ಅಮರನಾಥ ಯಾತ್ರೆ ದಾಳಿಯ ಸಂಚು ರೂಪಿಸಿದ್ದು ಪಾಕ್ ನ ಲಷ್ಕರ್ ತೈಬಾ
ನವದೆಹಲಿ, ಜುಲೈ 11: ಅಮರನಾಥ ಪವಿತ್ರ ಯಾತ್ರೆಯಲ್ಲಿ ನರಮೇಧವಾಗಿದೆ. ಪಾಪಿ ಪಾಕಿಸ್ತಾನದಲ್ಲೇ ಬೆಳೆದ ವಿಷವೃಕ್ಷ ಲಷ್ಕರ್ ಇ ತೈಬಾ ಉಗ್ರ ಸಂಘಟನೆಯಿಂದ ಈ ಕೃತ್ಯ ನಡೆದಿದೆ ಎಂಬ ಶಂಕೆ ಜಮ್ಮು-ಕಾಶ್ಮೀರ ಪೊಲೀಸರದು.
ಈ ಹೇಯ ಕೃತ್ಯದ ಯೋಜನೆ ರೂಪುಗೊಂಡಿದ್ದು ಪಾಕಿಸ್ತಾನದಲ್ಲಿ, ಜಾರಿಯಾದದ್ದು ಭಾರತದಲ್ಲಿ ಎಂದು ಪೊಲೀಸರು ಹೇಳುತ್ತಾರೆ. ಯಾತ್ರೆಯನ್ನು ಗುರಿ ಆಗಿಸಿಕೊಂಡು ದಾಳಿ ಮಾಡಿದವರ ಉದ್ದೇಶ ಭಾರತದಲ್ಲಿ ಕೋಮು ಸಂಘರ್ಷ ಸೃಷ್ಟಿಸುವುದು ಎನ್ನುತ್ತಾರೆ ಗುಪ್ತಚರ ದಳದ ಅಧಿಕಾರಿಗಳು.

ಇನ್ನು ಗುಜರಾತ್ ನೋಂದಣಿಯ ಬಸ್ ನ ಗುರಿಯಾಗಿ ಮಾಡಿಕೊಂಡು ದಾಳಿ ನಡೆಸಿರುವುದು ಮತ್ತೊಂದು ಆಯಾಮವನ್ನು ತೆರೆದಿಡುತ್ತದೆ. ಸೋಮವಾರ ದಾಳಿ ನಡೆದಾಗ ಈ ಹೇಡಿ ಕೃತ್ಯದ ಹಿಂದೆ ಹಿಜ್ಬುಲ್ ಮುಜಾಹಿದೀನ್ ಕೈವಾಡ ಇರಬಹುದು ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು.
ಆದರೆ, ಈ ವರೆಗೆ ಯಾವುದೇ ಸ್ಪಷ್ಟ ಸುಳಿವು ಸಿಕ್ಕಿಲ್ಲ. ಪ್ರಾಥಮಿಕ ತನಿಖೆ ವೇಳೆ ಪೊಲೀಸರಿಗೆ ದೊರೆತ ಮಾಹಿತಿ ಆಧಾರದಲ್ಲಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಅಮರನಾಥ ಯಾತ್ರೆಯ ದಾಳಿಗೆ ಹಲವು ಆಯಾಮಗಳಿವೆ. ಕಾಶ್ಮೀರದಲ್ಲಿ ಲಷ್ಕರ್ ನ ಹಲವು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ ಮತ್ತು ಬಂಧಿಸಿದೆ. ಅದರ ಪ್ರತೀಕಾರವಾಗಿ ದಾಳಿ ನಡೆಸಿರಬಹುದು. ಉತ್ತರಪ್ರದೇಶದಲ್ಲಿ ಉಗ್ರ ಸಂಘಟನೆ ಕಾರ್ಯ ನಿರ್ವಹಿಸುತ್ತಿದ್ದ ಸಂದೀಪ್ ಎಂಬಾತನ ಬಂಧನ ದಾಳಿಯ ಕೆಲ ಗಂಟೆಗಳ ಮುಂಚೆಯಷ್ಟೇ ಆಗಿತ್ತು.
ಪ್ರತಿ ಬಾರಿಯೂ ಅಮರನಾಥ ಯಾತ್ರೆ ವೇಳೆ ಉಗ್ರರು ತಮ್ಮ ದಾಳಿ ಸಂಘಟಿಸಲು ಯತ್ನಿಸುತ್ತಾರೆ. ಕಾಶ್ಮೀರದಲ್ಲಿ ಕೋಮು ಸಂಘರ್ಷ ಆಗಲಿ ಎಂಬ ಉದ್ದೇಶ ಪಾಕ್ ನದ್ದು. ಅದಕ್ಕಾಗಿ ಪಾಕಿಸ್ತಾನ ನಿರಂತರ ಪ್ರಯತ್ನ ಮಾಡುತ್ತಲೇ ಇರುತ್ತದೆ ಎನ್ನುತ್ತಾರೆ ಗುಪ್ತಚರ ಇಲಾಖೆ ಅಧಿಕಾರಿಗಳು.












Click it and Unblock the Notifications