Adipurush Row: ಕುರಾನ್ ಬಗ್ಗೆ ಇದೇ ರೀತಿಯ ಡಾಕ್ಯುಮೆಂಟರಿ ಮಾಡಿ ನೋಡಿ, ಪರಿಣಾಮ ಗೊತ್ತಾಗುತ್ತೆ: ಅಲಹಾಬಾದ್ ಹೈಕೋರ್ಟ್
ಲಕ್ನೋ, ಜೂನ್ 28: ಆದಿಪುರುಷ್ ಚಿತ್ರದ ವಿಚಾರಣೆ ನಡೆಸುತ್ತಿರುವ ಅಲಹಾಬಾದ್ ಹೈಕೋರ್ಟ್ ಪೀಠವು ಮತ್ತೆ ಸಿನೆಮಾ ನಿರ್ಮಾಪಕರ ವಿರುದ್ಧ ಹರಿಹಾಯ್ದಿದೆ. ಅಲಹಾಬಾದ್ ನ್ಯಾಯಾಲಯವು ಯಾವುದೇ ಒಂದು ಧರ್ಮದ ಬಗ್ಗೆ ಅಷ್ಟೇ ಅಲ್ಲ. ಎಲ್ಲಾ ಧರ್ಮಗಳ ಭಾವನೆಗಳಿಗೆ ಸಮಾನವಾಗಿ ಕಾಳಜಿಯನ್ನು ಹೊಂದಿದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಆದಿಪುರುಷ ವಾದವನ್ನು ಆಲಿಸಿದ ಹೈಕೋರ್ಟ್ ಪೀಠ, ಈ ವಿಷಯವನ್ನು ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿದೆ. ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠದ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಶ್ರೀ ಪ್ರಕಾಶ್ ಸಿಂಗ್ ಆದಿಪುರುಷ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ನ್ಯಾಯಾಲಯವು ಯಾವುದೇ ಒಂದು ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ. ಆದಾಗ್ಯೂ, ನೀವು ಯಾವುದೇ ಧರ್ಮವನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸಬಾರದು ಎಂದು ಆಶಿಸುತ್ತೇವೆ' ಎಂದು ಪೀಠ ಹೇಳಿದೆ.
ಆದಿಪುರುಷ ಚಿತ್ರದ ವಿರುದ್ಧದ ಎರಡು ಸಾರ್ವಜನಿಕ ಹಿತಾಸಕ್ತಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ಮೌಖಿಕ ಅವಲೋಕನಗಳನ್ನು ಮಾಡಿದೆ.
ಆದಿಪುರುಷ ಚಿತ್ರವು ಹಿಂದೂ ದೇವರು ಮತ್ತು ದೇವತೆಗಳನ್ನು 'ತಮಾಷೆಯ ರೀತಿಯಲ್ಲಿ' ತೋರಿಸಿರುವ ಪ್ರತ್ಯೇಕ ಘಟನೆಯಲ್ಲ ಎಂದು ನ್ಯಾಯಾಲಯವು ಹರಿಹಾಯ್ದಿದೆ.

'ನಾವು ಇದನ್ನು (ಆದಿಪುರುಷ) ಇಂದು ನಿರ್ಲಕ್ಷಿಸಿದರೆ, ಮುಂದೆ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಈ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಭಗವಾನ್ ರಾಮನನ್ನು ತಮಾಷೆಯಾಗಿ ತೋರಿಸಿರುವ ಚಿತ್ರವನ್ನು ನೋಡಿದೆ. ಇದು ತಮಾಷೆಯೇ?' ಎಂದು ಪ್ರಶ್ನಿಸಿದೆ.
'ನೀವು ಖುರಾನ್ ಬಗ್ಗೆ ಸಣ್ಣ ಸಾಕ್ಷ್ಯಚಿತ್ರವನ್ನು ತಯಾರಿಸಿ. ಇದೇ ರೀತಿಯ ತಪ್ಪು ವಿಚಾರಗಳನ್ನು ಚಿತ್ರಿಸಿ ಬಿಡುಗಡೆ ಮಾಡಿದಿ. ಮುಂದೆ ಏನಾಗುತ್ತದೆ ಎಂದು ನೀವು ಊಹಿಸಬಹುದೇ?' ಎಂದು ಪ್ರಶ್ನೆ ಮಾಡಿದೆ.
ಕೇಂದ್ರದ ಪರವಾಗಿ ಹಾಜರಿದ್ದ ಭಾರತದ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಸ್ ಬಿ ಪಾಂಡೆ ಅವರನ್ನೂ ನ್ಯಾಯಾಲಯ ಪ್ರಶ್ನಿಸಿದೆ. ಇಂತಹ ಸಿನಿಮಾವನ್ನು ಸಮರ್ಥಿಸಿಕೊಳ್ಳುವುದು ಹೇಗೆ ಎಂದು ಪಾಂಡೆ ಅವರನ್ನು ಪೀಠ ಪ್ರಶ್ನಿಸಿದೆ.
ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ಪಾಂಡೆ, 'ಸಂಸ್ಕೃತಿ' (ಉತ್ತಮ ನಡತೆ) ಸದಸ್ಯರನ್ನು ಒಳಗೊಂಡ ಮಂಡಳಿಯಿಂದ ಚಲನಚಿತ್ರಕ್ಕೆ ಪ್ರಮಾಣಪತ್ರವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ನ್ಯಾಯಾಲಯವು, 'ಅಂತಹ ಸಂಸ್ಕಾರವಂತರು ಇಂತಹ ಚಲನಚಿತ್ರಕ್ಕೆ (ಆದಿಪುರುಷ) ಒಪ್ಪಿಗೆ ನೀಡಿದ್ದರೆ, ಅವರು ನಿಜವಾಗಿಯೂ ಧನ್ಯರು' ಎಂದು ಪೀಠ ಹೇಳಿದೆ.
ಆದಿಪುರುಷ ಚಿತ್ರದ ವಿರುದ್ಧ ಕುಲದೀಪ್ ತಿವಾರಿ ಮತ್ತು ಬಂದಾನ ಕುಮಾರ್ ಅವರು ಸಲ್ಲಿಸಿರುವ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.












Click it and Unblock the Notifications