ಏ. 1ರಂದು ಜಾರಿಗೊಳ್ಳಬೇಕಿದ್ದ ಜಿಎಸ್ ಟಿ ಡೆಡ್ ಲೈನ್ ಮುಂದೂಡಿಕೆ
ನವದೆಹಲಿ, ಜನವರಿ 16: ದೇಶಾದ್ಯಂತ ಏಕ ಸ್ವರೂಪದ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ ಟಿ) ಜಾರಿಗೆ ತರಬೇಕೆಂಬ ಕೇಂದ್ರ ಸರ್ಕಾರದ ಆಶಯಕ್ಕೆ ಮತ್ತೊಮ್ಮೆ ಹಿನ್ನಡೆ ಉಂಟಾಗಿದೆ. ಸೋಮವಾರ ನಡೆದ ರಾಜ್ಯ ಸರ್ಕಾರಗಳ ಹಾಗೂ ಕೇಂದ್ರದ ಪ್ರತಿನಿಧಿಗಳ 9ನೇ ಸಭೆಯು ವಿಫಲವಾದ ಹಿನ್ನೆಲೆಯಲ್ಲಿ ಏ. 1ರಿಂದ ಜಾರಿಗೊಳ್ಳಬೇಕಾಗಿದ್ದ ಜಿಎಸ್ ಟಿ ಮುಂದೂಡಲ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಸೇವಾ ತೆರಿಗೆಯ ಪಾಲನ್ನು ಹಂಚಿಕೊಳ್ಳುವ ಕುರಿತಂತೆ ಈಗಾಗಲೇ ಹಲವಾರು ರಾಜ್ಯ ಸರ್ಕಾರಗಳು ಆಕ್ಷೇಪವೆತ್ತಿವೆ. ಸದ್ಯಕ್ಕೆ ಸಿದ್ಧಪಡಿಸಲಾಗಿರುವ ಜಿಎಸ್ ಟಿ ಕರಡು ಪ್ರತಿಯ ಪ್ರಕಾರ, ಜಿಎಸ್ ಟಿ ಅಡಿಯಲ್ಲಿ ವಿವಿಧ ರಾಜ್ಯಗಳಲ್ಲಿ ಸಂಗ್ರಹವಾಗುವ ತೆರಿಗೆಯ ಸಿಂಹಪಾಲು ಕೇಂದ್ರಕ್ಕೆ ಸಾಗುತ್ತದೆ.

ಅಲ್ಲದೆ, ಜಿಎಸ್ ಟಿ ಜಾರಿಯಿಂದ ಯಾವುದೇ ರಾಜ್ಯ ಸರ್ಕಾರವು ಲೇವಿ ಸ್ವರೂಪದ ಯಾವುದೇ ರೀತಿಯ ಪ್ರತ್ಯೇಕ ತೆರಿಗೆಯನ್ನು ಹೇರಲು ಸಾಧ್ಯವಿಲ್ಲ. ಇದನ್ನು ಕೆಲ ರಾಜ್ಯ ಸರ್ಕಾರಗಳು ಆಕ್ಷೇಪಿಸಿರುವುದು ಹಾಗೂ ಜಿಎಸ್ ಟಿಯಲ್ಲಿ ರಾಜ್ಯ ಸರ್ಕಾರಗಳಿಗೆ ಸಮಾನ ತೆರಿಗೆ ಹಂಚಿಕೆಯಾಗಬೇಕು ಎಂದು ಪಟ್ಟು ಹಿಡಿದಿವೆ. ಆದರೆ, ಇದನ್ನು ಒಪ್ಪಲು ಕೇಂದ್ರ ಸರ್ಕಾರ ಸಿದ್ಧವಿಲ್ಲ. ಹಾಗಾಗಿ, ಇದು ಮುಗಿಯದ ಹಗ್ಗಜಗ್ಗಾಟ ಎನ್ನುವಂತಾಗಿದೆ.
ಒನ್ ಇಂಡಿಯಾ ಕಾಳಜಿ
ದೇಶಾದ್ಯಂತ ಏಕ ಸ್ವರೂಪದ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್ ಟಿ) ಜನ ಸಾಮಾನ್ಯರ ಮೇಲೆ ತೆರಿಗೆ ಹೊರೆ ಅಲ್ಪಪ್ರಮಾಣದಲ್ಲಿ ಇಳಿಮುಖವಾಗಲಿದೆ. ಅಲ್ಲದೆ, ದೇಶದ ಉದ್ದಗಲದಲ್ಲಿ ಯಾವುದೇ ಖರೀದಿ, ಯಾವುದೇ ಸಗಟು ವ್ಯವಹಾರ ನಡೆಸಿದರೂ ಏಕ ಸ್ವರೂಪದ ದರ ನೀಡುವಂಥ ಅನುಕೂಲ ಸಿಗಲಿದೆ. ಆದರೆ, ಕೇಂದ್ರ ಮತ್ತು ಕೆಲವಾರು ರಾಜ್ಯ ಸರ್ಕಾರಗಳ ನಡುವೆ ನಡೆಯುತ್ತಿರುವ ಜಿಎಸ್ ಟಿ ಜಟಾಪಟಿಯಿಂದಾಗಿ ಇದು ಜಾರಿಗೊಳ್ಳುವುದು ವಿಳಂಬವಾಗುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕೆಳಗಿನ ಕಮೆಂಟ್ ಗಳಲ್ಲಿ ತಿಳಿಸಿ.












Click it and Unblock the Notifications