ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೇ 'ತುಕ್ಕು ಹಿಡಿದ ಇವಿಎಂ ರಾಜಕಾರಣ'
ಇವಿಎಂ (ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್, ವಿದ್ಯುನ್ಮಾನ ಮತಯಂತ್ರ) ಸರಿಯಿಲ್ಲ, ಬ್ಯಾಲೆಟ್ ಪೇಪರ್ ನಲ್ಲೇ ಚುನಾವಣೆ ನಡೆಯಬೇಕೆಂದು ಒಂದೇ ಸಮನೆ ದಾಂಗುಡಿ ಇಡುತ್ತಿದ್ದ ಕಾಂಗ್ರೆಸ್ ಆದಿಯಾಗಿ, ಇತರ ಪಕ್ಷಗಳು, ಸದ್ಯ ಇವಿಎಂ ಬಗ್ಗೆ ತಕರಾರು ಎತ್ತುತ್ತಿಲ್ಲ.
ಉಪಚುನಾವಣೆಯಲ್ಲಿ ಬಿಜೆಪಿಯ ಸತತ ಸೋಲು, ಕರ್ನಾಟಕದಲ್ಲಿ ಸಮ್ಮಿಶ್ರ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್, ಬಿಎಸ್ಪಿ, ಎಸ್ಪಿ ಮುಂತಾದ ಪಕ್ಷಗಳಿಗೆ ಇವಿಎಂ ಮೇಲೆ ಇದ್ದಕ್ಕಿದ್ದಂತೇ ನಂಬಿಕೆ ಬಂದಂತಿದೆ. ಅದೇ, ಬಿಜೆಪಿ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದ್ದರೆ?
ಊಹಿಸಿಕೊಳ್ಳಲು ಅಂತ ಕಷ್ಟವಾಗುವಂತದ್ದು ಏನೂ ಆಗುತ್ತಿರಲಿಲ್ಲ. ಜನಾದೇಶ ನಮ್ಮ ಪರವಾಗಿರಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು, ಬಿಜೆಪಿಯೇತರ ಪಕ್ಷಗಳು ಕಂಡುಕೊಂಡಿರುವ ಹೊಸದಾರಿಯೇ, ಇವಿಎಂ ಮೇಲೆ ಗೂಬೆ ಕೂರಿಸುವುದು ಎನ್ನುವುದು ಇವರ ನಿಲುವಿನಿಂದ ಸ್ಪಷ್ಟವಾಗುತ್ತಿದೆ.
ಇತ್ತೀಚೆಗಿನ ಉದಾಹರಣೆಯನ್ನೇ ತೆಗೆದುಕೊಳ್ಳೋಣ, ದಕ್ಷಿಣಕನ್ನಡ ಜಿಲ್ಲೆಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ನೆಲಕಚ್ಚಿತ್ತು. ಬಂಟ್ವಾಳದಲ್ಲಿ ಸೋತಿದ್ದ ರಮಾನಾಥ ರೈ, ಇವಿಎಂ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ಅದೇ ಗೆದ್ದಿದ್ದ ಯು ಟಿ ಖಾದರ್, ನನ್ನ ಗೆಲುವಿನ ಅಂತರ ಇನ್ನೂ ಜಾಸ್ತಿಯಾಗಿರಬೇಕಿತ್ತು ಎಂದು ಇವಿಎಂ ಮೇಲೆ ಸಂಶಯ ಪಟ್ಟಿದ್ದರೇ? ವಿಜಯಪುರದಲ್ಲಿ ಯಾವುದೋ ಮನೆಯಲ್ಲಿ ವಿವಿ ಪ್ಯಾಟ್ ಮೆಷಿನ್ ಸಿಕ್ಕಿತ್ತು, ಸಮ್ಮಿಶ್ರ ಸರಕಾರದಲ್ಲಿ ಯಾರಾದರೂ ಇದರ ಬಗ್ಗೆ ತಲೆಕೆಡಿಸಿಕೊಂಡಿದ್ರಾ?
ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಜೆಡಿಎಸ್ ವರಿಷ್ಠ ದೇವೇಗೌಡ್ರು ಮತ್ತು ಕಾಂಗ್ರೆಸ್ ಮುಖಂಡ ಕೃಷ್ಣ ಭೈರೇಗೌಡ, ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಯಲಿ ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಲಬಹುದಾಗಿದೆ. ಆದರೆ, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಮತ್ತು ಕೃಷ್ಣ ಭೈರೇಗೌಡ ಗೆದ್ದು ಶಾಸಕ, ಸಚಿವರಾದ ನಂತರ ಇವಿಎಂ ಬಗ್ಗೆ ಯಾಕೆ ಇವರು ಸೊಲ್ಲೆತ್ತುತ್ತಿಲ್ಲ. ಮುಂದೆ ಓದಿ..

