ಕಾಂಗ್ರೆಸ್ನಿಂದ ಕೀಳು ಮಟ್ಟದ ಪ್ರಚಾರ ತಂತ್ರ: ಅಮಿತ್ ಷಾ
ಗುಜರಾತ್, ಡಿಸೆಂಬರ್ 18: ಈ ಚುನಾವಣಾ ಗೆಲುವು ಜಾತಿವಾದ, ವಂಶವಾದ, ಮತಗಳಿಗಾಗಿ ತುಷ್ಠೀಕರಣದ ವಿರುದ್ಧ ಅಭಿವೃದ್ಧಿ ರಾಜಕೀಯ ಸಾಧಿಸಿದ ಗೆಲುವು ಎಂದು ಅಮಿತ್ ಷಾ ಅವರು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸಾಧಿಸಿರುವ ಗೆಲುವನ್ನು ವಿಷ್ಲೇಶಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನ ಜಾತೀವಾದದ ವಿರುದ್ಧ, ವಂಶವಾದ ಹಾಗೂ ಮತಕ್ಕಾಗಿ ಕೋಮುಗಳ ಓಲೈಕೆಯ ವಿರುದ್ಧ ಜನ ಈ ಚುನಾವಣೆಯಲ್ಲಿ ಮತ ಹಾಕಿದ್ದಾರೆ, ಈ ಎರಡು ರಾಜ್ಯಗಳ ಗೆಲುವಿನ ಮೂಲಕ ನರೇಂದ್ರ ಮೋದಿಯವರ ವಿಕಾಸವಾದದ ನಿಲುವಿಗೆ ಜನ ಬೆಂಬಲ ಸೂಚಿಸಿದ್ದಾರೆ ಎಂದರು.
ಬಿಜೆಪಿಗೆ ಮತ ನೀಡುವ ಮೂಲಕ ಕೇಂದ್ರ ಸರ್ಕಾರದ ವಿಕಾಸವಾದದ ಜೊತೆಗೆ ನಾವಿದ್ದೇವೆ ಎಂಬುದನ್ನು ಜನ ಸ್ಪಷ್ಟವಾಗಿ ಹೇಳಿದ್ದಾರೆ. ಈ ಗೆಲುವಿಗೆ ಕಾರಣವಾದ ಎಲ್ಲ ಬಿಜೆಪಿ ಕಾರ್ಯಕರ್ತರಿಗೆ ಮನಃಪೂರ್ವಕ ವಂದನೆಗಳು ಎಂದು ಅವರು ಹೇಳಿದರು.

ಸುಲಭದ ಗೆಲುವು ಇದು
ಗುಜರಾತ್ನಲ್ಲಿ ಕಳೆದ ಚುನಾವಣೆಗಿಂತಲೂ ಬಿಜೆಪಿ ಕಡಿಮೆ ಸ್ಥಾನ ಪಡೆದುದರ ಬಗ್ಗೆ ಮಾತನಾಡಿದ ಅಮಿತ್ ಷಾ ಕಾಂಗ್ರೆಸ್ ಪಕ್ಷ ತನ್ನ ಪ್ರಚಾರದ ಸ್ಥರವನ್ನು ತೀರಾ ಕೆಳಮಟ್ಟಕ್ಕೆ ತೆಗೆದುಕೊಂಡುಹೋದುದರ ಪರಿಣಾಮ ಕೆಲವು ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು ಎಂದರು. ಮಣಿಶಂಕರ್ ಅಯ್ಯರ್ ಅವರ 'ನೀಚ್ ಆದ್ಮಿ' ಮಾತನ್ನು ನೆನಪು ಮಾಡಿಸಿದ ಅಮಿತ್ ಷಾ 'ಅವರು ಪ್ರಧಾನಿ ಅವರನ್ನು ಕೆಟ್ಟ ಭಾಷೆ ಬಳಸಿ ಜರಿದರು ಎಂದರು. ಸ್ಥಾನ ಕಡಿಮೆಯಾಗಿದ್ದರೂ ಕಳೆದ ಬಾರಿಗಿಂತಲೂ 8% ಹೆಚ್ಚಿನ ಮತವನ್ನು ಬಿಜೆಪಿ ಗಳಿಸುವ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿದೆ ಎಂದರು. ಸುಲಭದ ಗೆಲವು ಇದು ಯಾವುದೇ ಅಡ್ಡಿ ಆತಂಕ ಇಲ್ಲದೆ ಗೆದ್ದಿದ್ದೇವೆ ಎಂದರು.

