ಸೆಲ್ಫಿ, FB ಲೈವ್, ಆತ್ಮಹತ್ಯೆ ಮತ್ತು ಮಾನವೀಯತೆಯ ಕ್ರೂರ ಅಣಕ!
ಶವದೆದುರಲ್ಲೂ ಸೆಲ್ಫಿ ತೆಗೆದುಕೊಳ್ಳುವ, ಆತ್ಮಹತ್ಯೆಯನ್ನು FB ಲೈವ್ ಮಾಡುವ ಮಟ್ಟಿನ ವಿಕೃತಿಯನ್ನು ಮಾನವೀಯತೆಯ ಅಣಕ ಎನ್ನದೆ ಏನೆನ್ನಬೇಕು?
ಆಗ್ರಾದಲ್ಲೊಬ್ಬ 24 ವರ್ಷದ ಯುವಕ ತಾನು ಆತ್ಮಹತ್ಯೆ ಮಾಡಿಕೊಂಡ ವಿಡಿಯೋವನ್ನು ಫೇಸ್ ಬುಕ್ ಲೈವ್ ಮಾಡಿದ್ದಾನೆ! ಇದನ್ನು 2750 ಜನ ನೋಡುತ್ತಿದ್ದರೂ ಯಾರೊಬ್ಬರೂ ಪೊಲೀಸರಿಗೆ ಮಾಹಿತಿ ನೀಡಿಲ್ಲ! 1:09 ನಿಮಿಷಗಳ ಈ ವಿಡಿಯೋದಲ್ಲಿ ಆತ, 'ತನಗೆ ಜೀವನದಲ್ಲಿ ಜಿಗುಪ್ಸೆ ಬಂದಿದೆ' ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವಿಡಿಯೋವನ್ನು ನೋಡುತ್ತಿರುವವರ್ಯಾರಾದರೂ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಆತನನ್ನು ಬದುಕಿಸಬಹುದಿತ್ತೇನೋ!
ರಕ್ತಸಿಕ್ತ ಶವದೆದುರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದೇ? ಇದೇನಾ ಮಾನವೀಯತೆ?!
ದೇಶದಲ್ಲಿ ಇಂಥ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ಉಂಡಿದ್ದು, ತಿಂದಿದ್ದು, ಬಿದ್ದಿದ್ದು, ಎದ್ದಿದ್ದು ಎಲ್ಲವೂ ಸ್ಟೇಟಸ್ ಆಗಬಹುದು. ಆದರೆ ತಾನೇ ಸತ್ತಿದ್ದು, ಇನ್ಯಾರೋ ಸತ್ತಿದ್ದು ಇವೆಲ್ಲವೂ ಸ್ಟೇಟಸ್ ಆಗಿ, ಸಾಮಾಜಿಕ ಜಾಲತಾಣವೆಂಬ ಸಂಪರ್ಕಸೇತುವೆಯನ್ನು ಗಬ್ಬೇಳಿಸಬೇಕಾ?
ಆತ್ಮಹತ್ಯೆಯ FB ಲೈವ್
ಉತ್ತರ ಪ್ರದೇಶದ ಆಗ್ರಾದ ಮುನ್ನಾ ಕುಮಾರ್ ಎಂಬಾತ ಬಿಎಸ್ಸಿ ಪದವೀಧರ. ಸೇನೆ ಸೇರಬೇಕು ಎಂಬುದು ಆತನ ಕನಸಾಗಿತ್ತು. 24 ವರ್ಷದ ಈತ ಐದು ಬಾರಿ ಇದಕ್ಕೆ ಸಂಬಂಧಿಸಿದ ಪರೀಕ್ಷೆ ಬರೆದು ಫೇಲ್ ಆಗಿದ್ದ. ಇದರಿಂದ ಮನನೊಂದು ಖಿನ್ನತೆ ಜಾರಿದ್ದ. ನಂತರ ಆತನಿಗಾಗಿ ಮನೆಯಲ್ಲಿ ಅಂಗಡಿಯೊಂದನ್ನು ತೆರೆದುಕೊಟ್ಟು ವ್ಯವಹಾರ ನೋಡಿಕೊಳ್ಳುವಂತೆ ಹೇಳಿದ್ದರು. ಆದರೆ ಆತ ಖಿನ್ನತೆಯಿಂದ ಹೊರಬರಲಾರದೆ ಆತ್ಮಹತ್ಯೆ ಮಾಡಿಕೊಂಡ. ಆರು ಪುಟದ ಡೆತ್ ನೋಟನ್ನು ಬರೆದಿರುವ ಈತ, ತಾನು ಸಾಯುವ ಕೊನೆಯ ಕ್ಷಣಗಳನ್ನು ಎಫ್ ಬಿ ಲೈವ್ ಮಾಡಿದ್ದ. 2750 ಜನ ಇದನ್ನು ವೀಕ್ಷಿಸಿದ್ದರೂ ಯಾರೊಬ್ಬರೂ ಇದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ ಎಂಬುದು ಮಾನವೀಯತೆಯ ಅಣಕವಲ್ಲದೆ ಇನ್ನೇನು?!