ಇವಿಎಂ ಸರಿಯಿಲ್ಲ ಎನ್ನುವ ಇವರ ನಿಲುವು ಬಟಾಬಯಲಾಯಿತು
ಉತ್ತರಪ್ರದೇಶದ ಚುನಾವಣೆಯ ನಂತರ, ವಿರೋಧ ಪಕ್ಷಗಳೆಲ್ಲಾ ಬಿಜೆಪಿ ವಿರುದ್ದ 'ಇವಿಎಂ' ರಾಜಕಾರಣ ಮಾಡಿದ್ದವು. ಇದಾದ ನಂತರ ಗುಜರಾತ್ ಚುನಾವಣೆಯ ವೇಳೆಯೂ ಇದು ಮುಂದುವರಿಯಿತು. ಆದರೆ, ಉಪಚುನಾವಣೆಯಲ್ಲಿ ಬಿಜೆಪಿ ಸಾಲುಸಾಲು ಸೋಲುತ್ತಿದ್ದಂತೇ, ಜೊತೆಗೆ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ, ವಿರೋಧ ಪಕ್ಷಗಳು ಇವಿಎಂ ಬಗ್ಗೆ ಚಕಾರವೆತ್ತುವುದನ್ನು ನಿಲ್ಲಿಸಿತು. ಅಂದರೆ, ತಾವು ಗೆದ್ದರೆ ಇವಿಎಂ ಸರಿಯಿದೆ, ಸೋತರೆ ಇವಿಎಂ ಸರಿಯಿಲ್ಲ ಎನ್ನುವ ಇವರ ನಿಲುವೇನಿದೆಯೋ ಅದು ಬಟಾಬಯಲಾಗುತ್ತಾ ಬರುತ್ತಿದೆ.

ವಿರೋಧ ಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿ ಪರಿಣಮಿಸಿದ ಇವಿಎಂ
ನರೇಂದ್ರ ಮೋದಿ ಸರಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ವಿರೋಧ ಪಕ್ಷಗಳಿಗೆ ಇವಿಎಂ ಒಂದು ಅಸ್ತ್ರವಾಗಿ ಪರಿಣಮಿಸಿದೆ. ಉತ್ತರಪ್ರದೇಶದ ಅಸೆಂಬ್ಲಿ ಚುನಾವಣೆಯಲ್ಲಿ ಹೀನಾಯವಾಗಿ ಬಿಎಸ್ಪಿ ನೆಲಕಚ್ಚಿದ ನಂತರ, ಮಾಯಾವತಿ ತೆಗೆದ ತಗಾದೆ, ಇವಿಎಂ ಪರ/ವಿರೋಧ ಚರ್ಚೆಗೆ ರಾಷ್ಟ್ರಮಟ್ಟದಲ್ಲಿ ನಾಂದಿ ಹಾಡಿತು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ನೀರೆರೆದವು. ಆದರೆ, ಇದೇ ಮಾಯಾವತಿ, ಉತ್ತರಪ್ರದೇಶದ ಲೋಕಸಭಾ ಉಪಚುನಾವಣೆಯಲ್ಲಿ ತಮ್ಮ ಮೈತ್ರಿಕೂಟದ ಅಭ್ಯರ್ಥಿ ಗೆದ್ದ ನಂತರ ಇವಿಎಂ ಬಗ್ಗೆ ಒಂದೇ ಒಂದು ಹೇಳಿಕೆಯನ್ನು ನೀಡಲಿಲ್ಲ.

