ಕಾಂಗ್ರೆಸ್ ಇಮೇಜ್ ಬದಲಾಯಿಸಿದ ಜೋಧ್ಪುರ್ ಜಾದೂಗಾರ!
ಅಹಮದಾಬಾದ್, ಡಿಸೆಂಬರ್ 18 : ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್ 75 ಸ್ಥಾನಗಳಲ್ಲಿ ಜಯಗಳಿಸಿದೆ. ಅಧಿಕಾರ ಹಿಡಿಯಲು ಸಾಧ್ಯವಾಗದಿದ್ದರೂ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದೆ.
2012ರ ಚುನಾವಣೆಯಲ್ಲಿ ಕಾಂಗ್ರೆಸ್ 57 ಸ್ಥಾನಗಳಲ್ಲಿ ಜಯಗಳಿಸಿತ್ತು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ತವರು ನೆಲದಲ್ಲಿ, ಕಾಂಗ್ರೆಸ್ ಹೆಚ್ಚು ಸ್ಥಾನದಲ್ಲಿ ಜಯಗಳಿಸಿದ್ದು ದೊಡ್ಡ ಸಾಧನೆ.
ಜೋಧ್ಪುರದ ಜಾದೂಗಾರ ಕಾಂಗ್ರೆಸ್ ಪಕ್ಷದ ಹಿಂದಿನ ಶಕ್ತಿ. ಹೌದು, ಗುಜರಾತ್ ಪಕ್ಕದ ರಾಜಸ್ಥಾನದ ಜೋಧ್ಪುರದ ಅಶೋಕ್ ಗೆಹ್ಲೋಟ್ ಗುಜರಾತ್ನ ಕಾಂಗ್ರೆಸ್ ಉಸ್ತುವಾರಿ, ಪಕ್ಷದ ಇಮೇಜ್ ಬದಲಿಸುವಲ್ಲಿ ಇವರ ಕೈ ಚಳಕ ಹೆಚ್ಚಿದೆ.

1998-2003, 2008-2013ರ ತನಕ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದವರು ಅಶೋಕ್ ಗೆಹ್ಲೋಟ್. ರಾಜಸ್ಥಾನದ ಜಾತಿ ರಾಜಕೀಯದಲ್ಲಿ ಗೆಹ್ಲೋಟ್ ಅವರು ಬೆಳೆದು ಬಂದಿದ್ದೆ ದೊಡ್ಡ ಅಚ್ಚರಿಯ ಕಥೆ.
ಜೋಧ್ಪುರದ ಮಾಲಿ ಸಮುದಾಯಕ್ಕೆ ಸೇರಿದ ಅಶೋಕ್ ಗೆಹ್ಲೋಟ್ ತಂದೆ ಮ್ಯಾಜಿಕ್ ಮಾಡುತ್ತಿದ್ದರು. ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಇಮೇಜ್ ಬದಲಾವಣೆ ಮಾಡಿ ಗೆಹ್ಲೋಟ್ ಜಾದೂ ಮಾಡಿದ್ದಾರೆ, ಹೆಚ್ಚು ಸ್ಥಾನಗಳಲ್ಲಿ ಗೆಲುವು ತಂದು ಕೊಟ್ಟಿದ್ದಾರೆ.
2017ರ ಏಪ್ರಿಲ್ನಲ್ಲಿ ಗುರುದಾಸ್ ಕಾಮತ್ ಅವರನ್ನು ಬದಲಾಣೆ ಮಾಡಿ ಅಶೋಕ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕ ಮಾಡಲಾಯಿತು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಹಿಂದೆ ಗೆಹ್ಲೋಟ್ ಅವರ ತಂತ್ರ ಅಡಗಿದೆ.
ಬಿಜೆಪಿಯ ಹಿಂದುತ್ವ ರಾಜಕೀಯಕ್ಕೆ ಪರ್ಯಾಯವಾಗಿ ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಖೂರ್, ಜಿಗ್ನೇಶ್ ಮೇವಾನಿ ಅವರನ್ನೆಲ್ಲ ಸೇರಿಸಿ ಚುನಾವಣೆ ಎದುರಿಸಿದ್ದು ಅಶೋಕ್ ಗೆಹ್ಲೋಟ್ ಅವರ ಸಾಧನೆ. ಅದರ ಪ್ರತಿಫಲವೇ ಇಂದು ಬಂದಿರುವ ಫಲಿತಾಂಶ.












Click it and Unblock the Notifications