ಶವದೆದುರು ಸೆಲ್ಫಿ
ಸಾಮಾಜಿಕ ಜಾಲತಾಣಗಳು, ಸ್ಮಾರ್ಟ್ ಫೋನ್ ಗಳನ್ನು ಮನುಷ್ಯ ಎಷ್ಟರ ಮಟ್ಟಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ ಎಂಬುದಕ್ಕೆ ಸಾಕ್ಷಿ ಇದು. ಜು.11 ರಂದು ರಾಜಸ್ಥಾನದ ಬಲ್ಮೇರ್ ಎಂಬಲ್ಲಿ ರಸ್ತೆ ಅಪಘಾತ ಸಂಭವಿಸಿ ಮೂವರು ವಿಲವಿಲ ಒದ್ದಾಡುತ್ತ ಪ್ರಾಣ ಬಿಡುತ್ತಿದ್ದರೆ ಯುವಕನೊಬ್ಬ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಅಲ್ಲಿ ನೆರೆದಿದ್ದ ಯಾರಾದರೂ ಆ ಮೂವರನ್ನು ಆಸ್ಪತ್ರೆಗೆ ಸೇರಿಸುವ ಯತ್ನ ಮಾಡಿದ್ದರೆ ಬಹುಶಃ ಅವರು ಮೂರು ಜನ ಬದುಕುಳಿಯುತ್ತಿದ್ದರೇನೋ!
ಅಮಾಯಕ ಆದಿವಾಸಿಯ ಹತ್ಯೆ
ಕಳೆದ ಫೆಬ್ರವರಿಯಲ್ಲಿ ಕೇರಳದ ಪಾಲಕ್ಕಾಡ್ ಎಂಬಲ್ಲಿ ಬುಡಕಟ್ಟು ಸಮುದಾಯದ ಮಧು ಎಂಬ ಯುವಕನನ್ನು ಕಳ್ಳತನದ ಆರೋಪದ ಮೇಲೆ ಹೊಡೆದು ಸಾಯಿಸಲಾಗಿತ್ತು. ಆತನನ್ನು ಹೊಡೆದು ಸಾಯಿಸುತ್ತಿರುವುದನ್ನು ಕೆಲವರು ಸೆಲ್ಫಿ ತೆಗೆದುಕೊಂಡು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಘಟನೆಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆದಿದ್ದು.
ಇಂಥ ಘಟನೆಗಳಿಗೆ ಪೂರ್ಣವಿರಾಮ ಹಾಕುವವರ್ಯಾರು?
ಇಂಥ ಅಮಾನವೀಯ ಘಟನೆಗಳು ಪದೇ ಪದೇ ನಡೆಯುತ್ತಲೇ ಇವೆ. ಬೆಂಗಳೂರಿನಲ್ಲಿ 2016 ರ ಫೆಬ್ರವರಿಯಲ್ಲಿ ಅಪಘಾತದಿಂದ ಹರೀಶ್ ಎಂಬ ಯುವಕನ ಒಂದು ಕಾಲು ಕತ್ತರಿಸಿಬಿದ್ದಿದ್ದಾಗಲೂ ಜನರು ಅದನ್ನು ವಿಡಿಯೋ ಶೋಟ್ ಮಾಡಿದ್ದರೇ ವಿನಃ, ಆತನಿಗೆ ಸಹಾಯ ಮಾಡುವ ಮಾನವೀಯತೆಯನ್ನು ಮೆರೆಯಲಿಲ್ಲ. ಅಷ್ಟಕ್ಕೂ ಇಂಥ ಅಮಾನವೀಯ ಘಟನೆಗಳಿಗೆ ಪೂರ್ಣವಿರಾಮ ಹಾಕುವವರ್ಯಾರು?