ಮಾನವೀಯತೆ ಮರೆತ ಆಂಬ್ಯುಲೆನ್ಸ್ ಚಾಲಕ: 200 ಕಿಮೀ ಚೀಲದಲ್ಲಿ ಮಗುವಿನ ಶವ ತೆಗೆದೊಯ್ದ ತಂದೆ
ಕೋಲ್ಕತ್ತಾ ಮೇ 15: ಪಶ್ಚಿಮ ಬಂಗಾಳದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಆಂಬ್ಯುಲೆನ್ಸ್ ದರವನ್ನು ಪಾವತಿಸಲು ಸಾಧ್ಯವಾಗದ ಕಾರಣ ತಂದೆ ತನ್ನ ಮಗನ ಶವವನ್ನು ಸುಮಾರು 200 ಕಿಲೋಮೀಟರ್ ದೂರದವರೆಗೆ ಚೀಲದಲ್ಲಿ ಹೊತ್ತೊಯ್ದ ಹೃದಯವಿದ್ರಾವಕ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಸಿಲಿಗುರಿಯ ಕಲಿಯಾಗಂಜ್ನಲ್ಲಿ ಈ ಘಟನೆ ವರದಿಯಾಗಿದೆ.
ತನ್ನ ಐದು ತಿಂಗಳ ಮಗುವಿನ ಶವವನ್ನು ಬ್ಯಾಗ್ನಲ್ಲಿ ಹಾಕಿಕೊಂಡು 200 ಕಿಲೋಮೀಟರ್ಗಳವರೆಗೆ ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ಬಸ್ನಲ್ಲಿ ಪ್ರಯಾಣಿಸಿದ್ದೇನೆ ಎಂದು ಬಡ ವ್ಯಕ್ತಿ ಹೇಳಿಕೊಂಡಿದ್ದಾನೆ. ಏಕೆಂದರೆ ಆಂಬ್ಯುಲೆನ್ಸ್ ಚಾಲಕ ಸಿಲಿಗುರಿಯಿಂದ ಕಲಿಯಾಗಂಜ್ ವರೆಗೆ ತನ್ನನ್ನು ಮನೆಗೆ ಕರೆದೊಯ್ಯಲು 8,000 ರೂಪಾಯಿ ಕೇಳಿದ್ದನು. ಅಷ್ಟು ಹಣವಿಲ್ಲದೆ ಮಗುವನ್ನು ಬ್ಯಾಗ್ನಲ್ಲಿ ಹಾಕಿಕೊಂಡು ಮನೆ ಸೇರಿದೆ ಎಂದು ತಂದೆ ಹೇಳಿಕೊಂಡಿದ್ದಾರೆ.

ಈ ಎಲ್ಲಾ ವಿವರಗಳನ್ನು ನೀಡುತ್ತಾ, ಮಗುವಿನ ತಂದೆ ಆಸೀಮ್ ದೇಬ್ಶರ್ಮಾ, "ಅನಾರೋಗ್ಯದಿಂದಾಗಿ ನನ್ನ ಐದು ತಿಂಗಳ ಮಗು ಕಳೆದ ರಾತ್ರಿ ಸಿಲಿಗುರಿಯ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆರು ದಿನಗಳ ಕಾಲ ಚಿಕಿತ್ಸೆ ಪಡೆದು ನಂತರ ಸಾವನ್ನಪ್ಪಿದೆ. ಈ ಸಮಯದಲ್ಲಿ ನಾನು 16,000 ರೂಪಾಯಿ ಖರ್ಚು ಮಾಡಿದೆ. ನನ್ನ ಮಗುವನ್ನು ಕಲಿಯಗಂಜ್ಗೆ ಸಾಗಿಸಲು ಅಲ್ಲಿನ ಆಂಬ್ಯುಲೆನ್ಸ್ ಡ್ರೈವರ್ 8,000 ರೂಪಾಯಿ ಪಾವತಿಸಲು ಕೇಳದರು. ಆದರೆ ನನ್ನ ಬಳಿ ಹಣವಿರಲಿಲ್ಲ'' ಎಂದಿದ್ದಾರೆ.
ಈ ವೇಳೆ ಆಂಬ್ಯುಲೆನ್ಸ್ ಡ್ರೈವರ್ ಮಾನವೀಯತೆ ಮರೆತು ಮಾತನಾಡಿದ್ದಾರೆ. 102 ಯೋಜನೆಯಡಿ ರೋಗಿಗಳಿಗೆ ಆಂಬ್ಯುಲೆನ್ಸ್ ಸೌಲಭ್ಯ ಉಚಿತವಾಗಿದೆ, ಆದರೆ ಶವಗಳನ್ನು ಸಾಗಿಸಲು ಅಲ್ಲ ಎಂದರು ಎಂದು ಆಸೀಮ್ ದೇಬ್ಶರ್ಮಾ ಹೇಳಿಕೊಂಡಿದ್ದಾರೆ.

