ಉಗ್ರರ ನಿಜವಾದ ಟಾರ್ಗೆಟ್ ಯಾರು? ವಿಡಿಯೋದಲ್ಲಿ ಉಗ್ರ ಬಿಚ್ಚಿಟ್ಟ ಸತ್ಯ!
ಶ್ರೀನಗರ, ಜೂನ್ 27: "ಅಮರನಾಥ ಯಾತ್ರಿಗಳು ನಮ್ಮ ಟಾರ್ಗೆಟ್ ಅಲ್ಲ, ಅವರು ನಮ್ಮ ಅತಿಥಿಗಳು" ಎಂದು ಹಿಜ್ಬುಲ್ ಮುಜಾಹಿದ್ದಿನ್ ಸಂಘಟನೆಯ ಉಗ್ರನೊಬ್ಬ ಹೇಳಿರುವ ವಿಡಿಯೋವೊಂದು ಇದೀಗ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ.
'ಅಮರನಾಥ ಯಾತ್ರಿಕರನ್ನು ನಾವ್ಯಾಕೆ ಗುರಿಯಾಗಿರಿಸಿಕೊಳ್ಳಲಿ? ಅವರು ನಮ್ಮ ಅತಿಥಿಗಳಷ್ಟೆ. ಅವರು ತಮ್ಮ ಧಾರ್ಮಿಕ ಪದ್ಧತಿಯ ಪ್ರಕಾರ ಇಲ್ಲಿಗೆ ಬರುತ್ತಾರೆ ಅಷ್ಟೆ. ಅವರನ್ನು ನಾವ್ಯಾಕೆ ಕೊಲ್ಲಲಿ?' ಎಂದು ಉಗ್ರ ಈ ವಿಡಿಯೋದಲ್ಲಿ ಹೇಳಿದ್ದಾನೆ.
ಬಿಗಿಭದ್ರತೆಯೊಂದಿಗೆ ಅಮರನಾಥ ಯಾತ್ರೆ ಸಜ್ಜಾದ ಭಕ್ತಾದಿಗಳು
ಅಷ್ಟೇ ಅಲ್ಲ, ಈ ವಿಡಿಯೋದಲ್ಲಿ ತಮ್ಮ ನಿಜವಾದ ಗುರಿಯಾರು ಎಂಬುದನ್ನೂ ಬಹಿರಂಗಪಡಿಸಿದ್ದಾನೆ. ವಿಡಿಯೋದಲ್ಲಿರುವ ಉಗ್ರನನ್ನು ಹಿಜ್ಬುಲ್ ಮುಜಾಹಿದ್ದಿನ್ ಸಂಘಟನೆಯ ಕಮಾಂಡರ್ ರಿಯಾಜ್ ನೈಕೂ ಎಂದು ಗುರುತಿಸಲಾಗಿದೆ.
'ನಾವು ಎಂದಿಗೂ ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಿಲ್ಲ. ನಾವು ಭಕ್ತಾದಿಗಳೊಂದಿಗೆ ಯುದ್ಧ ನಡೆಸುವುದಿಲ್ಲ. ನಮ್ಮ ಯುದ್ಧವೇನಿದ್ದರು ನಾವು ಹೀಗೆ ಒತ್ತಾಯ ಪೂರ್ವಕವಾಗಿ ಗನ್ ಹಿಡಿಯುವಂತೆ ಮಾಡಿದವರ ವಿರುದ್ಧ. ನಾವು ನಮ್ಮ ಹಕ್ಕು ಮತ್ತು ಸ್ವಾತಂತ್ರಕ್ಕಾಗಿ ಹೋರಾಡುತ್ತಿದ್ದೇವೆ' ಎಂದು ನೈಕೂ ಈ ವಿಡಿಯೋದಲ್ಲಿ ಹೇಳಿದ್ದಾನೆ.
ನಾಳೆ(ಜೂನ್ 28)ಯಿಂದ ಅಮರನಅಥ ಯಅತ್ರೆ ಆರಂಭವಾಗಲಿದ್ದು ಸುಮಾರು 2 ಲಕ್ಷ ಭಕ್ತರು ಈ ವರ್ಷ ಅಮರನಾಥ ಯಾತ್ರೆಗೆ ಹೆಸರು ನೋಂದಾಯಿಸಿದ್ದಾರೆ.
ಕಳೆದ ವರ್ಷ ಜುಲೈ 10 ರಂದು ಅಮರನಾಥ ಯಾತ್ರಿಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 9 ಯಾತ್ರಿಗಳು ಅಸುನೀಗಿದ್ದರು. ಈ ನಿಟ್ಟಿನಲ್ಲಿ ಈ ಬಾರಿ ಮತ್ತಷ್ಟು ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.