ಕಾಂಗ್ರೆಸ್ ಯುವರಾಜನಿಗೆ ಬಿಜೆಪಿ ಖಡಕ್ ಸವಾಲ್
ನವದೆಹಲಿ, ಏಪ್ರಿಲ್ 1: ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ರಾಹುಲ್ ಗಾಂಧಿ ಅವರನ್ನು ಮಣಿಸಲು ಬಿಜೆಪಿ ಹರಸಾಹಸ ಪಡುತ್ತಿದೆ. ಹಾಗಾಗಿ ಅವರ ವಿರುದ್ಧ ಸಮಬಲದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
high profile ಸ್ಪರ್ಧೆ!?:
ಪರಂಪರಾಗತವಾಗಿ ಕಾಂಗ್ರೆಸ್ ಪಕ್ಷಕ್ಕೆ ಒಲಯುತ್ತಾ ಬಂದಿರುವ ಅಮೇಠಿ ಕ್ಷೇತ್ರದಲ್ಲಿ ಈ ಬಾರಿ ರಾಹುಲ್ ಗಾಂಧಿಗೆ ಟಾಂಗ್ ನೀಡಲು ಬಿಜೆಪಿ ಮುಂದಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಸಲಹೆಯನ್ನು ಆಲಿಸಿರುವ ಪಕ್ಷವು ಕಿರುತೆರೆ ನಟಿ, ರಾಜ್ಯ ಸಭಾ ಸದಸ್ಯೆ ಸ್ಮೃತಿ ಇರಾನಿ ಅವರನ್ನು ರಾಹುಲ್ ಗಾಂಧಿ ವಿರುದ್ಧ ಸ್ಪರ್ಧೆಗೆ ಇಳಿಸಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಗಮನಾರ್ಹವೆಂದರೆ ಈಗಾಗಲೇ ಆಮ್ ಆದ್ಮಿ ಪಕ್ಷದಿಂದ ಕುಮಾರ್ ಬಿಸ್ವಾಸ್ ಅವರು ಒಂದು ತಿಂಗಳಿಂದ ಕೈಯಲ್ಲಿ ಪೊರಕೆ ಹಿಡಿದುಕೊಂಡು ಅಲ್ಲೇ ಠಿಕಾಣಿ ಹೂಡಿದ್ದಾರೆ. ಹಾಗಾಗಿ ಕುಮಾರ್ ಬಿಸ್ವಾಸ್ ವರ್ಸಸ್ ರಾಹುಲ್ ಗಾಂಧಿ ವರ್ಸಸ್ ಸ್ಮೃತಿ ಇರಾನಿ ಪೈಕಿ ಜಯ ಯಾರದಾಗುತ್ತದೆ ಎಂಬುದು ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
2004 ಮತ್ತು 2009 ಚುನಾವಣೆಗಳಲ್ಲಿ ಜಯ ದಾಖಲಿಸಿರುವ ರಾಹುಲ್, ಈ ಬಾರಿ ಹ್ಯಾಟ್ರಿಕ್ ಸಾಧಿಸುತ್ತಾರಾ ಎಂಬುದು ಕುತೂಹಲಕಾರಿಯಾಗಿದೆ. ಹಾಗೆ ನೋಡಿದರೆ 1980ರಿಂದ ಕಾಂಗ್ರೆಸ್ ಪಕ್ಷದ ಮೊದಲ ಕುಟುಂಬದ ಹಿರಿಯರು ಇಲ್ಲಿ ಆರೇಳು ಬಾರಿ ಗೆದ್ದಿದ್ದಾರೆ.
ಇನ್ನು, ರಾಯ್ ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ವಿರುದ್ಧವೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಬಿಜೆಪಿ, ದಶಕಗಳಿಂದ ಕಾಂಗ್ರೆಸ್ ಪಕ್ಷದ ಮೊದಲ ಕುಟುಂಬಕ್ಕೆ ಸಿಂಹಸ್ವಪ್ನವಾಗಿರುವ ಸುಪ್ರೀಂಕೋರ್ಟಿನ ಹಿರಿಯ ನ್ಯಾಯವಾದಿ ಅಜಯ್ ಅಗರವಾಲ್ ಅವರನ್ನು ಕಣಕ್ಕಿಳಿಸಿದೆ. ಬೊಫೋರ್ಸ್ ಹಗರಣ ಮತ್ತು ತೆಲಗಿ ಪ್ರಕರಣಗಳಲ್ಲಿ ಗಾಜಿಯಾಬಾದಿನ ಅಜಯ್ ಅಗರವಾಲ್ PILಗಳನ್ನು ದಾಖಲಿಸಿ, ಹಗರಣಗಳ ವಿರುದ್ಧ ಹೋರಾಡಿದ್ದರು. ಇದೀಗ ಸೋನಿಯಾ ಗಾಂಧಿಗೆ ಸಿಂಹಸ್ವಪ್ನವಾಗಲು ಹೊರಟಿದ್ದಾರೆ.













Click it and Unblock the Notifications