ನಿತೀಶ್- ಲಾಲೂ ವಿರಸಕ್ಕೆ ನಿಜವಾಗಿಯೂ ಕಾರಣವಾಗಿದ್ದು ಇದೇ!
ಲಾಲು ಹಾಗೂ ನಿತೀಶ್ ನಡುವಿನ ವಿರಸಕ್ಕೆ ಕಾರಣವಾದ ಅಕ್ರಮ ಮರಳುಗಾರಿಕೆ. ಬಿಹಾರದಲ್ಲಿ ದೊಡ್ಡದಾಗಿ ಬೆಳೆದು ನಿಂತಿರುವ ಅಕ್ರಮ ಗಣಿಗಾರಿಕೆ. ಲಾಲೂ ಆಪ್ತರೇ ಬಹುತೇಕರು ಇರುವ ಅಕ್ರಮ ಗಣಿಗಾರಿಕೆಗೆ ಲಾಲೂ ಕುಮ್ಮಕ್ಕು ನೀಡಿದ್ದೇ ವಿರಸಕ್ಕೆ ಕಾರಣ.
ಪಾಟ್ನಾ, ಜುಲೈ 31: ಲಾಲೂ ಪ್ರಸಾದ್ ಪುತ್ರ ತೇಜಸ್ವಿ ಅವರು ಬಿಹಾರದ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಲು ಬಿಡಲಿಲ್ಲ ಎಂಬ ಕಾರಣಕ್ಕೆ ನಿತೀಶ್ ಅವರು ಲಾಲೂ ಅವರ ಸಂಬಂಧ ಕಡಿದುಕೊಂಡರೆಂಬ ವಿಚಾರಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ನಿಜ ಹೇಳಬೇಕೆಂದರೆ, ಲಾಲೂ ಮೇಲೆ ನಿತೀಶ್ ಮುನಿಸಿಕೊಂಡಿದ್ದು ಬಿಹಾರದಲ್ಲಿ ಲಾಲೂ ಆಪ್ತರು ನಡೆಸುತ್ತಿದ್ದ ಅಕ್ರಮ ಮರಳುಗಾರಿಕೆ ವಿಚಾರಕ್ಕೆ!
ಹೌದು. ಬಿಹಾರದಲ್ಲಿ ದೊಡ್ಡ ಮಾಫಿಯಾ ಆಗಿ ಬೆಳೆದು ನಿಂತಿರುವ ಅಕ್ರಮ ಮರಳು ಸಾಗಾಣಿಕೆಯನ್ನು ನಿಲ್ಲಿಸಲು ಪಣ ತೊಟ್ಟ ನಿತೀಶ್ ಕುಮಾರ್, ಅದರ ಜಾಲವನ್ನು ಮಟ್ಟಹಾಕಲು ಸೂಚಿಸಿದ್ದರು.

ಆದರೆ, ಕೆಲವು ವಾರಗಳ ಹಿಂದೆ ಪೊಲೀಸರು ನೀಡಿದ ತನಿಖಾ ವರದಿಯಲ್ಲಿ, ಲಾಲೂ ಅವರಿಗೆ ಬೇಕಾದ ಹಲವಾರು ಮಂದಿ ರಾಜ್ಯದ ನಾನಾ ಭಾಗಗಳಲ್ಲಿ ಮರಳು ಅಕ್ರಮ ಸಾಗಾಣಿಕೆಯನ್ನು ತಮ್ಮ ಕಪಿ ಮುಷ್ಠಿಯಲ್ಲಿ ಹಿಡಿದಿಟ್ಟಿದ್ದಾರೆಂದು ಹೇಳಿದ್ದಾರೆ.
ಈ ಬಗ್ಗೆ ಲಾಲೂ ಅವರು ಜತೆ ನಿತೀಶ್ ಮಾತನಾಡಲು ಮುಂದಾದಾಗಲೇ ಲಾಲೂ ಅವರು, ನಿತೀಶ್ ಅವರಿಗೆ ಕ್ರಮ ಕೈಗೊಳ್ಳದಂತೆ ತಾಕೀತು ಮಾಡಿದ್ದರಂತೆ. ಇದೇ, ಅವರಿಬ್ಬರ ನಡುವಿನ ಮುನಿಸಿಗೆ ಮೊದಲು ನಾಂದಿ ಹಾಡಿತೆಂದು ಬಿಹಾರ ಸರ್ಕಾರದ ಕೆಲ ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ, ಬಿಜೆಪಿ ಜತೆಗೆ ಹೊಸ ಮೈತ್ರಿ ಸರ್ಕಾರ ರಚಿಸಿದ ಬೆನ್ನಲ್ಲೇ, ಸರ್ಕಾರಕ್ಕೆ ಸಾವಿರಾರು ಕೋಟಿ ರು. ನಷ್ಟ ತರುತ್ತಿದ್ದ ಅಕ್ರಮ ಮರಳುಗಾರಿಕೆ ದಂಧೆಯ ಹೆಡೆಮುರಿ ಕಟ್ಟುವಂತೆ ನಿತೀಶ್, ಆದೇಶಿಸಿರುವುದು ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದವರಿಗೆ, ಅದರಲ್ಲೂ ಲಾಲೂ ಆಪ್ತರಿಗೆ ನಡುಕ ಹುಟ್ಟಿಸಿದೆ ಎಂದು ಹೇಳಲಾಗಿದೆ.












Click it and Unblock the Notifications