ಮಗುವಿನ ಶವದೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸಿದ ತಂದೆ
ಹೀಗಾಗಿ ದೇಬ್ಶರ್ಮಾ ಅವರು ಶವವನ್ನು ಬ್ಯಾಗ್ನಲ್ಲಿ ಹಾಕಿಕೊಂಡು ಯಾರಿಗೂ ತಿಳಿಸದೆ ಸ್ಥಳೀಯ ಬಸ್ನಲ್ಲಿ ಪ್ರಯಾಣಿಸಬೇಕಾಯಿತು. ಅವರು ಸಹ ಪ್ರಯಾಣಿಕರಿಗೆ ಇದರ ಬಗ್ಗೆ ತಿಳಿದರೆ, ಅವರನ್ನು ಬಸ್ನಿಂದ ಕೆಳಗಿಳಿಸುವ ಭಯದಿಂದ ಬ್ಯಾಗ್ ಅನ್ನು ಮುಚ್ಚಿಟ್ಟುಕೊಂಡು ಮನೆಗೆ ಮರಳಿದ್ದಾರೆ.
ಅನಾರೋಗ್ಯದಿಂದ ತೀವ್ರ ಅಸ್ವಸ್ಥರಾದ ಮಕ್ಕಳು
ಅಸೀಮ್ ದೇಬ್ಶರ್ಮಾ ಅವರ ಅವಳಿಗಳಿಬ್ಬರೂ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಿದ್ದಾರು. ಹೀಗಾಗಿ ಅವರನ್ನು ಶನಿವಾರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಗ ಈ ಬೆಳವಣಿಗೆ ಸಂಭವಿಸಿದೆ. ಆರಂಭದಲ್ಲಿ ಮಕ್ಕಳನ್ನು ಕಲಿಯಗಂಜ್ ರಾಜ್ಯ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ನಂತರ ಅವರ ಸ್ಥಿತಿ ಹದಗೆಟ್ಟಿದ್ದರಿಂದ ರಾಯ್ಗಂಜ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಅವರ ಇಬ್ಬರು ಮಕ್ಕಳನ್ನು ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇಬ್ಬರು ಮಕ್ಕಳ ಪೈಕಿ ಒಂದು ಮಗುವಿನ ಆರೋಗ್ಯ ಚೇತರಿಕೆ ಕಂಡಿದ್ದರಿಂದ ಅಸೀಮ್ ದೇಬ್ಶರ್ಮಾ ಅವರ ಪತ್ನಿ ಗುರುವಾರ ಮಗುವಿನೊಂದಿಗೆ ಮನೆಗೆ ಮರಳಿದರು. ಆದರೆ, ಇನ್ನೊಂದು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶನಿವಾರ ರಾತ್ರಿ ಮೃತಪಟ್ಟಿದೆ.
ಅಸೀಮ್ ದೇಬ್ಶರ್ಮಾ ಆಸ್ಪತ್ರೆಯಿಂದ ಯಾವುದೇ ಸಹಾಯ ಪಡೆಯಲಿಲ್ಲ. ತನ್ನ ಮೃತ ಮಗನ ಶವವನ್ನು ತನ್ನ ಮನೆಗೆ ಕೊಂಡೊಯ್ಯಲು ಆಂಬ್ಯುಲೆನ್ಸ್ಗಾಗಿ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ಸಂಪರ್ಕಿಸಿದರು. ಆದರೆ, ಆಂಬ್ಯುಲೆನ್ಸ್ ಚಾಲಕರು ಮಗನ ಶವವನ್ನು ಸಾಗಿಸಲು 8,000 ರೂಪಾಯಿ ಕೇಳಿದರು.
ಬೇರೆ ದಾರಿಯಿಲ್ಲದೆ, ಅಸೀಮ್ ದೇಬ್ಶರ್ಮಾ ಅವರು ಬಂಗಾಳದ ಸಿಲಿಗುರಿಯಿಂದ ರಾಯ್ಗಂಜ್ಗೆ ಖಾಸಗಿ ಬಸ್ಸನ್ನು ಹತ್ತಬೇಕಾಯಿತು. ಬಳಿಕ ಅವರ ಹುಟ್ಟೂರಾದ ಕಲಿಯಗಂಜ್ ಅನ್ನು ತಲುಪಲು ಮತ್ತೊಂದು ಬಸ್ಸು ಹತ್ತಿದರು. "ಕಲಿಯಗಂಜ್ನ ವಿವೇಕಾನಂದ ಛೇದಕದಲ್ಲಿ ಇಳಿದ ನಂತರ, ನಾನು ಒಬ್ಬ ವ್ಯಕ್ತಿಯನ್ನು ಸಂಪರ್ಕಿಸಿದೆ. ಅವರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು" ಎಂದು ಅಸೀಮ್ ದೇಬ್ಶರ್ಮಾ ಹೇಳಿಕೊಂಡಿದ್ದಾರೆ.
ಘಟನೆ ಬಗ್ಗೆ ರಾಜಕೀಯ ಮುಖಂಡರ ಪ್ರತಿಕ್ರಿಯೆ
ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್, ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಆರೋಗ್ಯ ಸೌಲಭ್ಯಗಳ ಕಳಪೆ ಸ್ಥಿತಿಗೆ ರಾಜ್ಯ ಸರ್ಕಾರವನ್ನು ದೂಷಿಸಿದ್ದಾರೆ. ಮತ್ತೊಂದೆಡೆ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ಸರ್ಕಾರದ 'ಸ್ವಾಸ್ಥ್ಯ ಸತಿ' ಆರೋಗ್ಯ ವಿಮಾ ಯೋಜನೆಯ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದ್ದಾರೆ.












Click it and Unblock the Notifications