ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ಕಣಿವೆ ರಾಜ್ಯವನ್ನು ಕಾಡುತ್ತಿರುವ 370ನೇ ವಿಧಿ?

By Kiran B Hegde
|
Google Oneindia Kannada News

ಮಿಶನ್ ಕಾಶ್ಮೀರ ಆರಂಭವಾಗಿದೆ. ಕಾಶ್ಮೀರ ಚುನಾವಣೆ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಕುತೂಹಲ ಮೂಡಿಸಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಿರುವ ವಿವಾದಿತ ಸಂವಿಧಾನದ 370ನೇ ವಿಧಿ ಈ ಬಾರಿ ಚುನಾವಣೆಯ ಮುಖ್ಯ ವಿಷಯ. 370ನೇ ವಿಧಿಯನ್ನು ಮುಂದುವರಿಸಬೇಕೇ ಅಥವಾ ರದ್ದುಪಡಿಸಬೇಕೇ ಎಂಬ ಚರ್ಚೆಯೂ ಆರಂಭವಾಗಿದೆ.

ಸರಳವಾಗಿ ಹೇಳಬೇಕೆಂದರೆ 370ನೇ ವಿಧಿಯು ಜಮ್ಮು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನವನ್ನು ತಿಳಿಸುತ್ತದೆ. ಆದ್ದರಿಂದ ಈ ವಿಧಿ ರದ್ದುಪಡಿಸುವ ಮೂಲಕ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನ ಮಾನ ವಾಪಸ್ ಪಡೆಯಬೇಕೆಂಬ ವಾದವನ್ನು ಕಣಿವೆ ರಾಜ್ಯದ ಅನೇಕ ರಾಜಕೀಯ ಮುಖಂಡರು ವಿರೋಧಿಸಿದ್ದಾರೆ. ಆದರೆ, 370ನೇ ವಿಧಿ ಒಂದು ತಾತ್ಕಾಲಿಕ ಒಪ್ಪಂದ ಅಷ್ಟೇ.

ಏನಿದು 370ನೇ ವಿಧಿ?: ಸಂವಿಧಾನದ 21ನೇ ಪರಿಚ್ಛೇದಲ್ಲಿ ಹೇಳಿರುವ ಪ್ರಕಾರ ಜಮ್ಮು ಮತ್ತು ಕಶ್ಮೀರಕ್ಕೆ ನೀಡಿರುವ ಈ ಸೌಲಭ್ಯವು ತಾತ್ಕಾಲಿಕ ಮಾತ್ರ. ಈ ಸೌಲಭ್ಯವನ್ನು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲಷ್ಟೇ ಜಾರಿಗೆ ತರಲಾಗಿದೆ. ಸ್ವಾತಂತ್ರ್ಯ ಸಿಕ್ಕಾಗ ಜಮ್ಮು ಮತ್ತು ಕಾಶ್ಮೀರವನ್ನು ಆಳುತ್ತಿದ್ದ ರಾಜ ಭಾರತದೊಂದಿಗೆ ಸೇರಲು ಇಟ್ಟಿದ್ದ ಷರತ್ತಿನ ಆಧಾರದ ಮೇಲೆ ಈ ವಿಧಿ ರಚಿಸಲಾಗಿತ್ತು. [370ನೇ ವಿಧಿ ರದ್ದು ಮಾಡುವಂತಿಲ್ಲ]

