ಗಾಂಧಿ ಕುಂಟುಬಗಳ ವಿರುದ್ಧ ಬಂಡಾಯದ ಸುಳಿವು ಕೊಟ್ಟ ಹರೀಶ್ ರಾವತ್
ಡೆಹ್ರಾಡೂನ್ (Dehradun) ಡಿಸೆಂಬರ್ 22: ಉತ್ತರಖಂಡ ವಿಧಾನಸಭೆ ಚುನಾವಣೆಗೂ ಮುನ್ನ, ಕಾಂಗ್ರೆಸ್ನ ಪ್ರಮುಖ ಟ್ರಬಲ್ ಶೂಟರ್ಗಳಲ್ಲಿ ಒಬ್ಬರಾದ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಶೀಘ್ರದಲ್ಲೇ ಪಕ್ಷದ ವಿರುದ್ಧ ಬಂಡಾಯ ಏಳುವ ಸುಳಿವು ನೀಡಿದ್ದಾರೆ. ಅವರು ಮಾಡಿದ ಸರಣಿ ಟ್ವೀಟ್ ನಿಂದ ಈ ಪ್ರಶ್ನೆಗಳು ಉದ್ಬವಿಸಿವೆ. ಟ್ವೀಟ್ಗಳಲ್ಲಿ ರಾವತ್ ಅವರು ಗಾಂಧಿ ಕುಟುಂಬದ ವಿರುದ್ಧ ಸಿಡಿದೆದ್ದಿದ್ದಾರೆ.
ಹರೀಶ್ ರಾವತ್ ಗಾಂಧಿಯವರಿಗೆ ಹತ್ತಿರವಾಗಿದ್ದರೂ ಕಾಂಗ್ರೆಸ್ ನಾಯಕತ್ವ ಅವರನ್ನು ಕೈಬಿಟ್ಟಿದೆ ಎಂದು ಆರೋಪಿಸಿದ್ದಾರೆ. "ನಾವು ಈ ಚುನಾವಣೆಯ ಸಮುದ್ರದಲ್ಲಿ ಈಜಬೇಕು. ಆದರೆ ನನ್ನನ್ನು ಬೆಂಬಲಿಸುವ ಬದಲು ಸಂಘಟನೆಯು ನನಗೆ ಬೆನ್ನು ತಿರುಗಿಸಿದೆ ಅಥವಾ ನಕಾರಾತ್ಮಕ ಪಾತ್ರವನ್ನು ವಹಿಸುತ್ತಿದೆ" ಎಂದು ಹರೀಶ್ ರಾವತ್ ಬರೆದಿದ್ದಾರೆ.
"ನಾವು ಸಂಚರಿಸಬೇಕಾದಗ ಅನೇಕ ಮೊಸಳೆಯಂತಹ (ಪರಭಕ್ಷಕ) ಶಕ್ತಿಗಳು ಸಮುದ್ರದಲ್ಲಿ ಇರುತ್ತವೆ. ಆದರೆ ನಾನು ಯಾರನ್ನು ಅನುಸರಿಸಬೇಕೋ ಅವರ ಜನರು ನನ್ನ ಕೈಕಾಲುಗಳನ್ನು ಕಟ್ಟಿದ್ದಾರೆ. ನನಗೆ ಅನಿಸುತ್ತಿದೆ ಈ ವಿಚಾರ ತುಂಬಾ ದೂರ ಹೋಗಿದೆ. ಹರೀಶ್ ರಾವತ್(73) ನೀವು ಸಾಕಷ್ಟು ಮಾಡಿದ್ದೀರಿ, ಇದು ವಿಶ್ರಾಂತಿ ಸಮಯ" ಎಂದು ಅವರು ಬರೆದಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ " ನಾನು ದುರ್ಬಲನಲ್ಲ ಅಥವಾ ಸವಾಲುಗಳಿಂದ ಓಡಿಹೋಗುವುದಿಲ್ಲ. ನಾನು ಗೊಂದಲದಲ್ಲಿದ್ದೇನೆ. ಹೊಸ ವರ್ಷವು ನನಗೆ ದಾರಿಯನ್ನು ತೋರಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಭಗವಂತ ಕೇದಾರನಾಥ (ಶಿವನು) ನನಗೆ ದಾರಿ ತೋರಿಸುತ್ತಾನೆ ಎಂಬ ವಿಶ್ವಾಸವಿದೆ" ಎಂದು ಬರೆದ ರಾವತ್ ತಾವು ಅತೃಪ್ತನಾಗಿದ್ದು ಮತ್ತು ತನ್ನ ಭವಿಷ್ಯದ ಬಗ್ಗೆ ಪರಿಶೀಲಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಉತ್ತರಾಖಂಡ್ ಚುನಾವಣೆಗೆ ಮುನ್ನ ರಾವತ್ ಅವರ ಎಚ್ಚರಿಕೆ ಜೋರಾಗಿ ಮತ್ತು ಸ್ಪಷ್ಟವಾಗಿದೆ.
