ಬಂಗಲೆಗೆ 4.67 ಕೋಟಿ ಹಾನಿ ಮಾಡಿದ ಅಖಿಲೇಶ್ 6 ಲಕ್ಷ ಕೊಟ್ಟರೆ ಸಾಕಂತೆ!
ನವದೆಹಲಿ, ಆಗಸ್ಟ್ 2 : ಉತ್ತರಪ್ರದೇಶದ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಉಳಿದುಕೊಂಡಿದ್ದ ಅಧಿಕೃತ ಬಂಗಲೆಗೆ ಹಾನಿ ಮಾಡಿದ್ದ ಕಾರಣಕ್ಕೆ ಅಖಿಲೇಶ್ ಯಾದವ್ 6 ಲಕ್ಷ ರುಪಾಯಿ ಪಾವತಿಸಬೇಕಾಗಬಹುದು. ಆ ಬಂಗಲೆಯನ್ನು ಸುಪ್ರೀಂ ಕೋರ್ಟ್ ಆದೇಶದ ನಂತರ ಕಳೆದ ಜೂನ್ ನಲ್ಲಷ್ಟೇ ಅಖಿಲೇಶ್ ತೆರವು ಮಾಡಿದ್ದರು.
6 ಲಕ್ಷ ರುಪಾಯಿ ಪಾವತಿಸಬೇಕು ಅನ್ನೋ ಆದೇಶ ಕಡ್ಲೇಪುರಿ ಲೆಕ್ಕಕ್ಕೆ ಬಂದುಬಿಟ್ಟಿತು. ಹಾಗೆ ನೋಡಿದರೆ ಸರಕಾರಿ ವರದಿ ಪ್ರಕಾರ, ಕಾನೂನು ಬಾಹಿರ ನಿರ್ಮಾಣಕ್ಕಾಗಿ ತಾವು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಖಿಲೇಶ್ ಯಾದವ್ 4.67 ಕೋಟಿ ರುಪಾಯಿ ಖರ್ಚು ಮಾಡಿದ್ದರು.
ಉತ್ತರಪ್ರದೇಶದ ಲೋಕೋಪಯೋಗಿ ಇಲಾಖೆ ಇನ್ನೂರು ಪುಟಗಳ ವರದಿ ಸಲ್ಲಿಸಿತ್ತು. ಅದರ ಪ್ರಕಾರ, ಬಂಗಲೆಯ ತಾರಸಿ, ಅಡುಗೆ ಮನೆ, ವಿದ್ಯುತ್ ಉಪಕರಣಗಳು, ನೆಲಹಾಸು, ಹಸಿರು ಹಾಸು, ಪೇಂಟ್, ಇಟ್ಟಿಗೆ ಕೆಲಸಗಳು ಹಾಗೂ ಸ್ನಾನಗೃಹದ ಪರಿಕರಗಳಿಗೆ ಹಾನಿಯಾಗಿದ್ದರ ಬಗ್ಗೆ ಪ್ರಸ್ತಾವ ಮಾಡಿತ್ತು.

ಈ ಎಲ್ಲ ಹಾನಿಯ ಪೈಕಿ ಬಹುತೇಕವು ಅಖಿಲೇಶ್ ರಿಂದ ಅನಧಿಕೃತವಾಗಿ ನಿರ್ಮಾಣವಾಗಿದ್ದವು ಎಂದು ವರದಿ ಹೇಳಿದೆ. ಈ ಕಾರಣಕ್ಕೆ ಉತ್ತರಪ್ರದೇಶ ರಾಜ್ಯ ಸರಕಾರ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗೆ ಷೋಕಾಸ್ ನೋಟಿಸ್ ನೀಡುವ ಸಾಧ್ಯತೆಗಳಿವೆ.
ಈ ಆರೋಪಗಳೆಲ್ಲವನ್ನೂ ಅಖಿಲೇಶ್ ಯಾದವ್ ಅಲ್ಲಗಳೆದಿದ್ದಾರೆ. ಇನ್ನು ಸಮಾಜವಾದಿ ಪಕ್ಷದ ನಾಯಕರು, ಇವೆಲ್ಲ ಬಿಜೆಪಿಯವರು ಮಾಡುತ್ತಿರುವ ರಾಜಕೀಯ ದ್ವೇಷ ಸಾಧನೆ. ಅಖಿಲೇಶ್ ಜನಪ್ರಿಯತೆಯನ್ನು ಸಹಿಸದೆ ಹೀಗೆ ಮಾಡಲಾಗುತ್ತಿದೆ ಎಂದಿದ್ದಾರೆ.
ಅಂದಹಾಗೆ, ಕಳೆದ ಜೂನ್ ವೇಳೆ ಉತ್ತರಪ್ರದೇಶದ ಪೂರ್ವ ಭಾಗದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಬಂಗಲೆ ವಿವಾದದ ಬಗ್ಗೆ ಅಖಿಲೇಶ್ ಯಾದವ್ ರನ್ನು ಗುರಿ ಮಾಡಿಕೊಂಡು ದಾಳಿ ನಡೆಸಿದ್ದರು.
ಆಟ ಸೋಲುವ ಹಂತದಲ್ಲಿ ಮಕ್ಕಳು ಹೇಗೆ ಅದನ್ನು ಹಾಳು ಮಾಡುವ ಮನಸ್ಥಿತಿ ತೋರಿಸುತ್ತಾರೋ ಅದೇ ರೀತಿ ಅಧಿಕಾರ ಬಿಟ್ಟುಹೋಗುವ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಹತಾಶ ಮನಸ್ಥಿತಿಯಿಂದ ಹೀಗೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.












Click it and Unblock the Notifications