ಸಿಎಎ ವಿರೋಧಿ ಪ್ರತಿಭಟನೆ: ಶಾಸಕ ಅಖಿಲ್ ಗೊಗಾಯಿ ಖುಲಾಸೆ
ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಹೋರಾಟ ನೇತೃತ್ವ ವಹಿಸಿ ಪ್ರಖರ ಭಾಷಣ ಮಾಡಿದ್ದ ರೈತ ಮುಖಂಡ ಅಖಿಲ್ ಗೊಗೊಯಿ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಲಾಗಿತ್ತು. 2019ರ ಡಿಸೆಂಬರ್ ತಿಂಗಳಿನಿಂದ ಜೈಲಿನಲ್ಲಿದ್ದ ಗೊಗಾಯಿ ಜೈಲಿನಿಂದಲೇ ಸ್ಪರ್ಧಿಸಿ ಗೆಲುವು ದಾಖಲಿಸಿ, ಶಿವಸಾಗರ್ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಪ್ರಕರಣದಿಂದ ಶಾಸಕ ಅಖಿಲ್ ಗೊಗೊಯ್ ಅವರನ್ನು ಎನ್ಐಎ ವಿಶೇಷ ನ್ಯಾಯಾಲಯ ಮಂಗಳವಾರ ಖುಲಾಸೆಗೊಳಿಸಿದೆ.
''ಸಿಎಎ ವಿರುದ್ಧ ಗೊಗೊಯ್ ತಮ್ಮ ಭಾಷಣದಲ್ಲಿ ತೀಕ್ಷ್ಣ ಹೇಳಿಕೆಗಳನ್ನು ನೀಡಿದ್ದರೂ ಅವರು ಯಾವುದೇ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರಲಿಲ್ಲ,ಯುಎಪಿಎ ಅಡಿಯಲ್ಲಿ ಭಯೋತ್ಪಾದನೆಗೆ ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ'' ಎಂದು ವಿಶೇಷ ನ್ಯಾಯಾಧೀಶ ಪ್ರಾಂಜಲ್ ದಾಸ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ಅಸ್ಸಾಂನ ಚಾಬುವಾದಲ್ಲಿ 2019ರ ಡಿಸೆಂಬರ್ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧದ ಪ್ರತಿಭಟನೆ ಹಾಗೂ ನಂತರ ನಡೆದ ಗಲಭೆಯಲ್ಲಿ ಪೊಲೀಸರ ಗುಂಡಿಗೆ ಐವರು ಮೃತಪಟ್ಟಿದ್ದರು. ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅಖಿಲ್ ಅವರನ್ನು ಬಂಧಿಸಿ, ಜೈಲಿಗೆ ಕಳಿಸಲಾಗಿತ್ತು. ಕಾನೂನುಬಾಹಿರ ಸಭೆ ಆಸ್ತಿಪಾಸ್ತಿಗೆ ಹಾನಿ, ಕರ್ತವ್ಯ ನಿರತ ಅಧಿಕಾರಿಗೆ ಅಡ್ಡಿ ಮಾಡಿದ ಆರೋಪ ಹೊರೆಸಲಾಗಿತ್ತು.

ದೆಹಲಿ ಗಲಭೆ ತೀರ್ಪು ಉಲ್ಲೇಖ
ಗೊಗೋಯಿ ಜೊತೆಗೆ ಇತರ ಆರೋಪಿಗಳಾದ ಜಗಜಿತ್ ಗೊಹೈನ್ ಹಾಗೂ ಭೂಪೆನ್ ಗೊಗೋಯಿ ಕೂಡ ಖುಲಾಸೆಗೊಂಡಿದ್ದಾರೆ. ಆದರೆ ನಾಲ್ಕನೇ ಆರೋಪಿ ಭಾಸ್ಕರ್ ಜಿತ್ ಪುಕಾನ್ ವಿರುದ್ಧ ಸಾಕಷ್ಟು ಪುರಾವೆಗಳಿವೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ದೆಹಲಿ ಗಲಭೆ ತೀರ್ಪು ಉಲ್ಲೇಖ: ಇತ್ತೀಚೆಗೆ ಆಸಿಫ್ ತನ್ಹಾ, ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಅವರಿಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್ ತೀರ್ಪು ಆಧರಿಸಿ ಎನ್ಐಎ ನ್ಯಾಯಾಲಯ ಆದೇಶ ನೀಡಿದೆ.