ಎರಡು ರಾಜ್ಯಗಳಲ್ಲಿ ಎದುರಾಗಲಿರುವ ಚುನಾವಣಾ ಒತ್ತಡಕ್ಕೆ ಒಳಗಾಗಿರುವ, ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹಾಗೂ ಉತ್ತರಾಖಂಡದ ಮಾಜಿ ಸಿಎಂ ಹರೀಶ್ ರಾವತ್ ಹಲವಾರು ಬಾರಿ ನವದೆಹಲಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ರಾವತ್ಗೆ ಪಂಜಾಬ್ನಲ್ಲಿನ ಒಳಜಗಳವನ್ನು ಸರಿಪಡಿಸಿ, ತಮ್ಮ ತವರು ರಾಜ್ಯ ಉತ್ತರಾಖಂಡದಲ್ಲಿ ಮುಂಬರುವ ಚುನಾವಣೆಗೆ ತಯಾರಿ ಮಾಡಿಕೊಳ್ಳುವುದು ಹೊಸ ಸವಾಲಾಗಿ ಪರಿಣಮಿಸಿದೆ.
ಈ ಬಗ್ಗೆ ಮಾತುಕತೆಗಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಹರೀಶ್ ರಾವತ್, ''ನನಗೆ ಸ್ವಲ್ಪ ಕಾಲಾವಕಾಶ ಬೇಕು, ಪಕ್ಷದ ಹೈಕಮಾಂಡ್ ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ "ಎಂದು ಹೇಳಿದ್ದರು. ಜೊತೆಗೆ ಅದಾಗಲೇ ಉತ್ತರಾಖಂಡದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿ ಮಾತನಾಡಿದ್ದ ಅವರು ಉಸ್ತುವಾರಿ ಸ್ಥಾನದಿಂದ ಕೊಂಚ ದೂರಸರಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು.
