ಗಣರಾಜ್ಯೋತ್ಸವ ಹಿನ್ನಲೆ: ದೆಹಲಿಯಲ್ಲಿ ಹೈ ಅಲರ್ಟ್
ನವದೆಹಲಿ, ಜನವರಿ 17: ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಗುಪ್ತಚರ ಇಲಾಖೆ ಮೂರು 'ಟೆರರ್ ಅಲರ್ಟ್'ಗಳನ್ನು ನೀಡಿದೆ. ಹಿಜ್ಬುಲ್ಲಾ ಮುಜಾಹಿದ್ದೀನ್, ಲಷ್ಕರ್ ಇ ತಯ್ಯಬಾ, ಬಬ್ಬರ್ ಖಲ್ಸಾ ಇಂಟರ್ನ್ಯಾಷನಲ್ ಮತ್ತು ಇಸ್ಲಾಮಿಕ್ ಸ್ಟೇಟ್ ಉಗ್ರರಿಂದ ಪ್ರೇರಣೆಯಾದವರು ದೆಹಲಿ ಸುತ್ತ ಮುತ್ತ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ತನ್ನ ಎಚ್ಚರಿಕೆ ನೀಡಿದೆ.
'ಎಚ್ಚರಿಕೆಯಲ್ಲಿ ವಿಶೇಷವಿಲ್ಲ. ಇದೊಂದು ಸಾಮಾನ್ಯ ಎಚ್ಚರಿಕೆ," ಎಂದು ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಎಂದಿನಂತೆ ಭದ್ರತಾ ಕ್ರಮಗಳನ್ನೂ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾತ್ರವಲ್ಲ ರಾಷ್ಟ್ರ ರಾಜಧಾನಿಯ ಪ್ರಮುಖ ಪ್ರದೇಶಗಳಿಗೆ ದಾಳಿ ಮಾಡುವುದು ಅಷ್ಟು ಸುಲಭವಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹೈವೇ ದಾಳಿಯ ಮಾದರಿಯಲ್ಲಿ ಇಲ್ಲಿ ದಾಳಿ ನಡೆಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಸಾಮಾನ್ಯವಾಗಿ ಹೆದ್ದಾರಿಗಳಲ್ಲಿ ಭದ್ರತೆ ಅಷ್ಟೊಂದು ಬಿಗಿಯಾಗಿ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಉಗ್ರರು ಹೈವೆಗಳನ್ನೇ ಗುರಿಯಾಗಿಸಿ ದಾಳಿ ನಡೆಸುವುದು ಸಾಮಾನ್ಯ. ಇತ್ತೀಚೆಗೆ ನಡೆದೆ ಹಿಜ್ಬುಲ್ಲಾ ಮುಜಾಹಿದ್ದಿನ್ ಮತ್ತು ಲಷ್ಕರ್ ಇ ತಯ್ಯಬಾ ಸಭೆಗಳಲ್ಲಿಯೂ ಕಾಶ್ಮೀರದಿಂದ ಹೊರಗೆ ದಾಳಿಗಳನ್ನು ನಡೆಸಬೇಕು ಎಂಬ ನಿರ್ಧಾರಕ್ಕೆ ತಳೆಯಲಾಗಿತ್ತು ಎನ್ನಲಾಗಿದೆ. ಕಳೆದ ವಾರ ವೈರಲ್ ಆಗಿದ್ದ ವೀಡಿಯೋ ಒಂದರಲ್ಲಿ ಎರಡೂ ಸಂಘಟನೆಗಳು ಕಾಶ್ಮೀರ ಕಣಿವೆಯ ಹೊರಗೆ ದಾಳಿಗೆ ಯೋಜನೆ ರೂಪಿಸುತ್ತಿರುವುದು ಕಾಣಬಹುದು.
ಎರಡೂ ಉಗ್ರರ ಬಳಿ ಹೆದ್ದಾರಿ ಪಡೆಗಳಿದ್ದು, ಇವು ಕಾಶ್ಮೀರ ಕಣಿವೆಯಲ್ಲಿ ಸೇನೆಯ ವಾಹನಗಳನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಾ ಬಂದಿವೆ. ಇದೆ ತಂಡಗಳು ರಾಜಧಾನಿಯ ಸಮೀಪದ ಹೈವೇಗಳಲ್ಲಿಯೂ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದೇ ರೀತಿಯ ಸೂಚನೆಯನ್ನು 2016, ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದೂ ಹೊರಡಿಸಲಾಗಿತ್ತು. ಇದರಲ್ಲಿ ಕೂಡಾ ರಾಜಧಾನಿಯ ಪಕ್ಕದ ಹೆದ್ದಾರಿಗಳಲ್ಲಿರುವ ವಾಹನಗಳನ್ನೇ ಗುರಿಯಾಗಿಸಿವೆ ಕಾಶ್ಮೀರ ಮೂಲದ ಭಯೋತ್ಪಾದಕ ಸಂಘಟನೆಗಳು ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು. ಅವತ್ತು ಕೂಡಾ ವಿಶೇಷ ಭದ್ರತೆ ಮಾಡಲಾಗಿತ್ತು. ಇದರಿಂದ ಯಾವುದೇ ಅವಘಡಗಳಾಗದೆ ಸ್ವಾತಂತ್ರ್ಯ ದಿನಾಚರಣೆ ಸುಸೂತ್ರವಾಗಿ ನಡೆದಿತ್ತು. (ಒನ್ ಇಂಡಿಯಾ ಸುದ್ದಿ)