ಐಎನ್ಎಕ್ಸ್ ಮೀಡಿಯಾ ಪ್ರಕರಣ, ಪಿ. ಚಿದಂಬರಂ ವಿಚಾರಣೆ ಸಾಧ್ಯತೆ
ನವದೆಹಲಿ, ಮಾರ್ಚ್ 2: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂರನ್ನು ಸಿಬಿಐ ಪ್ರಶ್ನೆ ಮಾಡುವ ಸಾಧ್ಯತೆ ಇದೆ. ಸದ್ಯ ಸಿಬಿಐ ಕಾರ್ತಿ ಚಿದಂಬರಂರನ್ನು ವಿಚಾರಣೆ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಮಾಜಿ ಹಣಕಾಸು ಸಚಿವರಿಗೂ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ.
ಈ ವಾರದ ಆರಂಭದಲ್ಲಿ ಕಾರ್ತಿ ಚಿದಂಬರಂರನ್ನು ಸಿಬಿಐ ಬಂಧಿಸಿತ್ತು. ಮತ್ತು ಗುರುವಾರ ಅವರನ್ನು ಐದು ದಿನಗಳ ಸಿಬಿಐ ಕಸ್ಟಡಿಗೆ ನೀಡಲಾಗಿತ್ತು. ಇದೀಗ ಸಿಬಿಐ ಕಾರ್ತಿ ಚಿದಂಬರಂರನ್ನು ತೀವ್ರ ವಿಚಾರಣೆ ನಡೆಸುತ್ತಿದೆ.
ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ ಅಂಗೀಕಾರ ಪಡೆದುಕೊಳ್ಳಲು ಕಾರ್ತಿ ಚಿದಂಬರಂ ತಮ್ಮ ತಂದೆಯ ಕಚೇರಿಯ ಪ್ರಭಾವವನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪಗಳಿವೆ. ಜತೆಗೆ ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಚಿ ಚಿದಂಬರಂರನ್ನು ಭೇಟಿಯಾಗಿದ್ದಾಗ ತಮ್ಮ ಮಗನಿಗೆ ಸಹಾಯ ಮಾಡುವಂತೆ ಹೇಳಿದ್ದರು ಎಂದು 'ಇಡಿ' ವರದಿಯನ್ನೂ ಸಲ್ಲಿಸಿದೆ.

ಈ ಹಿನ್ನಲೆಯಲ್ಲಿ 'ಒನ್ಇಂಡಿಯಾ'ಗೆ ಪ್ರತಿಕ್ರಿಯೆ ನೀಡಿರುವ ಸಿಬಿಐ ಅಧಿಕಾರಿಗಳು, "ಎಲ್ಲಾ ದಾಖಲೆಗಳನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ಒಂದೊಮ್ಮೆ ಅನುಮಾನಗಳು ಮೂಡಿದಲ್ಲಿ ಪರಿಹರಿಸಲು ಚಿದಂಬರಂರನ್ನೂ ಪ್ರಶ್ನೆ ಮಾಡಬಹುದು. ಆದರೆ ಈ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಸದ್ಯಕ್ಕೆ ಮಾರ್ಚ್ 5ರವರೆಗೆ ನಮ್ಮ ವಶದಲ್ಲಿರುವ ಕಾರ್ತಿ ಚಿದಂಬರಂ ವಿಚಾರಣೆ ನಡೆಸುತ್ತಿದ್ದೇವೆ," ಎಂದು ಹೇಳಿದ್ದಾರೆ.
ಕಾರ್ತಿ ಚಿದಂಬರಂರನ್ನು ಅವರ ಲೆಕ್ಕಪರಿಶೋಧಕ ಭಾಸ್ಕರ ರಾಮನ್ ಜತೆ ಮುಖಾಮುಖಿ ಪ್ರಶ್ನೆ ಮಾಡಲಾಗುತ್ತದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. ಭಾಸ್ಕರ್ ರಾಮನ್ ಕಾರ್ತಿ ಚಿದಂಬರಂರ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು.












Click it and Unblock the Notifications