Breaking: ಟೀಗೆ ಆಕಸ್ಮಿಕ ಕೀಟನಾಶಕ: ಒಂದೇ ಕುಟುಂಬದ ಮೂವರು ಸಾವು
ಲಕ್ನೋ ಅಕ್ಟೋಬರ್ 27: ಆಕಸ್ಮಿಕವಾಗಿ ಟೀಗೆ ಕೀಟನಾಶಕ ಹಾಕಿದ ಪರಿಣಾಮ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಔಚಾ ಪ್ರದೇಶದ ನಾಗ್ಲಾ ಕನ್ಹೈ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುರುವಾರ ಮನೆಯಲ್ಲಿ ಚಹಾ ಸೇವಿಸಿದ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
'ಭಾಯಿ ದೂಜ್' ಹಬ್ಬವನ್ನು ಆಚರಿಸಲು ರವೀಂದ್ರ ಸಿಂಗ್ ತಮ್ಮ ಪುತ್ರ ಶಿವಾನಂದನ್ ಮತ್ತು ಇತರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಬಂದಿದ್ದರು. ಅವರ ಸೊಸೆ ಎಲ್ಲಾ ಸಂಬಂಧಿಕರಿಗೆ ಚಹಾವನ್ನು ತಯಾರಿಸಿದರು. ಟೀ ಕುಡಿದ ಕೂಡಲೇ ರವೀಂದ್ರ ಸಿಂಗ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೆಲವು ನಿಮಿಷಗಳ ನಂತರ, ಆರು ಮತ್ತು ಐದು ವರ್ಷ ವಯಸ್ಸಿನ ಅವರ ಇಬ್ಬರು ಮೊಮ್ಮಕ್ಕಳು ಸಹ ಪ್ರಜ್ಞಾಹೀನರಾಗಿದ್ದಾರೆ.
ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಬದುಕುಳಿದಿರಲಿಲ್ಲ. ಇನ್ನೂ ಒಬ್ಬರು ಚಹಾ ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ತಿಗೆ ಆಕಸ್ಮಿಕವಾಗಿ ಟೀಗೆ ಸಕ್ಕರೆಯ ಬದಲು ಕೀಟನಾಶಕ ಹಾಕಿದ್ದು ದುರಂತಕ್ಕೆ ಕಾರಣವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.