Jharkhand Elections: ತಲೆಕೆಳಗಾಗಿ ನೇತುಹಾಕುತ್ತೇವೆ; ಬಾಂಗ್ಲಾದೇಶಿ ನುಸುಳುಕೋರರಿಗೆ ಅಮಿತ್ ಶಾ ಎಚ್ಚರಿಕೆ
ಜಾರ್ಖಂಡ್ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ. ಬಿಜೆಪಿ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದು ಭಾನುವಾರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಗೃಹ ಸಚಿವ ಅಮಿತ್ ಶಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ತಮ್ಮ ಪ್ರಚಾರ ಸಭೆಯಲ್ಲಿ ಬಾಂಗ್ಲಾದೇಶಿ ನುಸುಳುಕೋರರಿಗೆ ಎಚ್ಚರಿಕೆ ಕೊಟ್ಟಿದ್ದು, ಅಕ್ರಮ ನುಸುಳುಕೋರರನ್ನು ಮಟ್ಟ ಹಾಕಲು ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಜಾರ್ಖಂಡ್ ರಾಜ್ಯದಲ್ಲಿ ಪ್ರಮುಖ ಸಮಸ್ಯೆಗಳಾದ ಅಕ್ರಮ ವಲಸೆ ಮತ್ತು ರಾಜ್ಯದ ಬುಡಕಟ್ಟು ಜನಸಂಖ್ಯೆಗೆ ಅದರ ಜನಸಂಖ್ಯಾ ಪರಿಣಾಮಗಳ ವಿಷಯವನ್ನು ಪ್ರಸ್ತಾಪಿಸಿದ ಅವರು, ಬಾಂಗ್ಲಾದೇಶಿ ನುಸುಳುಕೋರರಿಂದ ಬುಡಕಟ್ಟು ಜನಸಂಖ್ಯೆಯಲ್ಲಿ ತೀವ್ರ ಕುಸಿತ ಉಂಟಾಗುತ್ತಿದೆ, ಬುಡಕಟ್ಟು ಜನರಿಗೆ ಸೇರಿರುವ ಭೂಮಿಯನ್ನು ನುಸುಳುಕೋರರಿಗೆ ಹಸ್ತಾಂತರಿಸುವುದನ್ನು ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

ಬರ್ಕಥಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಜಾರ್ಖಂಡ್ನಲ್ಲಿ ಮಹಿಳೆಯರಿಗೆ ಚಿತ್ರಹಿಂಸೆ ನೀಡಿದ ನುಸುಳುಕೋರರನ್ನು ತಲೆಕೆಳಗಾಗಿ ನೇತುಹಾಕಲಾಗುವುದು. ನಾವು ಅಧಿಕಾರಕ್ಕೆ ಬಂದರೆ ಬಾಂಗ್ಲಾದೇಶ ನುಸುಳುಕೋರರನ್ನು ತಡೆಯಲಾಗುತ್ತದೆ ಎಂದು ಭರವಸೆ ನೀಡಿದರು.
ಜೆಎಂಎಂ ವಿರುದ್ಧ ಅಮಿತ್ ಶಾ ಆಕ್ರೋಶ
ಹೇಮಂತ್ ಸೊರೇನ್ ಸರ್ಕಾರದ ಅವಧಿಯಲ್ಲಿ ಜಾರ್ಖಂಡ್ನ ಆದಿವಾಸಿಗಳು ಸುರಕ್ಷಿತವಾಗಿಲ್ಲ. ಈ ಸರ್ಕಾರ ನುಸುಳುಕೋರರಿಗೆ ಆಶ್ರಯ ನೀಡುತ್ತಿದೆ. ನುಸುಳುಕೋರರು ಇವರಿಗೆ ಮತಬ್ಯಾಂಕ್ ಆಗಿದೆ. ಅಕ್ರಮ ವಲಸಿಗರಿಂದ ರಾಜ್ಯದಲ್ಲಿ ಆದಿವಾಸಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದರು.
ನುಸುಳುಕೋರರು ಜಾರ್ಖಂಡ್ಗೆ ಬಂದು ಹೆಣ್ಣು ಮಕ್ಕಳಿಗೆ ಆಮಿಷವೊಡ್ಡುತ್ತಿದ್ದಾರೆ. ಮದುವೆ ಮಾಡಿಕೊಂಡು ಇಲ್ಲಿನವರ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇದನ್ನು ಕೂಡಲೇ ತಡೆಯದೇ ಇದ್ದಲ್ಲ ಜಾರ್ಖಂಡ್ನ ಸಂಸ್ಕೃತಿಯಾಗಲೀ ಇಲ್ಲಿರುವ ಉದ್ಯೋಗ, ಭೂಮಿ ಅಥವಾ ಹೆಣ್ಣುಮಕ್ಕಳೂ ಸುರಕ್ಷಿತವಾಗಿರುವುದಿಲ್ಲ. ನಾವು ಅಧಿಕಾರಕ್ಕೆ ಬಂದರೆ ನುಸುಳುಕೋರರನ್ನು ವಾಪಸ್ ಕಳಿಸುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು ಇಲ್ಲಿನ ಮಹಿಳೆಯರಿಂದ ಕಿತ್ತುಕೊಂಡಿರುವ ಭೂಮಿಯನ್ನು ವಾಪಸ್ ಕೊಡಿಸಲು ಕಾನೂನು ತರಲಾಗುವುದು. ಹೇಮಂತ್ ಸೊರೇನ್ ಜಾರ್ಖಂಡ್ನಲ್ಲಿ ಮಹಿಳೆಯರಿಗೆ ಭದ್ರತೆ ಒದಗಿಸುವಲ್ಲಿ ವಿಫಲವಾಗಿದ್ದೀರಾ, ಬಿಜೆಪಿ ಅಧಿಕಾರಕ್ಕೆ ಬಂದು ರೊಟ್ಟಿ, ಹೆಣ್ಣು ಮಕ್ಕಳು ಮತ್ತು ಭೂಮಿಯನ್ನು ರಕ್ಷಿಸುತ್ತದೆ ಎಂದು ಹೇಳಿದರು.
ಜಾರ್ಖಂಡ್ನಲ್ಲಿ ಪ್ರತಿ ಪದವೀಧರ ಮತ್ತು ಸ್ನಾತಕೋತ್ತರ ಪದವೀಧರ ಯುವಕರಿಗೆ ತಿಂಗಳಿಗೆ ₹ 2,000 ನೀಡಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಿದ ಅಮಿತ್ ಶಾ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, 2 ಲಕ್ಷದ 85 ಸಾವಿರ ಸರ್ಕಾರಿ ಉದ್ಯೋಗಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಸೋಮವಾರ ಮೋದಿ ಭೇಟಿ
ಜಾರ್ಖಂಡ್ನಲ್ಲಿ ಬಿಜೆಪಿ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಸೋಮವಾರ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.












Click it and Unblock the Notifications