ಪಂಚರಾಜ್ಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಜಿ-23 ತಂಡದಲ್ಲಿ ಕಾಣಿಸಿಕೊಂಡ ಶಶಿ ತರೂರ್
ನವದೆಹಲಿ, ಮಾರ್ಚ್ 16: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಇದೀಗ ಒಡೆದ ಮನೆಯಾಗಿದೆ. ಸೋಲಿನ ಪರಾಮರ್ಶೆಗೆ ಜಿ-23 ಸದಸ್ಯರು ನಡೆಸಿದ ಸಭೆಯಲ್ಲಿ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಕಾಣಿಸಿಕೊಂಡಿದ್ದಾರೆ.
ದೆಹಲಿಯಲ್ಲಿರುವ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ನಿವಾಸದಲ್ಲಿ ಜಿ-23 ನಾಯಕರು ಔತಣಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ ಪಕ್ಷದ ಹಿರಿಯ ಮುಖಂಡ ಕಪಿಲ್ ಸಿಬಲ್, ಶಶಿ ತರೂರ್, ಆನಂದ್ ಶರ್ಮಾ, ಮನೀಶ್ ತಿವಾರಿ, ಭೂಪಿಂದರ್ ಹೂಡಾ, ಅಖಿಲೇಶ್ ಪ್ರಸಾದ್ ಸಿಂಗ್, ಪೃಥ್ವಿರಾಜ್ ಚವ್ಹಾಣ್, ರಾಜ್ ಬಬ್ಬರ್, ಪಿಜೆ ಕುರಿಯನ್ ಮತ್ತು ಮಣಿಶಂಕರ್ ಅಯ್ಯರ್ ಸೇರಿದಂತೆ ಬಹುತೇಕ ಜಿ-23 ಸದಸ್ಯರು ಸೇರಿಕೊಂಡಿದ್ದರು.
ಗಾಂಧಿ ಕುಟುಂಬದ ಬಗ್ಗೆ ಮಾತನಾಡುವವರಿಗೆ ತಿರುಗೇಟು ನೀಡುವುದರಲ್ಲೇ ಹೆಚ್ಚು ಖ್ಯಾತರಾಗಿರುವ ಶಶಿ ತರೂರ್ ಜಿ-23 ತಂಡದೊಂದಿಗೆ ಗುರುತಿಸಿಕೊಂಡಿರುವುದು ಅಚ್ಚರಿ ಮೂಡಿಸುತ್ತಿದೆ. ಇನ್ನೊಂದು ಕಡೆ ಗಾಂಧಿ ಕುಟುಂಬದ ಸಹವರ್ತಿ ಎನಿಸಿರುವ ಮಣಿಶಂಕರ್ ಅಯ್ಯರ್ ಸಹ ಬಂಡಾಯ ನಾಯಕರ ತಂಡಕ್ಕೆ ಸೇರಿಕೊಂಡಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲವೇ ಎನ್ನುವ ಅನುಮಾನಕ್ಕೆ ಪುಷ್ಠಿ ನೀಡುವಂತೆ ಮಾಡಿದೆ.

ಪಂಜಾಬ್ ಅನ್ನು ಕಳೆದುಕೊಂಡ ಕಾಂಗ್ರೆಸ್:
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಯಾವೊಂದು ರಾಜ್ಯದಲ್ಲೂ ಹೇಳಿಕೊಳ್ಳುವಂತಹ ಸಾಧನೆ ಮಾಡಲಿಲ್ಲ. ಕಾಂಗ್ರೆಸ್ ತನ್ನಲ್ಲೇ ಮಾಡಿಕೊಂಡ ಆಂತರಿಕ ಎಡವಟ್ಟುಗಳಿಂದ ಕೈಯಲ್ಲಿದ್ದ ಪಂಜಾಬ್ ಅನ್ನು ಆಮ್ ಆದ್ಮಿ ಪಕ್ಷಕ್ಕೆ ಬಿಟ್ಟುಕೊಟ್ಟಿತು. ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರುವುದರಲ್ಲಿ ಮತ್ತೊಮ್ಮೆ ಸೋತಿತು. ಇನ್ನು ಪ್ರಿಯಾಂಕಾ ಗಾಂಧಿಯವರ ನಿರಂತರ ಪ್ರಚಾರದ ಹೊರತಾಗಿಯೂ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯವಾಗಿ ಸೋಲು ಕಂಡಿತು. ಇದು ಕಾಂಗ್ರೆಸ್ ಹಿರಿಯ ನಾಯಕರ ನಿದ್ದೆಗೆಡಿಸುವಂತೆ ಮಾಡಿತು.