ಬಹುತೇಕ ಕಾಂಗ್ರೆಸ್ ಮುಖಂಡರ ಸೋಲು
ಪಾಟೀದಾರ್ ಅನಾಮತ್ ಚಳವಳಿ ನಾಯಕ ಹಾರ್ದಿಕ್ ಪಟೇಲ್ ಅವರ ಪರಿಣಾಮದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು 'ಆ ಸಮುದಾಯದ ಜನಸಂಖ್ಯೆ ಹೆಚ್ಚಿದ್ದ ಕ್ಷೇತ್ರಗಳಲ್ಲೇ ಬಿಜೆಪಿ ಗೆಲುವು ಸಾಧಿಸಿದೆ ಎಂದರು. ಕಾಂಗ್ರೆಸ್ ಗೆ ಟಾಂಗ್ ನಿಡಿದ ಅಮಿತ್ ಷಾ ಕಾಂಗ್ರೆಸ್ ನ ಬಹುತೇಕ ಪ್ರಮುಖ ಮುಖಂಡರು ಚುನಾವಣೆಯಲ್ಲಿ ಸೋತಿರುವುದು ಕಾಂಗ್ರೆಸ್ ಅನ್ನು ಜನ ತಿರಸ್ಕರಿಸಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಎಂದರು.

ಮುಖ್ಯಮಂತ್ರಿ ಘೋಷಣೆ ನಾಳೆ
ಸತತ 6ನೇ ಬಾರಿ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿರುವುದಕ್ಕೆ ಇಲ್ಲಿನ ಜನರ ಅಭಿವೃದ್ಧಿಪರ ನಿಲುವು, ಕಾರ್ಯಕರ್ತರ ಅವಿರತ ದುಡಿಮೆಯೇ ಕಾರಣ ಎಂದ ಅವರು ಗುಜರಾತ್ ಆಡಳಿತದ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬುದನ್ನು ನಾಳೆ ನಡೆಯುವ ಪಕ್ಷದ ಮುಖಂಡರ ಸಭೆಯ ಬಳಿಕ ಘೋಷಣೆ ಮಾಡಲಾಗುತ್ತದೆ ಎಂದರು.

ಲೋಕಸಭೆಯಲ್ಲಿ ಭಾರಿ ಜನಮತ ಪಡೆಯಲಿದ್ದೇವೆ
ಈ ಎರಡು ಗೆಲುವಿನ ನಂತರ ಬಿಜೆಪಿ ಮತ್ತು ಮಿತ್ರಪಕ್ಷಗಳ ಆಡಳಿತವಿರುವ ರಾಜ್ಯಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ, ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ 8 ರಾಜ್ಯಗಳ ಚುನಾವಣೆ ಇದ್ದು ಅಲ್ಲಿಯೂ ಬಿಜೆಪಿ ಗೆಲವು ಸಾಧಿಸಿ ಲೋಕಸಭೆ ಚುನಾವಣೆಯಷ್ಟರಲ್ಲಿ ಇನ್ನಷ್ಟು ಬಲಗೊಳ್ಳಲಿದ್ದೇವೆ ಎಂದರು. ಕಳೆದ ಬಾರಿಯ ಲೋಕಸಭೆ ಚುನಾವಣೆಗಿಂತಲೂ ಹೆಚ್ಚಿನ ಜನಮತ ಪಡೆಯಲಿದ್ದೇವೆ ಎಂದ ಅಮಿತ್ ಷಾ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಗೆಲುವಿನಲ್ಲಿ ಬಹುಮುಖ್ಯ ಪಾತ್ರವಹಿಸಿದ ಬಿಜೆಪಿ ಕಾರ್ಯಕರ್ತರಿಗೆ ವಂದಿಸುವುದನ್ನು ಮರೆಯಲಿಲ್ಲ.












Click it and Unblock the Notifications