13 ಜನರಲ್ಲಿ ಸಿಕ್ಕಿದ್ದು ಆರು ಮಂದಿಯ ದೇಹ, ಉಳಿದ 7 ಮಂದಿಯದ್ದು ಛಿದ್ರಗೊಂಡ ಅಂಗಾಂಗ
ನವದೆಹಲಿ, ಜೂನ್ 20: ಇದೇ ತಿಂಗಳ ಆರಂಭದಲ್ಲಿ ನಡೆದ ಎಎನ್ 32 ವಿಮಾನ ಅಪಘಾತದಲ್ಲಿ ಮೃತಪಟ್ಟ ವಾಯುಪಡೆಯ 13 ಸಿಬ್ಬಂದಿ ಪೈಕಿ ಆರು ಮಂದಿಯ ಮೃತದೇಹವನ್ನು ಕೊನೆಗೂ ಘಟನೆ ನಡೆದ ಸ್ಥಳದಿಂದ ಸಾಗಿಸುವಲ್ಲಿ ಐಎಎಫ್ ಯಶಸ್ವಿಯಾಗಿದೆ. ಆದರೆ, ಉಳಿದ ಏಳು ಮಂದಿಯ ದೇಹದ ಛಿದ್ರಗೊಂಡ ಅಂಗಾಂಗಗಳು ಮಾತ್ರ ದೊರಕಿವೆ.
ಜೂನ್ 3ರಂದು ನಡೆದ ಅಪಘಾತದಲ್ಲಿ ವಿಮಾನದಲ್ಲಿದ್ದ 13 ಮಂದಿಯಲ್ಲಿ ಯಾರೂ ಬದುಕುಳಿದಿಲ್ಲ ಎಂದು ಭಾರತೀಯ ವಾಯು ಸೇನೆ ಖಚಿತಪಡಿಸಿದ ಒಂದು ವಾರದ ಬಳಿಕ ಅವರ ಮೃತದೇಹಗಳನ್ನು ಹೊರತೆಗೆಯಲು ಸಾಧ್ಯವಾಗಿದೆ.
ಐಎಎಫ್ನ ಎಎಎನ್-32 ಜೂನ್ 3ರಂದು ನಾಪತ್ತೆಯಾಗಿತ್ತು. ಅಸ್ಸಾಂನ ಜೊರ್ಹಾತ್ನಿಂದ ಅರುಣಾಚಲ ಪ್ರದೇಶದ ಮೆಂಚುಕಾ ವಾಯುನೆಲೆಗೆ ಹೊರಟಿದ್ದ ವಿಮಾನ ಸುಮಾರು 30 ನಿಮಿಷಗಳಲ್ಲಿ ಸಂಪರ್ಕ ಕಡಿದುಕೊಂಡಿತ್ತು. ಎಂಟು ದಿನಗಳ ಸತತ ಹುಡುಕಾಟದ ಬಳಿಕ ಗಟ್ಟೆ ಗ್ರಾಮದ ಸಮೀಪದ 12,000 ಅಡಿ ಎತ್ತರದ ಪರ್ವತ ಪ್ರದೇಶದಲ್ಲಿ ವಿಮಾನದ ಅವಶೇಷ ಪತ್ತೆಯಾಗಿತ್ತು.

ಪ್ರತಿಕೂಲ ಹವಾಮಾನ, ಬೆಟ್ಟಗುಡ್ಡ ಹಾಗೂ ಅರಣ್ಯ ಪ್ರದೇಶದಿಂದ ತುಂಬಿರುವ ಈ ಭಾಗಕ್ಕೆ ತಲುಪಿ, ಮೃತದೇಹಗಳನ್ನು ಹುಡುಕಿ ತರಲು ಐಎಎಫ್ ಹಾಗೂ ರಕ್ಷಣಾ ಸಿಬ್ಬಂದಿ ಹರಸಾಹಸಪಟ್ಟಿದ್ದರು.
ಆರು ಮಂದಿಯ ಮೃತದೇಹಗಳನ್ನು ಜೂನ್ 19ರ ಸಂಜೆ 5 ಗಂಟೆ ವೇಳೆಗೆ ಏರ್ಲಿಫ್ಟ್ ಮಾಡಲಾಯಿತು. ಆದರೆ, ಬಾಕಿ ಇರುವ ಏಳು ಮಂದಿಯ ಅಂಗಾಂಗಗಳನ್ನು ತರುವ ಕಾರ್ಯ ಇನ್ನೂ ನಡೆಯುತ್ತಿದೆ ಎಂದು ಸಿಯಾಂಗ್ ಉಪ ಆಯುಕ್ತ ರಾಜೀವ್ ತಾಕುಟ್ ತಿಳಿಸಿದ್ದಾರೆ.












Click it and Unblock the Notifications