ದೆಹಲಿ ಮಾಜಿ ಸಿಎಂ ಕೇಜ್ರಿವಾಲ್ ಈಗ ಬದಲಾದ ಮನುಷ್ಯ
ನವದೆಹಲಿ, ಫೆ 22: ಗುರು ಮತ್ತು ಶಿಷ್ಯರ ನಡುವಣ ಸಂಬಂಧ ಹಳಸಿ ಹೋಗಿದೆ. ಭ್ರಷ್ಟಾಚಾರದ ವಿರುದ್ದ ತೊಡೆ ತಟ್ಟಿ ರಾಜಕೀಯ ಪಕ್ಷಗಳಿಗೆ ಸಿಂಹಸ್ವಪ್ನವಾಗಿದ್ದ ಅಣ್ಣಾ ಹಜಾರೆ ಮತ್ತು ಅರವಿಂದ್ ಕೇಜ್ರಿವಾಲ್ ಈಗ ನಾನೊಂದು ತೀರ ನೀನೊಂದು ತೀರ. ದೆಹಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಈಗ 'ಬದಲಾದ ಮನುಷ್ಯ' ಎಂದು ಅಣ್ಣಾ ಹೇಳಿದ್ದಾರೆ.
ಬದಲಾದ ಮನುಷ್ಯ ಅರವಿಂದ್ ಕೇಜ್ರಿವಾಲ್ ಈಗ ಪ್ರಧಾನಿಯಾಗ ಬೇಕೆನ್ನುವ ಮಹತ್ವಾಕಾಂಕ್ಷೆ ಉಳ್ಳವರು ಎಂದು ಗುರುವಾರವಷ್ಟೇ (ಫೆ 20) ಹೇಳಿಕೆ ನೀಡಿದ್ದ ಅಣ್ಣಾ ಹಜಾರೆ ಈಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಲ್ಲೆಲ್ಲಿ ಕಣಕ್ಕಿಳಿಯುತ್ತಾರೋ ಅಲ್ಲಿ ತಾನೂ ಪರೋಕ್ಷವಾಗಿ ಆಖಾಡಕ್ಕೆ ಇಳಿಯಲು ನಿರ್ಧರಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ದೇಶದ ಯಾವ ಕ್ಷೇತ್ರದಲ್ಲಾದರೂ ಕಣಕ್ಕಿಳಿಯಲಿ ಅಲ್ಲಿ ತಾನು ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಅಣ್ಣಾ ಹೇಳಿದ್ದಾರೆ. (ಮಮತಾ ದೀದಿ ಮುಂದಿನ ಪ್ರಧಾನಿಯಾಗಲಿ)

ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಿದ್ದ ಅಣ್ಣಾ, ಮೂರ್ನಾಲ್ಕು ವರ್ಷದ ಕೆಳಗೆ ನಾನು ನೋಡಿದ ಕೇಜ್ರಿವಾಲೇ ಬೇರೆ, ಈಗಿನ ಕೇಜ್ರಿವಾಲೇ ಬೇರೆ. ಅವರೀಗ ಬದಲಾದ ವ್ಯಕ್ತಿ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣ ಸರಕಾರೀ ಬಂಗಲೆಯನ್ನು ಕೇಜ್ರಿವಾಲ್ ಖಾಲಿ ಮಾಡಬೇಕಾಗಿತ್ತು. ಇನ್ನೂ ಬಂಗಲೆ ಖಾಲಿ ಮಾಡದಿರುವ ಹಿಂದೆ ಅವರ ರಾಜಕೀಯ ಮಹತ್ವಾಕಾಂಕ್ಷೆ ಬಹಿರಂಗವಾಗುತ್ತಿದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಟಿಎಂಸಿ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರ ಚುನಾವಣಾ ಪ್ರಚಾರಕ್ಕೆ ಮುಂದಾಗಿರುವ ಅಣ್ಣಾ ಹಜಾರೆ ಈಗ ಆಮ್ ಆದ್ಮಿ ಪಕ್ಷದ ವಿರುದ್ದ ತಿರುಗಿ ಬಿದ್ದಿದ್ದು ಕೇಜ್ರಿವಾಲ್ ಈಗ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. (ಆಮ್ ಆದ್ಮಿಯ 20 ಅಭ್ಯರ್ಥಿಗಳು ಲೋಕಸಭಾ ಚುನಾವಣೆಗೆ)
ಸಮಾಜದ ಮತ್ತು ದೇಶದ ಮೇಲೆ ಮಮತಾ ಬ್ಯಾನರ್ಜಿಗಿರುವ ಕಾಳಜಿಯಿಂದ ನಾನು ಬರುವ ಚುನಾವಣೆಯಲ್ಲಿ ಟಿಎಂಸಿ ಬೆಂಬಲಿಸಲು ನಿರ್ಧರಿಸಿದ್ದೇನೆ. ಅಲ್ಲದೇ, ಆಮ್ ಆದ್ಮಿ ಸ್ಪರ್ಧಿಸುವ ಕ್ಷೇತ್ರದಲ್ಲಿ ಸೂಕ್ತ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ವ್ಯಕ್ತ ಪಡಿಸುತ್ತೇನೆ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.












Click it and Unblock the Notifications