ಮೊದಲು ಕಪಿಲ್ ಸಿಬಲ್ ನಿವಾಸದಲ್ಲಿ ಸಭೆ ನಿಗದಿ:
ಕಾಂಗ್ರೆಸ್ ಜಿ-23 ನಾಯಕರ ಸಭೆಯನ್ನು ಮೊದಲು ಕಪಿಲ್ ಸಿಬಲ್ ನಿವಾಸದಲ್ಲಿ ನಿಗದಿಗೊಳಿಸಲಾಗಿತ್ತು. ಆದರೆ ಗಾಂಧಿ ಕುಟುಂಬದ ಬಗ್ಗೆ ನೇರವಾಗಿ ವಾಗ್ದಾಳಿ ನಡೆಸುವ ಅವರ ನಿವಾಸದಲ್ಲಿನ ಸಭೆಗೆ ಹಾಜರಾಗಲು ಕೆಲವು ನಾಯಕರು ಹಿಂದೇಟು ಹಾಕಿದ ಹಿನ್ನೆಲೆ ಗುಲಾಂ ನಬಿ ಆಜಾದ್ ನಿವಾಸದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತು ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಬಗ್ಗೆ ಸಿಬಲ್ ಅಸಮಾಧಾನ:
ಪಂಚ ರಾಜ್ಯ ವಿಧಾನಸಭೆ ಚುನಾವಣೆ ಸೋಲಿನ ನಂತರ ಭಾನುವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ನಡೆಸಿದ್ದು, ಅಲ್ಲಿ ನಡೆದ ಚರ್ಚೆ ಕುರಿತು ಪಕ್ಷದ ಹಿರಿಯ ಮುಖಂಡ ಕಪಿಲ್ ಸಿಬಲ್ ಅಸಮಾಧಾನ ಹೊರ ಹಾಕಿದ್ದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಅಧ್ಯಕ್ಷ ಸ್ಥಾನದಲ್ಲಿ ಸೋನಿಯಾ ಗಾಂಧಿಯವರನ್ನೇ ಮುಂದುವರಿಸುವುದಕ್ಕೆ ಈ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ನವದೆಹಲಿ ಎಐಸಿಸಿ ಕಚೇರಿಯಲ್ಲಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು. ನಾಲ್ಕು ಗಂಟೆಗಳವರೆಗೂ ನಡೆದ ಸುದೀರ್ಘ ಸಭೆ ನಂತರ ಮಾತನಾಡಿದ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿಯವರೇ ಎಐಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ನಾವು ಅವರ ನಾಯಕತ್ವದ ಮೇಲೆ ವಿಶ್ವಾಸವಿಡಬೇಕಿದೆ ಎಂದರು.
ಯಾವ ತ್ಯಾಗಕ್ಕೂ ಸಿದ್ಧ ಎಂದ ಸೋನಿಯಾ ಗಾಂಧಿ:
ಮೂಲಗಳ ಪ್ರಕಾರ, ಗಾಂಧಿ ಕುಟುಂಬದಿಂದಾಗಿ ಕಾಂಗ್ರೆಸ್ ಪಕ್ಷವು ದುರ್ಬಲಗೊಳ್ಳುತ್ತಿದೆ ಎಂದು ಕೆಲವರು ಭಾವಿಸುತ್ತಿರುವ ಬಗ್ಗೆ ಸೋನಿಯಾ ಗಾಂಧಿ ಸಭೆಯಲ್ಲಿ ಪ್ರಸ್ತಾಪಿಸಿದರು. ನಿಮ್ಮೆಲ್ಲರಲ್ಲೂ ಅದೇ ರೀತಿಯ ಅಭಿಪ್ರಾಯವಿದ್ದರೆ, ನಾನು ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧ," ಎಂದು ಅವರು ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ನಮ್ಮ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದ್ದರು.
ಮಾರ್ಚ್ 13ರಂದು ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಾರೆ ಎಂದು ವಿಶ್ಲೇಷಿಸಲಾಗುತ್ತಿತ್ತು. ಆದರೆ ಅಂಥ ಯಾವುದೇ ಬೆಳವಣಿಗೆಗಳು ನಡೆಯಲಿಲ್ಲ. ಅದರ ಬದಲಿಗೆ ಕಾಂಗ್ರೆಸ್ ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆಗಳನ್ನು ತರುವುದಕ್ಕೆ ಸೋನಿಯಾ ಗಾಂಧಿ ಸೂಚಿಸಿದ್ದರು.












Click it and Unblock the Notifications