ದೆಹಲಿ ಪಾಲಿಕೆ ಆಪ್ ಪಾಲು: ಆದರೆ, ಬಿಜೆಪಿ ಹೇಳೋದೇ ಬೇರೆ
ನವದೆಹಲಿ, ಡಿ 8: ದೆಹಲಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದೆ. ಆ ಮೂಲಕ, ದೆಹಲಿ ವಿಧಾನಸಭೆಯ ನಂತರ ಮಹಾನಗರ ಪಾಲಿಕೆಯನ್ನೂ ಆಪ್ ತನ್ನ ಕಮಾಲ್ ಅನ್ನು ಮುಂದುವರಿಸಿದೆ.
ಪ್ರತಿಷ್ಠಿತ ದೆಹಲಿ ಪಾಲಿಕೆಯನ್ನು ಹದಿನೈದು ವರ್ಷಗಳ ನಂತರ ಆಪ್, ಬಿಜೆಪಿಯಿಂದ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಒಟ್ಟು 250 ವಾರ್ಡುಗಳ ಪೈಕಿ ಆಮ್ ಆದ್ಮಿ ಪಕ್ಷ 134, ಬಿಜೆಪಿ 104 ಸ್ಥಾನ ತನ್ನದಾಗಿಸಿಕೊಂಡಿದೆ.
ವಿವಿಧ ವಾಹಿನಿಗಳ ಮತಗಟ್ಟೆ ಸಮೀಕ್ಷೆಯ ಪ್ರಕಾರ ಆಮ್ ಆದ್ಮಿ ಪಕ್ಷ ಭಾರೀ ಅಂತರದಿಂದ ಗೆಲುವು ಸಾಧಿಸುತ್ತದೆ, ಬಿಜೆಪಿ ಮೂರಂಕಿ ದಾಟುವುದಿಲ್ಲ ಎಂದು ಹೇಳಿತ್ತು. ಈ ಸಮೀಕ್ಷೆಗಳ ಬಹುತೇಕ ಸುಳ್ಳಾಗಿದೆ.

ಈ ನಡುವೆ, ಬಿಜೆಪಿಯ ವಕ್ತಾರ ಅಮಿತ್ ಮಾಳವೀಯ ಸೇರಿದಂತೆ ಕೆಲವು ಮುಖಂಡರು ನೀಡಿರುವ ಹೇಳಿಕೆಯಿಂದಾಗಿ, ದೆಹಲಿಯ ಮೇಯರ್ ಯಾರಾಗಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ಬಿಜೆಪಿಯ ನಾಯಕ ತೇಜೆಂದರ್ ಪಾಲ್ ಸಿಂಗ್ ಬಗ್ಗಾ ಹಿಂದಿಯಲ್ಲಿ ಟ್ವೀಟ್ ಮಾಡಿ, "ದೆಹಲಿಯಲ್ಲಿ ಮತ್ತೊಮ್ಮೆ ಬಿಜೆಪಿಯ ಮೇಯರ್ ಆಗಲಿದ್ದಾರೆ"ಎಂದು ಹೇಳಿರುವುದರಿಂದ, ಕುದುರೆ ವ್ಯಾಪಾರ ನಡೆಯಲಿದೆಯಾ ಎನ್ನುವ ಸಂಶಯ ಮೂಡವಂತೆ ಮಾಡಿದೆ.
"ಏನು ಬೇಕಾದರೂ ಆಗಬಹುದು, ರಾಜಕೀಯದಲ್ಲಿ ಮಾತ್ರ ಯಾಕೆ ಆಗಬೇಕು, ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಪ್ರತಿನಿಧಿಸುವ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಯ ವಾರ್ಡುಗಳಲ್ಲಿ ಆಮ್ ಆದ್ಮಿ ಪಕ್ಷ ಸೋತಿದೆ" ಎಂದು ಮಾಜಿ ಮೇಯರ್ ಆದೇಶ್ ಗುಪ್ತಾ ಹೇಳಿದ್ದಾರೆ.
"ಹೊಸದಾಗಿ ಆಯ್ಕೆಯಾಗಿರುವ ಕಾರ್ಪೋರೇಟರುಗಳನ್ನು ತನ್ನತ್ತ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ಬಿಜೆಪಿಯ ಈ ಹುನ್ನಾರ ಫಲಪ್ರದವಾಗುವುದಿಲ್ಲ"ಎಂದು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
"ನಾಮನಿರ್ದೇಶಿತ ಕೌನ್ಸಿಲರ್ಗಳು ಯಾವ ರೀತಿಯಲ್ಲಿ ಮತ ಚಲಾಯಿಸುತ್ತಾರೆ ಎಂಬುದರ ಮೇಲೆ ಮೇಯರ್ ಸ್ಪರ್ಧೆ ಅವಲಂಬಿತವಾಗಿದೆ. ಉದಾಹರಣೆಗೆ ಚಂಡೀಗಢದಲ್ಲಿ ಬಿಜೆಪಿ ಮೇಯರ್ ಇದ್ದಾರೆ" ಎಂದು ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ನಲ್ಲಿ ಹೇಳಿರುವುದು ಸಿಸೋಡಿಯಾ ಆರೋಪ ಇಂಬು ನೀಡುವಂತಿದೆ.












Click it and Unblock the Notifications