ಅಮರನಾಥ ಯಾತ್ರೆಗೆ ಭಯೋತ್ಪಾದಕರ ಬೆದರಿಕೆ: ಆತಂಕದ ಅಗತ್ಯವಿಲ್ಲ
ಶ್ರೀನಗರ (ಜಮ್ಮು-ಕಾಶ್ಮೀರ), ಜೂನ್ 28: ಇಂದಿನಿಂದ (ಜೂನ್ 28) ಆರಂಭವಾಗಿರುವ ಅಮರನಾಥ ಯಾತ್ರೆಗೆ ಭಯೋತ್ಪಾದಕರ ಬೆದರಿಕೆ ಇದೆ ಎಂಬ ಸುದ್ದಿ ದೇಶದಾದ್ಯಂತ ತಲ್ಲಣ ಸೃಷ್ಟಿಸಿದೆ. ಒಮ್ಮೆ ಅಮರನಾಥಕ್ಕೆ ಹೋಗಿ ಹಿಮದಿಂದಲೇ ಸೃಷ್ಟಿಯಾದ ನೈಸರ್ಗಿಕ ಶಿವ ಲಿಂಗದ ದರ್ಶನ ಪಡೆದರೆ ಸಾಕು ಎನ್ನುವವರಿಗೆಲ್ಲ ಈ ಸುದ್ದಿ ಆತಂಕವನ್ನುಂಟು ಮಾಡಿದೆ. ಒಟ್ಟಿನಲ್ಲಿ ಭಕ್ತಿಯ ಜಾಗವನ್ನೀಗ ಭಯ ಆವರಿಸಿದೆ!
ಹೀಗಿರುವಾಗ ಅಮರನಾಥ ಯಾತ್ರಿಗಳ್ಯಾರೂ ಭಯಪಡುವ ಅಗತ್ಯವಿಲ್ಲ, ಯಾತ್ರಿಗಳಿಗೆ ಸಾಕಷ್ಟು ಭದ್ರತಾ ವ್ಯವಸ್ಠೆಯನ್ನು ಕಲ್ಪಿಸಲಾಗಿದೆ ಎಂದು ಕಾಶ್ಮೀರ ವಲಯದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಮುನೀರ್ ಖಾನ್ ತಿಳಿಸಿದ್ದಾರೆ.

ಅಮರನಾಥ ಯಾತ್ರಿಗಳ ಮೇಲೆ ಭಯೋತ್ಪಾದಕ ದಾಳಿಯಾಗುವ ಸಾಧ್ಯತೆಯಿದೆ ಎಂಬ ಬಗ್ಗೆ ವರದಿಯಾಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹಬ್ಬಿ ಜನರು ಆತಂಕಪಡುವಂತಾಗಿದೆ. ಬೆದರಿಕೆ ಇರುವುದು ನಿಜವಾದರೂ, ಜನ ಆತಂಕ ಪಡುವ ಅಗತ್ಯವಿಲ್ಲ.
ಏಕೆಂದರೆ ದಾಳಿಯನ್ನು ವಿಫಲಗೊಳಿಸಲು ಈಗಾಗಲೇ ಸಾಕಷ್ಟು ಭದ್ರತಾ ಸಿಬ್ಬಂದಿಗಳನ್ನು ಅಮರನಾಥ ಯಾತ್ರೆಯುದ್ದಕ್ಕೂ ನೇಮಿಸಲಾಗಿದೆ. ಮಾತ್ರವಲ್ಲ, ಸಾಕಷ್ಟು ಮುನ್ನೆಚ್ಚರಿಕೆಗಳನ್ನೂ ವಹಿಸಲಾಗಿದೆ ಎಂದು ಸೇನೆ ತಿಳಿಸಿದೆ.
ಈಗಾಗಲೇ ಅಮರನಾಥದ ಹಾದಿಯುದ್ದಕ್ಕೂ 35,000 ದಿಂದ 40,000 ಬಿಎಸ್ ಎಫ್, ಸಿಆರ್ ಪಿಎಫ್ ಯೋಧರು, ಪೊಲೀಸರನ್ನು ನೇಮಿಸಲಾಗಿದೆ. ಇದರೊಂದಿಗೆ 25,000 ಅರೆಸೇನಾ ಸಿಬ್ಬಂದಿಗಳನ್ನೂ ಕೇಂದ್ರ ಸರ್ಕಾರ ನೇಮಿಸಿದೆ. ಆದ್ದರಿಂದ ಭಕ್ತರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಲಾಗಿದೆ.
ಜೂನ್ 28 ರಿಂದ ಅಮರನಾಥ ಯಾತ್ರೆ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಲಶ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘಟನೆ, ಅಮರನಾಥ ಯಾತ್ರಿಗಳ ಮೇಲೆ ದಾಳಿ ಮಾಡುವ ಯೋಜನೆಯನ್ನು ಸಿದ್ಧಪಡಿಸಿಕೊಂಡಿದೆ ಎಂಬ ಗುಪ್ತಚರ ದಳದ ಮಾಹಿತಿಯ ಹಿನ್ನೆಲೆಯಲ್ಲಿ ಈ ತಾಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜುಲೈ 8, 2016ರಂದು ಸಾವನ್ನಪ್ಪಿದ್ದ ಹಿಜ್ಬುಲ್ಲಾ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವನಿ ಸಾವಿಗೆ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ದಾಳಿಗೆ ಉಗ್ರರು ಸಂಚು ರೂಪಿಸಿದ್ದಾರೆ. ಅಮರನಾಥ ಯಾತ್ರೆ ಉಗ್ರರ ಹಿಟ್ ಲಿಸ್ಟ್ ನಲ್ಲಿದೆ ಎಂಬ ಮಾಹಿತಿ ದೊರಕುತ್ತಿದ್ದಂತೆಯೇ ದೇಶದಾದ್ಯಂತ ತಲ್ಲಣ ಹುಟ್ಟಿಕೊಂಡಿದೆ.












Click it and Unblock the Notifications