ಗೊಂದಲ, ಗೋಜಲುಗಳ ಮಧ್ಯೆ ಉದ್ಧವ್ ಠಾಕ್ರೆ ಭೇಟಿಯಾದ ಅಮಿತ್ ಶಾ
ಮುಂಬೈ, ಜೂನ್ 7: ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಲೇ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರದಲ್ಲಿ ಭಾಗವಾಗಿರುವ ಪಕ್ಷ ಶಿವಸೇನೆ. 2019ರ ಚುನಾವಣೆಗೆ ಏಕಾಂಗಿಯಾಗಿ ಸ್ಪರ್ಧಿಸುತ್ತೇನೆ ಎನ್ನುತ್ತಲೇ ಬಿಜೆಪಿ ಜೊತೆಗೆ ಸಂಬಂಧ ಕಡಿದುಕೊಳ್ಳಲು ಹಿಂದೇಟು ಹಾಕುತ್ತಿರುವ ಈ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆಯವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬುಧವಾರ ಭೇಟಿಯಾದರು.
ಮುಂಬೈನಲ್ಲಿರುವ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರೀಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆಗೆ ತೆರಳಿ ಶಾ ಮಾತುಕತೆ ನಡೆಸಿದರು. ಬಿಜೆಪಿಯ 'ಸಂಪರ್ಕ್ ಫಾರ್ ಸಮರ್ಥನ್' ಅಭಿಯಾನದ ಭಾಗವಾಗಿ ಅಮಿತ್ ಶಾ ಅವರು ಠಾಕ್ರೆಯವರನ್ನು ಭೇಟಿಯಾಗಿದ್ದಾರೆ.
ಈಗಾಗಲೇ ಎರಡೂ ಪಕ್ಷಗಳು ವಿರುದ್ಧ ದ್ರುವಗಳಲ್ಲಿ ನಡೆಯಲಾರಂಭಿಸಿವೆ. ಹೀಗಿದ್ದೂ ಠಾಕ್ರೆಯವರನ್ನು ಭೇಟಿಯಾಗಿ ಶಾ ತಮ್ಮ ಮಿತ್ರ ಪಕ್ಷವನ್ನು ಉಳಿಸಿಕೊಳ್ಳಲು ಮುಂದಾಗಿರುವಂತಿದೆ.

ಈಗಾಗಲೇ 2019ರ ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದೆ. ಇದರ ನಡುವೆಯೇ ಮೈತ್ರಿಗೆ ಬಿಜೆಪಿ ಹಾತೊರೆಯುತ್ತಿರುವಂತೆ ಕಾಣಿಸುತ್ತಿದೆ. ಸುಮಾರು ನಾಲ್ಕು ವರ್ಷಗಳ ನಂತರ ನಡೆದ ಅಮಿತ್ ಶಾ, ಠಾಕ್ರೆ ಭೇಟಿ. ಈ ಸಭೆಗಾಗಿ ಸ್ವತಃ ತಾವೇ ಮಾತೋಶ್ರೀ ವರೆಗೆ ನಡೆದು ಬಂದ ಅಮಿತ್ ಶಾ ಅವರ ನಡೆಗಳನ್ನು ಇದನ್ನು ಸೂಚಿಸುತ್ತಿದೆ.
ಕಳೆದ ಎರಡೂವರೆ ದಶಕಗಳಲ್ಲಿ ಒಟ್ಟಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದ ಶಿವಸೇನೆ ಮತ್ತು ಬಿಜೆಪಿ 2014ರ ಚುನಾವಣೆಗೂ ಮುನ್ನ ಬೇರೆ ಬೇರೆಯಾಗಿದ್ದವು. ಅಲ್ಲಿಂದ ನಂತರ ಎರಡೂ ಪಕ್ಷಗಳ ನಡುವೆ ವೈಮನಸ್ಸು ಹುಟ್ಟಿಕೊಂಡಿತ್ತು.
ಇನ್ನು ಒಂದೆಡೆ ಬುಧವಾರ ಠಾಕ್ರೆ-ಶಾ ಭೇಟಿ ನಡೆದಿದ್ದರೆ, ಅಂದೇ ಪ್ರಕಟವಾದ ಸೇನೆಯ ಪತ್ರಿಕೆ 'ಸಾಮ್ನಾ' ಈ ಭೇಟಿಯ ಔಚಿತ್ಯವನ್ನೇ ಪ್ರಶ್ನಿಸಿತ್ತು. ಹೀಗಾಗಿ ಶಾ ಭೇಟಿ ನಂತರದ ಶಿವಸೇನೆಯ ನಡೆ ಕುತೂಹಲ ಹುಟ್ಟಿಸಿದೆ.











Click it and Unblock the Notifications