ಈ ಸೌಲಭ್ಯ ಜಾರಿಗೆ ಬಂದಿದ್ದು, 1947ರಲ್ಲಿ. ಆಗ ಶೇಖ್ ಅಬ್ದುಲ್ಲಾ ಎಂಬುವರನ್ನು ಜಮ್ಮು ಕಾಶ್ಮೀರದ ಪ್ರಧಾನಿಯಾಗಿ ಮಹಾರಾಜಾ ಹರಿಸಿಂಗ್ ಹಾಗೂ ಜವಾಹರಲಾಲ್ ನೆಹರು ನೇಮಿಸಿದ್ದರು. ಅಂದು ರಾಜ್ಯದ ಪ್ರಧಾನಿಯಾಗಿ ಹೊಂದಿದ್ದ ಸ್ವಾಯತ್ತತೆಯನ್ನು ಎಲ್ಲ ಸಮಯಕ್ಕೂ ಉಳಿಸಿಕೊಳ್ಳುವ ಉದ್ದೇಶ ಹೊಂದಿದ್ದ ಅಬ್ದುಲ್ಲಾ 370ನೇ ವಿಧಿಯನ್ನು ಶಾಶ್ವತಗೊಳಿಸಬೇಕೆಂದು ವಾದಿಸಿದ್ದ. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಕೊಂಡಿರಲಿಲ್ಲ.

jammu-kashmir

ಗಡಿ ನಿಮಯಗಳಲ್ಲಿ: ಈ ವಿಧಿಯಡಿ ಜಮ್ಮು ಮತ್ತು ಕಾಶ್ಮೀರ ತನ್ನದೇ ಪ್ರತ್ಯೇಕ ಕಾನೂನುಗಳನ್ನು ಹೊಂದಿದೆ. ಈ ರಾಜ್ಯದಲ್ಲಿ ಆಸ್ತಿ ಹೊಂದಿರುವವರು ಪ್ರತ್ಯೇಕ ಕಾನೂನು ಪಾಲಿಸಬೇಕುಹಾಗೂ ಪ್ರತ್ಯೇಕ ನಾಗರಿಕತೆ ಹೊಂದಿರುತ್ತಾರೆ. ಅವರ ಮೂಲಭೂತ ಹಕ್ಕುಗಳೂ ಬೇರೆಯಾಗಿವೆ. ಈ ರಾಜ್ಯದ ಮೇಲೆ ಕೇಂದ್ರ ಸರ್ಕಾರಕ್ಕೆ ಕೇವಲ ರಕ್ಷಣೆ, ಸಂಪರ್ಕ ಹಾಗೂ ವಿದೇಶಾಂಗ ಸಂಬಂಧಗಳ ವಿಷಯದಲ್ಲಿ ಮಾತ್ರ ಅಧಿಕಾರವಿರುತ್ತದೆ. ಆದರೆ, ಜಮ್ಮು ಕಾಶ್ಮೀರ ಸರ್ಕಾರವು ಸಾಕಷ್ಟು ಅಧಿಕಾರ ಹೊಂದಿದ್ದರೂ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸುವಂತಿಲ್ಲ. ಈ ಕುರಿತು ಕೇಂದ್ರ ಸರ್ಕಾರದ ಜೊತೆ ಸಂಪರ್ಕಿಸಲೇಬೇಕು.

ರದ್ದುಗೊಳಿಸಲು ಒತ್ತಾಯ ಏಕೆ?: ಜಮ್ಮು ಕಾಶ್ಮೀರದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಅತ್ಯಂತ ಹಿಂದುಳಿದಿದೆ. ಇದಕ್ಕೆ 370ನೇ ವಿಧಿಯೇ ಕಾರಣ ಎಂದು ಈ ವಿಧಿ ರದ್ದುಪಡಿಸಲು ಆಗ್ರಹಿಸುತ್ತಿರುವವರು ವಾದ ಮಂಡಿಸುತ್ತಾರೆ. [ವಿಶ್ವಸಂಸ್ಥೆ ಕಸದ ಬುಟ್ಟಿ ಸೇರಿದ ಪಾಕ್ ಮನವಿ]

