ಹೆಚ್ಚುತ್ತಿರುವ ವಾಯು ಮಾಲಿನ್ಯ: ಸುಪ್ರೀಂ ಕೋರ್ಟ್ ಆತಂಕ
ದೇಶದಲ್ಲಿ ವಾಯುಮಾಲಿನ್ಯ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದರಿಂದಾಗಿ, ಜನ ಸಾಮಾನ್ಯರು ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ.
ನವದೆಹಲಿ, ಜನವರಿ 17: ದೇಶದ ಮಹಾನಗರಗಳೂ ಸೇರಿದಂತೆ ಎಲ್ಲೆಡೆ ದಿನೇ ದಿನೇ ಹೆಚ್ಚಾಗುತ್ತಿರುವ ವಾಯು ಮಾಲಿನ್ಯದ ಬಗ್ಗೆ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದ್ದು, ಶೀಘ್ರವೇ ಸಂಬಂಧಪಟ್ಟ ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಅಮೆಕಸ್ ಕ್ಯೂರಿ ಹಾಗೂ ಹಿರಿಯ ವಕೀಲರಾದ ಹರೀಶಾ ಸಾಳ್ವೆ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂಬಿ ಲೋಕುರ್ ಹಾಗೂ ಪಿಸಿ ಪಂತ್ ಅವರುಳ್ಳ ಪೀಠ, ಎಲ್ಲೆಲ್ಲೂ ವಾಯು ಮಾಲಿನ್ಯ ದೊಡ್ಡ ಸಮಸ್ಯೆಯಾಗಿ ಮಾರ್ಪಡುತ್ತಿದೆ. ಇದನ್ನು ನಿವಾರಿಸಲು ಸದ್ಯಕ್ಕೆ ಸಾಧ್ಯವಿಲ್ಲ, ವರ್ಷಗಳೇ ಬೇಕಾಗುತ್ತದೆ ಎನ್ನುವುದಾದರೆ, ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ ಎಂದರು.
ಏತನ್ಮಧ್ಯೆ, ಸಾಳ್ವೆ ಅವರು, ಪ್ರತಿಯೊಂದು ನಗರಕ್ಕೂ ಶೇ. 100ರಷ್ಟು ಮಾಲಿನ್ಯ ಮುಕ್ತ ಎಂಬ ಪ್ರಮಾಣ ಪತ್ರ ನೀಡುವುದನ್ನು ಕಡ್ಡಾಯಗೊಳಿಸಬೇಕು. ಈ ಕ್ರಮವನ್ನು ಜಾರಿಗೊಳಿಸಲು ಇನ್ಶೂರೆನ್ಸ್ ಕಂಪನಿಗಳ ಸಹಾಯ ಪಡೆಯಬೇಕು ಎಂಬ ಅಭಿಪ್ರಾಯ ಮಂಡಿಸಿದರು.
ಇದೆಲ್ಲಾ ವಿಳಂಬವಾಗಬಹುದು ಹೇಳಿದ ನಾಯಪೀಠ, ಆದಷ್ಟು ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.