ಪಕ್ಷದ ಮೂಲಗಳ ಪ್ರಕಾರ, ಉತ್ತರಾಖಂಡದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷಗಿರಿ ಜವಾಬ್ದಾರಿ ಹೊತ್ತಿರುವ ರಾವತ್ ಅವರು ಗುಡ್ಡಗಾಡು ರಾಜ್ಯದಲ್ಲಿ ಮುಂಬರುವ ಚುನಾವಣೆಯ ಕಡೆಗೆ ಗಮನಹರಿಸಲು ಬಯಸುವುದಾಗಿ ಪಕ್ಷದ ಮುಖ್ಯಸ್ಥರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಆದರೂ ಪಂಜಾಬ್ ಹಾಗೂ ಉತ್ತರಾಖಂಡ ರಾಜ್ಯಗಳ ವಿಧಾನಸಭಾ ಚುನಾವಣೆ ಒಂದೇ ಸಮಯಕ್ಕೆ ಎದುರಾಗುವ ಕಾರಣ ರಾವತ್ ಪಂಜಾಬ್ ಕಾಂಗ್ರೆಸ್ ಉಸ್ತುವಾರಿಯಿಂದ ದೂರ ಸರಿಯುವುದಾಗಿ ಹಾಗೂ ಆ ಜವಾಬ್ದಾರಿಯನ್ನು ಮತ್ತೊಬ್ಬರ ಹೆಗಲಿಗೆ ಹೊರಿಸಿವುದಾಗಿ ಹೇಳುತ್ತಿದ್ದಾರೆ. ಈ ಜವಾಬ್ದಾರಿಯಿಂದ ಕೊಂಚ ದೂರ ಸರಿದು ತನ್ನ ತವರು ರಾಜ್ಯದಲ್ಲಿ ನಡೆಯುವ ಚುನಾವಣೆಯ ಕಡೆಗೆ ಗಮನ ಹರಿಸುವುದು ಅವರಿಗೆ ಈಗ ಮುಖ್ಯವಾಗಿ ಕಾಣುತ್ತಿದೆ.
ಪಕ್ಷದ ಹೈಕಮಾಂಡ್ ಏನಾದರೂ ನೀವೆ ಪಂಜಾಬ್ ಚುನಾವಣಾ ಉಸ್ತುವಾರಿ ಸ್ಥಾನದಲ್ಲಿ ಮುಂದುವರೆಯಿರಿ ಎಂದು ಹೇಳಿದರೆ ನಾನು ಸಂತೋಷದಿಂದಲೇ ಮುಂದುವರೆಯುತ್ತೇನೆ. ಪಂಜಾಬ್ನಲ್ಲೂ ಸಹ ಮತ್ತೊಮ್ಮೆ ನಾವು ಅಧಿಕಾರಕ್ಕೆ ಏರಲೇ ಬೇಕು, ಇದರ ಮಧ್ಯೆಯೂ ನನ್ನ ಉತ್ತರಾಖಂಡ ರಾಜ್ಯದಲ್ಲಿಯೂ ಸಹ ಬಿಜೆಪಿಯನ್ನು ಸೋಲಿಸಿ ಮತ್ತೆ ಅಧಿಕಾರಕ್ಕೆ ಬರಲೇ ಬೇಕಿರುವ ಗುರಿ ನನ್ನ ಮುಂದಿದೆ ಎಂದು ರಾವತ್ ಹೇಳಿಕೊಂಡಿದ್ದಾರೆ. ಆದರೆ ಪ್ರಸ್ತುತ ಪಂಜಾಬಿನಲ್ಲಿ ಕಾಂಗ್ರೆಸ್ ಪಕ್ಷದ ಮುಸುಕಿನ ಗುದ್ದಾಟ ತಾರಕಕ್ಕೆ ಏರಿದೆ, ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ನಡುವಿನ ಕಿತ್ತಾಟವನ್ನು ಹರೀಶ್ ರಾವತ್ ಕೊಂಚ ಮಟ್ಟಿಗೆ ಶಮನಗೊಳಿಸಿದ್ದರು. ಈ ನಡುವೆ ಗಾಂಧಿ ಕುಟುಂಬದ ವಿರುದ್ಧ ಅವರು ಬಂಡಾಯ ಏಳುವ ಸುಳಿವು ನೀಡಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ, ಪಂಜಾಬ್ ಮತ್ತು ಮಣಿಪುರ ರಾಜ್ಯಗಳ ಸರ್ಕಾರದ ಅವಧಿ 2022ರ ಆರಂಭದಲ್ಲಿಯೇ ಪೂರ್ಣಗೊಳ್ಳಲಿದೆ. ಜನವರಿ ಅಂತ್ಯ ಅಥವಾ ಫೆಬ್ರವರಿಯಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ನೀರಿಕ್ಷೆ ಇದೆ.