ನಾಲ್ವರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು
"ಕರ್ತವ್ಯ ನಿರತನಾಗಿದ್ದಾಗ ಅಖಿಲ್ ಗೊಗೋಯಿ ನೇತೃತ್ವದ ಸುಮಾರು 6,000 ಜನರಿದ್ದ ಗುಂಪೊಂದು ನನ್ನನ್ನು ಸುತ್ತುವರೆದು ಕಲ್ಲು ತೂರಾಟ ನಡೆಸಿತು. ಇದರಿಂದ ನನಗೆ ಗಾಯವಾಯಿತು. ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಹತ್ಯೆಗೆ ಗುಂಪು ಯತ್ನಿಸಿತ್ತು" ಎಂದು ಚಬುವಾದ ಸಬ್ ಇನ್ಸ್ಪೆಕ್ಟರ್ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಐಪಿಸಿ ಮತ್ತು ಯುಎಪಿಎ ಕಾಯಿದೆಯ ಸೆಕ್ಷನ್ 16ರ ಅಡಿ ನಾಲ್ವರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಅಖಿಲ್ ಹೋರಾಟಕ್ಕೆ ಬೆಲೆ
ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬಂದರೆ 1.90 ಕೋಟಿ ಅಸ್ಸಾಮಿಗಳಿಗೆ ತೊಂದರೆಯಾಗಲಿದೆ. 1971ರ ಹಿಂದೂ ಬೆಂಗಾಲಿ ವಲಸಿಗರಿಗೆ ನೀಡಿದ್ದ ಪೌರತ್ವಕ್ಕೆ ಬೆಲೆ ಸಿಗುವುದಿಲ್ಲ ಎಂದು ಅಖಿಲ್ ವಿರೋಧ ವ್ಯಕ್ತಪಡಿಸಿದ್ದರು.
45 ವರ್ಷ ವಯಸ್ಸಿನ ರೈತ ಮುಖಂಡ, ಸಾಮಾಜಿಕ ಹೋರಾಟಗಾರ, ಆರ್ ಟಿ ಐ ಕಾರ್ಯಕರ್ತ ಅಖಿಲ್ ಅವರು ನಿರಂತರವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈಶಾನ್ಯರಾಜ್ಯಗಳಲ್ಲಿ ಪರಿಸರ ವಿರೋಧಿ ಅಣೆಕಟ್ಟು ನಿರ್ಮಾಣ ಯೋಜನೆ, ಭೂ ಹಗರಣಗಳ ವಿರುದ್ಧ ಹೋರಾಟ ನಡೆಸಿದ್ದಾರೆ.

ಅಸ್ಸಾಂ ವಿಧಾನಸಭೆ ಚುನಾವಣೆ 2021
ಅಸ್ಸಾಂ ವಿಧಾನಸಭೆ ಚುನಾವಣೆ 2021ರಲ್ಲಿ ಸ್ಪರ್ಧಿಸಿದ ಅಖಿಲ್ ಅವರ ಪರ ತಾಯಿ ಪ್ರಿಯೊದಾ ಗೊಗಾಯಿ ಪ್ರಚಾರ ನಡೆಸಿ, ತನ್ನ ಮಗನಿಗಾದ ಅನ್ಯಾಯಕ್ಕೆ ನ್ಯಾಯ ಸಿಗಬೇಕಿದೆ ಎಂದು ಪ್ರಚಾರ ಭಾಷಣದಲ್ಲಿ ಕೇಳಿಕೊಂಡರು. ಹೋರಾಟಗಾರ್ತಿ ಮೇಧಾ ಪಾಟ್ಕರ್ ಹಾಗೂ ವಿದ್ಯಾರ್ಥಿ ಸಂಘಟನೆಗಳ ಬೆಂಬಲವೂ ಸಿಕ್ಕಿತ್ತು. ಬಿಜೆಪಿ ಅಭ್ಯರ್ಥಿ ಸುರಭಿ ರಾಜ್ಕೊವಾರಿ ಅವರನ್ನು 12,000 ಮತಗಳ ಅಂತರದಿಂದ ಅಖಿಲ್ ಸೋಲಿಸಿ, ಜೈಲಿನಿಂದ ಸ್ಪರ್ಧಿಸಿ ಗೆಲುವು ಪಡೆದ ಮೊದಲ ಶಾಸಕರೆನಿಸಿದ್ದಾರೆ.












Click it and Unblock the Notifications