ನರೇಂದ್ರ ಮೋದಿ ವಿರುದ್ದ ಹರಿಹಾಯ್ದ ರಾಹುಲ್ ಗಾಂಧಿ
ನಾಸಿಕ್, ಅ 10: ಚುನಾವಣೆಯಲ್ಲಿ ಸುಳ್ಳಿನ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ ಎಲ್ಲಾ ವಿಭಾಗದಲ್ಲೂ ವಿಫಲವಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಾ ಪ್ರಹಾರ ನಡೆಸಿದ್ದಾರೆ.
ಮಹಾರಾಷ್ಟ್ರದ ನಾಸಿಕ್ ನಲ್ಲಿ ಶುಕ್ರವಾರ ( ಅ 10) ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ 'ಅಚ್ಚಾ ದಿನ್ ಆಯೇಗಾ' ಎನ್ನುತ್ತಿದ್ದ ಮೋದಿ ಈಗ 'ಜಲ್ದೀ ಟೀಕ್ ಹೋಜಾಯೇಗ', ಎನ್ನುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ದಲಿತರ ಮನೆಯಲ್ಲಿ ರಾಹುಲ್ ವಾಸ್ತವ್ಯ ಹೂಡಿದ್ದಾರೆ. ಅವರ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸಿದ್ದಾರೆ. ಹಾಗಾಗಿ ದಲಿತರಿಗೆ ಕಾಂಗ್ರೆಸ್ ಪಕ್ಷವೇ ದೇಶದ ಮುಂದಿನ ಭವಿಷ್ಯ ಎನ್ನುವುದು ಚೆನ್ನಾಗಿ ಅರಿತಿದೆ. ಕಳೆದ ಆರು ತಿಂಗಳಲ್ಲಿ ಬಿಜೆಪಿ ಸರಕಾರ ಸಾಧಿಸಿದ್ದೇನೆಂದು ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ಸಭೆಯಲ್ಲಿ ಮೋದಿ ವಿರುದ್ದ ಕಿಡಿಕಾರಿದ್ದಾರೆ. (ಮಹಾ ಚುನಾವಣೆ ಪೂರ್ವ ಸಮೀಕ್ಷೆ ಫಲಿತಾಂಶ)
ರಾಹುಲ್ ಗಾಂಧಿ ಭಾಷಣದ ಆಯ್ದಭಾಗ, ಇಂತಿದೆ:
> ಕಾಂಗ್ರೆಸ್ ಪಕ್ಷದ ವಿಚಾರಧಾರೆಯನ್ನು ದೇಶದಿಂದ ಕಿತ್ತೊಗೆಯ ಬೇಕೆಂದು ಬಿಜೆಪಿಯವರು ಹೇಳುತ್ತಾರೆ. ಕಾಂಗ್ರೆಸ್ ಮತ್ತು ಮಹಾರಾಷ್ಟ್ರದ ವಿಚಾರಧಾರೆ ಎರಡೂ ಒಂದೇ.
> ಅಮೆರಿಕಾದ ವಾಣಿಜ್ಯೋದ್ಯಮಿಗಳ ಜೊತೆ ಮೋದಿ ಗುಪ್ತ ಸಮಾಲೋಚನೆ ನಡೆಸಿದ್ದಾರೆ. ಭಾರತಕ್ಕೆ ಬಂದು ಹೂಡಿಕೆ ಮಾಡುವಂತೆ ಕೇಳಿಕೊಂಡಿದ್ದಾರೆ. ಔಷದಿ ಕ್ಷೇತ್ರದಲ್ಲಿ ಅಮೆರಿಕಾದ ಉದ್ಯಮಿಗಳು ಭಾರತಕ್ಕೆ ಬಂದರೆ ಕ್ಯಾನ್ಸರ್ ರೋಗದಿಂದ ಹೊರಬರಲು ತಗಲುವ ಖರ್ಚು ದ್ವಿಗುಣಗೊಳ್ಳಲಿದೆ. ಮೋದಿ ಸರಕಾರಕ್ಕೆ ಬಡವರ ಕಷ್ಟ ಬೇಕಾಗಿಲ್ಲ.
> ಕಾಂಗ್ರೆಸ್ ಸರಕಾರ ಆದಿವಾಸಿ ಕಾನೂನು ಜಾರಿಗೆ ತಂದು ನಿಮ್ಮ ಜಾಗವನ್ನು ನಿಮಗೇ ಕೊಟ್ಟಿದ್ದೇವೆ, ಬಿಜೆಪಿ ಏನು ಮಾಡಿದೆ? ದಲಿತರ, ಬಡವರ ಜೇಬಿಗೆ ಕೈಹಾಕಿ ಅದನ್ನು ಗುತ್ತಿಗೆದಾರರ ಜೇಬಿಗೆ ದುಡ್ಡು ತುಂಬಿಸಿದ್ದಾರೆ.
> ಗಡಿಭಾಗದಲ್ಲಿ ಪಾಕಿಸ್ತಾನದ ತಂಟೆ ಮುಂದುವರಿದಿದೆ. ಹತ್ತು ವರ್ಷದಲ್ಲಿ ಇದುವರೆಗೆ ನಡೆಯದಷ್ಟು ಫೈರಿಂಗ್ ಗಡಿಭಾಗದಲ್ಲಿ ನಡೆಯುತ್ತಿದೆ. ಮೋದಿ ಸರಕಾರ ಏನು ಮಾಡುತ್ತಿದೆ?
> ಪಾಕಿಸ್ತಾನ ಈ ಹಿಂದೆ ಈ ರೀತಿ ತಂಟೆಗೆ ಬಂದ ಉದಾಹರಣೆಗಳಿಲ್ಲ. ರಕ್ಷಣಾ ಇಲಾಖೆಗೆ ಮೋದಿ ಸರಕಾರದ ಸ್ಪಷ್ಟ ನಿರ್ದೇಶನ ಇಲ್ಲದೇ ಇರುವುದರಿಂದ ಈ ರೀತಿ ಆಗುತ್ತಿದೆ.
> ಗಡಿಭಾಗದಲ್ಲಿ ಪಾಕಿಸ್ತಾನದ ಫೈರಿಂಗ್ ನಡೆಯುತ್ತಿದೆ. ನಮ್ಮ ಸೈನಿಕರು, ಮಕ್ಕಳು ಸಾವನ್ನುಪ್ಪುತ್ತಿದ್ದಾರೆ. ಅಚ್ಚಾದಿನ್ ಆಯೇಗಾ ಎಂದು ಹೇಳುತ್ತಿದ್ದ ಮೋದಿ, ಈಗ 'ಜಲ್ದೀ ಟೀಕ್ ಹೋಜಾಯೇಗ' ಎನ್ನುತ್ತಿದ್ದಾರೆ.

> ಮುಂದಿನ ದಿನದಲ್ಲಿ ಬಡವರ, ರೈತರ, ಆದಿವಾಸಿಗಳ ಶಕ್ತಿ ಏನೆಂದು ನಾವು ತೋರಿಸುತ್ತೇವೆ.












Click it and Unblock the Notifications