ಒಳನುಸುಳುಕೋರರ ಶವ ತೆಗೆದುಕೊಂಡು ಹೋಗಲು ಪಾಕ್ ಸೇನೆಗೆ ಹೇಳಿದ ಭಾರತ
ನವದೆಹಲಿ, ಅಕ್ಟೋಬರ್ 22: ಇಬ್ಬರು 'ಒಳನುಸುಳುಕೋರರ' ಶವಗಳನ್ನು ತೆಗೆದುಕೊಳ್ಳುವಂತೆ ಭಾರತೀಯ ಸೇನೆಯು ಪಾಕಿಸ್ತಾನ ಸೇನೆಗೆ ಹೇಳಿದೆ. ಜಮ್ಮುವಿನ ಸುಂದರ್ ಬನಿ ವಲಯದ ಗಡಿ ನಿಯಂತ್ರಣ ರೇಖೆ ಬಳಿ ಗುಂಡಿನ ಚಕಮಕಿ ವೇಳೆ ಮೃತಪಟ್ಟಿದ್ದರು. ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನ ಮಾಡುತ್ತಿದ್ದ ವೇಳೆ ಹೊಡೆದುರುಳಿಸಲಾಗಿತ್ತು.
ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಪಾಕಿಸ್ತಾನಿ ಒಳನುಸುಳುಕೋರರು ಹಾಗೂ ಮೂವರು ಸೈನಿಕರು ಭಾನುವಾರ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದರು. ಗಡಿ ನಿಯಂತ್ರಣ ರೇಖೆ ಬಳಿ ಒಳ ನುಸುಳುವ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಈ ಒಳನುಸುಳುಕೋರರು ಬಾರ್ಡರ್ ಆಕ್ಷನ್ ಟೀಮ್ ನವರು ಎನ್ನಲಾಗಿದ್ದು, ಅದರಲ್ಲಿ ಪಾಕ್ ಸೇನೆಯ ಸೈನಿಕರು, ತರಬೇತಿ ಪಡೆದ ಉಗ್ರಗಾಮಿಗಳು ಆ ತಂಡದಲ್ಲಿ ಇದ್ದರು ಎಂದು ಹೆಸರು ಹೇಳಲು ಇಚ್ಛಿಸದ ಸೇನಾಧಿಕಾರಿ ತಿಳಿಸಿದ್ದಾರೆ.

ಪಾಕಿಸ್ತಾನ ಪ್ರಜೆಗಳಾದ ಮೃತರ ದೇಹಗಳನ್ನು ಪಡೆಯುವಂತೆ ಪಾಕ್ ಸೇನೆಗೆ ಅಧಿಕೃತ ಮಾಹಿತಿ ನೀಡಲಾಗಿದೆ. ಇದೇ ವೇಳೆ ಇಂಥ ಕೃತ್ಯಗಳಿಗೆ ಕುಮ್ಮಕ್ಕು ನೀಡದಂತೆ ಪಾಕಿಸ್ತಾನದ ಸೇನೆಗೆ ಗಂಭೀರ ಎಚ್ಚರಿಕೆಯನ್ನೂ ನೀಡಲಾಗಿದೆ. ಮೂಲಗಳ ಪ್ರಕಾರ, ಐದಾರು ಮಂದಿ ಪಾಕಿಸ್ತಾನಿ ಒಳನುಸುಳುಕೋರರು ಗಡಿ ನಿಯಂತ್ರಣ ರೇಖೆ ದಾಟಿ, ಸುಂದರ್ ಬನಿ ವಲಯದಲ್ಲಿ ಕಾವಲು ಕಾಯುತ್ತಿದ್ದ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.












Click it and Unblock the Notifications