ಅಗಸ್ಟಾವೆಸ್ಟ್ಲ್ಯಾಂಡ್ಗೂ ಗಾಂಧಿ ಕುಟುಂಬಕ್ಕೂ ಸಂಬಂಧವಿಲ್ಲ: ಆಂಟನಿ
ನವದೆಹಲಿ, ಜುಲೈ 19: ಅಗಸ್ಟಾವೆಸ್ಟ್ಲ್ಯಾಂಡ್ ಪ್ರಕರಣದ ತನಿಖೆಗೆ ಮೊದಲು ಆದೇಶಿಸಿದ್ದೇ ಕಾಂಗ್ರೆಸ್ ಪಕ್ಷ. ಈ ಪ್ರಕರಣಕ್ಕೂ ಗಾಂಧಿ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಆಂಟನಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯು ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅಗಸ್ಟಾವೆಸ್ಟ್ಲ್ಯಾಂಡ್ ಪ್ರಕರಣದ ತನಿಖೆ ನಡೆಸುವ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೆವು. ತನಿಖೆ ನಮ್ಮ ಆದೇಶವಾಗಿತ್ತು. ಈ ಪ್ರಕರಣಕ್ಕೂ ಗಾಂಧಿ ಕುಟುಂಬಕ್ಕೂ ಸಂಬಂಧವಿಲ್ಲ. ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ' ಎಂದಿದ್ದಾರೆ.

ಅಗಸ್ಟಾವೆಸ್ಟ್ಲ್ಯಾಂಡ್ ಮತ್ತು ಫಿನ್ಮೆಕ್ಕಾನಿಕಾ ಮಾಜಿ ನಿರ್ದೇಶಕರಾದ ಜಿಸೆಪ್ ಒರ್ಸಿ ಮತ್ತು ಬ್ರುನೊ ಸ್ಪಾಗ್ನೋಲಿನಿ ಹಾಗೂ ಐಎಎಫ್ ಮಾಜಿ ಮುಖ್ಯಸ್ಥ ಎಸ್ಪಿ ತ್ಯಾಗಿ ಅವರು ವಿವಿಐಪಿ ಹೆಲಿಕಾಪ್ಟರ್ ಖರೀದಿ ವೇಳೆ ಲಂಚ ವ್ಯವಹಾರ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ನ್ಯಾಯಾಲಯಕ್ಕೆ ಬುಧವಾರ ಹೊಸದಾಗಿ ದೋಷಾರೋಪ ಸಲ್ಲಿಸಿದೆ.
ಪಟಿಯಾಲ ಹೌಸ್ ಕೋರ್ಟ್ನ ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರಿಗೆ ಸಲ್ಲಿಸಿರುವ ದೋಷಾರೋಪವನ್ನು ಜುಲೈ 20ರಂದು ಪರಿಗಣನೆಗೆ ತೆಗೆದುಕೊಳ್ಳಲಿದೆ.

ಬಿಜೆಪಿ ವಿರುದ್ಧ ಆರೋಪ:
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಸಲುವಾಗಿ ಹಗರಣದಲ್ಲಿನ ಮಧ್ಯವರ್ತಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಎರಡು ದಿನಗಳ ಹಿಂದೆ ದುಬೈನಲ್ಲಿ ಬಂಧನಕ್ಕೆ ಒಳಗಾದ ಕ್ರಿಶ್ಚಿಯನ್ ಮೈಕಲ್ ಅವರ ವಕೀಲರು ಕೇಂದ್ರ ಸರ್ಕಾರ ಹಾಗೂ ಅದರ ಸಂಸ್ಥೆಗಳು ಸೋನಿಯಾ ಗಾಂಧಿ ಅವರ ವಿರುದ್ಧ ಆರೋಪ ಮಾಡುವ ತಪ್ಪೊಪ್ಪಿಗೆ ಹೇಳಿಕೆ ನೀಡುವಂತೆ ಒತ್ತಡ ಹೇರುತ್ತಿರುವುದನ್ನು ಬಹಿರಂಗಪಡಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.












Click it and Unblock the Notifications