ಸಿಖ್ಖರ ಗೋಲ್ಡನ್ ಟೆಂಪಲ್ ಗೆ 160ಕೆಜಿ ಚಿನ್ನದ ಲೇಪನ!
ಅಮೃತ್ ಸರ್, ಜುಲೈ 17: ಸಿಖ್ಖರ ಪವಿತ್ರ ದೇಗುಲ ಅಮೃತ್ಸರದಲ್ಲಿರುವ 'ಗೋಲ್ಡನ್ ಟೆಂಪಲ್' ಗೆ ಇನ್ನಷ್ಟು ಮೆರಗು ನೀಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಸುಮಾರು 160 ಕೆಜಿಗೂ ಅಧಿಕ ಚಿನ್ನದ ಲೇಪನ ಪಡೆಯಲಿರುವ ಚಿನ್ನದ ದೇಗುಲವು ಇನ್ನಷ್ಟು ಹೊಳೆಯಲಿದೆ.
ಗೋಲ್ಡನ್ ಟೆಂಪಲ್ನ ನಾಲ್ಕು ಮುಖ್ಯದ್ವಾರದಲ್ಲಿ ಚಿನ್ನದ ಲೇಪನ ಮಾಡುವ ಕಾರ್ಯ ನಡೆಯುತ್ತಿದೆ. ಸುಮಾರು 50 ಕೋಟಿ ವೆಚ್ಚದಲ್ಲಿ 160 ಕೆಜಿ ಚಿನ್ನದ ಲೇಪನ ಕಾರ್ಯ ಹಾಗೂ ಪವಿತ್ರ ಕೊಳದಲ್ಲಿರುವ ಹರ್ಮಂದರ್ ಸಾಹೀಬ್ ಗೊಮ್ಮಟಕ್ಕೂ ಲೇಪನ ಮಾಡಲಾಗುತ್ತಿದೆ.
ಹಲವಾರು ವರ್ಷಗಳ ಇತಿಹಾಸವಿರುವ ಈ ದೇಗುಲಕ್ಕೆ ದಿನನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ. ನಾಲ್ಕು ಮುಖ್ಯದ್ವಾರಗಳು ಹಾಗೂ ಗೊಮ್ಮಟಗಳಿಗೆ ಸುಮಾರು 40 ಕೆಜಿ ಚಿನ್ನ ಬಳಸಲಾಗುತ್ತದೆ. ಸ್ವಯಂ ಸೇವಕರ ನೆರವಿನಿಂದ ಏಪ್ರಿಲ್ ತಿಂಗಳಿನಿಂದಲೆ ಮುಖ್ಯದ್ವಾರದ ಲೇಪನ ಕಾರ್ಯ ನಡೆಸಲಾಗುತ್ತಿದೆ ಎಂದು ಶಿರೋಮಣಿ ಗುರ್ದ್ವಾರ ಪ್ರಬಂಧಕ ಸಮಿತಿಯ ವಕ್ತಾರರಾದ ದಿಲ್ಜಿತ್ ಸಿಂಗ್ ಬೇಡಿ ಹೇಳಿದ್ದಾರೆ.

ಸಿಖ್ ಸಮುದಾಯದ 5ನೇ ಗುರು ಅರ್ಜುನ್ ದೇವಜೀ 16ನೇ ಶತಮಾನದಲ್ಲಿ ಗುರುದ್ವಾರ ಕಟ್ಟಿಸಿದರು. ಸಿಖ್ ಧರ್ಮೀಯರ ಪವಿತ್ರ ಗ್ರಂಥವಾದ ಆದಿ ಗ್ರಂಥವನ್ನು ಈ ಗುರುದ್ವಾರಾದಲ್ಲಿ ಇಟ್ಟಿರುತ್ತಾರೆ. ಈ ದೇಗುಲದ ನಾಲ್ಕು ದ್ವಾರಗಳು ಭ್ರಾತೃತ್ವ ಮತ್ತು ಸಮಾನತೆಯನ್ನು ಸೂಚಿಸುತ್ತವೆ.
19ನೇ ಶತಮಾನದ ಪ್ರಾರಂಭದಲ್ಲಿ ಮಹಾರಾಜ ರಂಜಿತ್ ಸಿಂಗ್ 16.39 ಲಕ್ಷ ನೀಡಿ ಚಿನ್ನದ ಮೆರುಗು ಇನ್ನಷ್ಟು ಹೆಚ್ಚಿಸಿದರು. ಮೊಹಮ್ಮದ್ ಖಾನ್ ಎಂಬ ಕುಶಲಕರ್ಮಿ ಮೊಟ್ಟಮೊದಲ ಬಾರಿಗೆ ಇಲ್ಲಿನ ದೇಗುಲದ ಪ್ರಮುಖ ಭಾಗಗಳಿಗೆ ಚಿನ್ನದ ಲೇಪನ ಮಾಡುವ ಕಾರ್ಯ ಕೈಗೊಂಡವರು. 1984ರ ಆಪರೇಷನ್ ಬ್ಲೂಸ್ಟಾರ್ ಘಟನೆ ನಂತರ ದೇಶ ವಿದೇಶಗಳಲ್ಲಿರುವ ಸಿಖ್ ಸಂಘಟನೆಗಳು, ಗುರು ನಿಷ್ಕಾಮ್ ಸೇವಕ್ ಜಾಥಾ ವತಿಯಿಂದ ಮತ್ತೊಮ್ಮೆ ಚಿನ್ನದ ಲೇಪನ ಮಾಡುವ ಕಾರ್ಯ ಮೊದಲು ಗೊಂಡಿತು.












Click it and Unblock the Notifications