ್ಸಿಪಿ ಮೈತ್ರಿಗೆ ಹಾನಿಯನ್ನುಂಟುಮಾಡಿತು. ಸಮಾನ ಮನಸ್ಕ ಪಕ್ಷಗಳ ನಡುವೆ ಮತಗಳ ವಿಭಜನೆಯಾಗದಂತೆ ನಾವು ಖಚಿತಪಡಿಸಿಕೊಳ್ಳಬೇಕು. ನಾವು ಬಿಆರ್ಎಸ್ ಮತ್ತು ವಿಬಿಎಗಳನ್ನು ನಿರ್ಲಕ್ಷಿಸಲಾಗುವುದಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ.
ಗಮನಾರ್ಹವಾಗಿ, ಕೆಸಿಆರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಚಂದ್ರಶೇಖರ್ ರಾವ್ ಅವರು ಮಹಾರಾಷ್ಟ್ರದಲ್ಲಿ ಬಿಆರ್ಎಸ್ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ. ಮರಾಠವಾಡ ಪ್ರದೇಶದಲ್ಲಿ "ಕಿಸಾನ್" (ರೈತರ) ಸರ್ಕಾರವನ್ನು ಸ್ಥಾಪಿಸಲು ಕರೆ ನೀಡಿದ್ದರು. ಬಿಆರ್ಎಸ್ ಪಶ್ಚಿಮ ರಾಜ್ಯದಲ್ಲಿ ಸದಸ್ಯತ್ವ ಅಭಿಯಾನವನ್ನು ಸಹ ಪ್ರಾರಂಭಿಸಿದೆ. ಹೀಗಾಗಿ ಮುಂಬೈ ಮತ್ತು ವಿದರ್ಭದಲ್ಲಿ ಎನ್ಸಿಪಿ ಸಂಘಟನೆಯನ್ನು ಬಲಪಡಿಸುವ ಅಗತ್ಯವನ್ನು ಅಜಿತ್ ಪವಾರ್ ಒತ್ತಿ ಹೇಳಿದ್ದಾರೆ.
ಇತ್ತ, ಎನ್ಸಿಪಿ ಮುಖಂಡರು ಮತ್ತು ಪದಾಧಿಕಾರಿಗಳನ್ನು ಉದ್ದೇಶಿಸಿ ನೂತನವಾಗಿ ನೇಮಕಗೊಂಡ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರು ಬೂತ್ ಸಮಿತಿಗಳನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಸಚಿವರಾಗಿ ಸೇವೆ ಸಲ್ಲಿಸಿದ ಹಿರಿಯ ಶಾಸಕರಿಗೆ ಐದರಿಂದ ಆರು ಕ್ಷೇತ್ರಗಳನ್ನು ವಹಿಸಿ ಮಾತನಾಡಿದ್ದಾರೆ.












Click it and Unblock the Notifications