ಹಿಂದಿ ಭಾಷಿಕ ರಾಜ್ಯಗಳಲ್ಲೇ ಎಎಪಿಗೆ ಮತ್ತೊಮ್ಮೆ ಸೋಲು
ನವದೆಹಲಿ, ಡಿಸೆಂಬರ್ 14: ಹಿಂದಿ ಭಾಷಿಕ ರಾಜ್ಯಗಳಲ್ಲಿ ಗೆಲುವು ಸಾಧಿಸುವ ಆಮ್ ಆದ್ಮಿ ಪಕ್ಷ(ಎಎಪಿ) ದ ತಂತ್ರ ಮತ್ತೊಮ್ಮೆ ವಿಫಲವಾಗಿದೆ.
ದೆಹಲಿಯಲ್ಲಿ ಅಧಿಕಾರದಲ್ಲಿರುವ ಎಎಪಿ, ಪಂಜಾಬ್ ನಲ್ಲಿ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ, ಆದರೆ, ದೇಶದ ಇತರೆಡೆ ಅದರಲ್ಲೂ ಹಿಂದಿ ಭಾಷಿಕ ರಾಜ್ಯಗಳಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಹೆಣಗಾಡುತ್ತಿದೆ.
ಆದರೆ, ಹಿಂದಿ ಭಾಷಿಕ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಗಡದಲ್ಲಿ ಎಎಪಿ ರಣತಂತ್ರಕ್ಕೆ ಸೋಲಾಗಿದೆ. ಮುಂದಿನ ಬಾರಿ ಹೊಸ ತಂತ್ರವನ್ನು ಬಳಸಿ ಕಣಕ್ಕಿಳಿಯಬೇಕಿದೆ.

ಮಧ್ಯಪ್ರದೇಶದಲ್ಲಿ 197ಸ್ಥಾನಗಳಲ್ಲಿ, ರಾಜಸ್ಥಾನದಲ್ಲಿ 195 ಹಾಗೂ ಛತ್ತೀಸ್ ಗಡದಲ್ಲಿ 90 ಸ್ಥಾನಗಳಲ್ಲಿ ಎಎಪಿ ಸ್ಪರ್ಧಿಸಿತ್ತು. ರಾಜಸ್ಥಾನದ ಉಸ್ತುವಾರಿಯಾಗಿದ್ದ ಕುಮಾರ್ ವಿಶ್ವಾಸ್ ರನ್ನು ಬದಲಾಯಿಸಿ ಪಕ್ಷದ ಖಜಾಂಚಿ ದೀಪಕ್ ವಾಜಪೇಯಿ ಅವರನ್ನು ನೇಮಿಸಲಾಯಿತು. ಮಧ್ಯಪ್ರದೇಶ ಹಾಗೂ ಛತ್ತೀಸ್ ಗಡ ರಾಜ್ಯಗಳಿಗೆ ಗೋಪಾಲ್ ರಾಯ್ ಉಸ್ತುವಾರಿಯಾಗಿದ್ದರು.
ಆದರೆ, ಎಎಪಿ ಅಭ್ಯರ್ಥಿಗಳಿಗೆ 1000 ಮತಗಳು ದಕ್ಕುವುದು ಕಷ್ಟವಾಗಿಬಿಟ್ಟಿತು.
ಛತ್ತೀಸ್ ಗಡದ ಸಿಂಗ್ರುಲಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ರಾಣಿ ಅಗರವಾಲ್ ಅವರು 31810 ಮತಗಳನ್ನು ಪಡೆದು ಮೂರನೇ ಸ್ಥಾನ ಗಳಿಸಿದರು. ಈ ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸಿದರೆ, ಎಎಪಿ ಅಲೋಕ್ ಅಗರವಾಲ್ ಅವರು 237 ಮತಗಳನ್ನು ಗಳಿಸಿ ನೋಟಾಕ್ಕಿಂತ ಹಿಂದೆ ಬಿದ್ದರು.
ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿ ಜತೆ ಎಎಪಿ ಮೈತ್ರಿ ಮಾಡಿಕೊಳ್ಳಲು ಯತ್ನಿಸಿದ್ದು ಸಫಲವಾಗಲಿಲ್ಲ. ಆರ್ ಎಲ್ ಪಿ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ. ದೆಹೆಲಿ ಸಿಎಂ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಗೋಪಾಲ್ ರಾಯ್ ಸೇರಿದಂತೆ ಅನುಭವಿಗಳಿದ್ದರೂ ಮೂರು ರಾಜ್ಯಗಳಲ್ಲಿ ನೋಟಾ ಎದುರು ಎಎಪಿ ಸೋಲು ಕಂಡಿದೆ.












Click it and Unblock the Notifications