ಸೋಲಿನ ಹತಾಶೆಯಲ್ಲಿ ಇವಿಎಂ ಮೇಲೆ ದೂರು
ಸೋಲಿನ ಹತಾಶೆಯಲ್ಲಿ ಇವರೆಲ್ಲಾ ಇವಿಎಂ ದೂರುತ್ತಿದ್ದಾರೆಂದು ಅರಿಯಯದೇ ಇರಲು ಮತದಾರ ದಡ್ಡನೇನೂ ಇಲ್ಲ. ಕೇಂದ್ರ ಚುನಾವಣಾ ಆಯೋಗ ಹಲವು ಬಾರಿ ಮನವಿ ಮಾಡಿ, ಡೆಮೋ ನೀಡಿದರೂ, ಆಯೋಗದ ಮೇಲೆ ಸಂಶಯ ವ್ಯಕ್ತಪಡಿಸಿ, ಇಡೀ ಇಲಾಖೆಯನ್ನೇ ಅವಮಾನಿಸುವ ಕೆಲಸ ವಿರೋಧ ಪಕ್ಷಗಳಿಂದಾದವು. ಇವಿಎಂಗಳ ಬಗ್ಗೆ ವ್ಯಾಪಕ ದೂರುಗಳು ಬಂದಾಗ, ಅದನ್ನು ಸಾಬೀತುಪಡಿಸುವಂತೆ ಆಯೋಗ ಬಹಿರಂಗ ಸವಾಲು ಇಟ್ಟಿತ್ತು.

ಚುನಾವಣಾ ಆಯೋಗದ ಬಹಿರಂಗ ಸವಾಲು
ಯಾರು ಆರೋಪಗಳನ್ನು ಮಾಡಿದ್ದರೋ, ಅವರ್ಯಾರು ನಾವು ಕರೆದ ದಿನ ಆಯೋಗಕ್ಕೆ ಬರಲಿಲ್ಲ. ಇವಿಎಂ ಬೇಡ ಎಂದು ಯಾರೂ ಸಹ ಯಾವ ನ್ಯಾಯಾಲಯಕ್ಕೂ ಹೋಗಿಲ್ಲ ಎನ್ನುವುದು ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಅವರ ಸ್ಪಷ್ಟಮಾತಾಗಿತ್ತು. ತಿಳವಳಿಕೆ ಇಲ್ಲದೇ ಇವಿಎಂಗಳ ದೋಷ, ದುರ್ಬಳಕೆ ಬಗ್ಗೆ ಮಾತನಾಡುತ್ತಿದ್ದಾರೆ. ಇವಿಎಂಗಳ ಜೊತೆಗೆ ಈಗ ವಿವಿಪ್ಯಾಟ್ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ. ಯಾರಿಗೆ ಮತ ಹೋಗಿದೆ ಅನ್ನುವ ಚೀಟಿ ಅದರಲ್ಲಿ ಬರುತ್ತದೆ ಎಂದು ಸಂಜೀವ್ ಕುಮಾರ್ ಹೇಳಿದ್ದರು.

ಸೋಲಿಗೊಂದು ನೆಪಹೇಳಲು ಕಂಡುಕೊಂಡ ದಾರಿ
ಬಿಜೆಪಿಯ ಮತ್ತು ವಿರೋಧ ಪಕ್ಷಗಳ ಸೋಲು, ಗೆಲುವಿನ ನಂತರ, ಇವಿಎಂ ಮೇಲಿನ ವಿರೋಧ ಪಕ್ಷಗಳ ಅನುಮಾನ ಏನಿದೆಯೋ, ಅದು ಸ್ಪಷ್ಟವಾಗಿ ಸೋಲಿಗೊಂದು ನೆಪಹೇಳಲು ಕಂಡುಕೊಂಡ ದಾರಿ ಎನ್ನುವುದು ಸ್ಪಷ್ಟವಾಗುತ್ತದೆ. ಒಂದು ವೇಳೆ, ಅಮಿತ್ ಶಾ ಹೇಳಿದಂತೆ ಮಿಷನ್ 150 ಕರ್ನಾಟಕದಲ್ಲಿ ಸಾಧ್ಯವಾಗಿದ್ದರೆ, ಇವಿಎಂ ವಿಚಾರ ಮತ್ತೆ ಮುನ್ನಲೆಗೆ ಬರುತ್ತಿತ್ತು ಎನ್ನುವುದಕ್ಕೆ ಅನುಮಾನವೇ ಬೇಡ.












Click it and Unblock the Notifications