ಜಮ್ಮು ಕಾಶ್ಮೀರದಲ್ಲಿ ಹೊರ ರಾಜ್ಯದ ಯಾರೂ ಆಸ್ತಿ ಹಾಗೂ ಭೂಮಿ ಖರೀದಿಸುವಂತಿಲ್ಲ. ಈ ನಿಯಮವೇ ಜಮ್ಮು ಕಾಶ್ಮೀರವು ಭಾರತದಿಂದ ಬೇರೆ ಎಂಬ ಭಾವನೆ ಬೆಳೆಯಲು ಕಾರಣವಾಗಿದೆ. ಅಲ್ಲಿನವರಿಗೆ ಕೂಡ ತಾವು ಸಂಪೂರ್ಣ ಭಾರತೀಯರು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಹೊರತಾಗಿ ಬೇರೆಯವರು ಬಂಡವಾಳ ತೊಡಗಿಸಲು ಅವಕಾಶವಿಲ್ಲದ ಕಾರಣ ಇಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಇದಕ್ಕಾಗಿಯೇ ಸ್ಥಳೀಯರು ಶಸ್ತ್ರ ಕೈಗೆತ್ತಿಕೊಂಡು ಉಗ್ರರಾಗುತ್ತಿದ್ದಾರೆಂದು ವರದಿ ಹೇಳುತ್ತದೆ.

ಯಾವುದೇ ಸಂದರ್ಭ ರದ್ದುಪಡಿಸಬಹುದು: ಈ ನಿಬಂಧನೆಯು ಕೇವಲ ತಾತ್ಕಾಲಿಕವಾಗಿರುವ ಕಾರಣ ಯಾವುದೇ ಸಂದರ್ಭದಲ್ಲಿ ರದ್ದುಪಡಿಸಬಹುದು. ಈ ವಿಧಿ ರಚಿಸುವಾಗಲೇ ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಯಾವಾಗ ಬೇಕಾದರೂ ರದ್ದುಪಡಿಸಬಹುದೆಂದು ಸ್ಪಷ್ಟಪಡಿಸಲಾಗಿದೆ. ಭಾರತದ ರಾಷ್ಟ್ರಪತಿಯವರು ಒಂದು ಸಾರ್ವಜನಿಕ ಅಧಿಸೂಚನೆ ಹೊರಡಿಸುವ ಮೂಲಕ ರದ್ದುಪಡಿಸುವ ಅಧಿಕಾರ ಹೊಂದಿದ್ದಾರೆ. [ಜಮ್ಮು ಕಾಶ್ಮೀರ ಚುನಾವಣೆ ವೇಳಾ ಪಟ್ಟಿ]

ನ್ಯಾಶನಲ್ ಕಾನ್ಫರೆನ್ಸ್ ವಿರೋಧ ಏಕೆ?: ಒಂದು ವೇಳೆ 370ನೇ ವಿಧಿಯನ್ನು ರದ್ದುಪಡಿಸಿದರೆ ಕಣಿವೆ ರಾಜ್ಯದ ಜನರು ತಮ್ಮ ಗುರುತು ಕಳೆದುಕೊಳ್ಳುತ್ತಾರೆ. ಇದರಿಂದ ಜನರು ತಮ್ಮ ಸ್ವಾತಂತ್ರ್ಯವೇ ಕಳೆದುಹೋಗಿದೆ ಎಂದು ತಿಳಿಯುತ್ತಾರೆ ಎಂದು ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷವಾದ ನ್ಯಾಶನಲ್ ಕಾನ್ಫರೆನ್ಸ್ ವಾದಿಸುತ್ತಿದೆ.

ಆದರೆ, ಸಂವಿಧಾನ ತಜ್ಞರ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ಜನರು ಸಂಪೂರ್ಣ ಭಾರತೀಯರಾಗಬೇಕೆಂದರೆ ಈ ವಿಧಿಯನ್ನು ರದ್ದುಪಡಿಸಲೇಬೇಕು. ಆಗ ಮಾತ್ರ ರಾಜ್ಯದ ಜನರಲ್ಲಿ ಒಗ್ಗಟ್ಟಿನ ಭಾವನೆ ಬರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

English summary
Article 370 is the special status that has been granted to the state of Jammu and Kashmir. But many people says this special status has hampered the development of the state. So a cry is loud to repeal this article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X