ಆಧಾರ್ ತೀರ್ಪು ಸ್ವಾಗತಿಸಿದ ಬೆಂಗಳೂರಿನ ಮೂಲ ಅರ್ಜಿದಾರ ಪುಟ್ಟಸ್ವಾಮಿ
ಬೆಂಗಳೂರು, ಸೆಪ್ಟೆಂಬರ್ 27: ಆಧಾರ್ ಮಾನ್ಯತೆ ಕುರಿತಂತೆ ಸುಪ್ರೀಂಕೋರ್ಟಿನ ಪಂಚ ಪೀಠ ನೀಡಿರುವ ಮಹತ್ವದ ತೀರ್ಪನ್ನು ಬೆಂಗಳೂರಿನ ಮೂಲ ಅರ್ಜಿದಾರ ಕೆಎಸ್ ಪುಟ್ಟಸ್ವಾಮಿ ಅವರು ಸ್ವಾಗತಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ಅವರು ಒನ್ಇಂಡಿಯಾ ಪ್ರತಿನಿಧಿ ಜತೆ ಮಾತನಾಡಿ, ಸುಪ್ರೀಂಕೋರ್ಟ್ ತೀರ್ಪು,ಅವಿಭಜಿತ ಮತ್ತು ಬಹುಮತದ ತೀರ್ಪಾಗಿದೆ, ಇದು ಬಹುತೇಕ ಸರಿಯಾಗಿದೆ. ಆದಾಯ ತೆರಿಗೆಗೆ ಆಧಾರ್ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ. ಆಧಾರ್ ಕಾಯ್ದೆಯನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ಕೆಲವೊಂದು ಸೆಕ್ಷನ್ಗಳನ್ನು ರದ್ದುಪಡಿಸಿದೆ. ಸಂವಿಧಾನ ಅನುಚ್ಛೇದ 19ರ ಮೂಲಕ ನಾಗರೀಕ ಹಕ್ಕುಗಳು ಸಿಗಲಿವೆ ಎಂದಿದ್ದಾರೆ.
ಐವರು ನ್ಯಾಯಮೂರ್ತಿಗಳಿರುವ ನ್ಯಾಯಪೀಠದಿಂದ 3-2ರ ನಿರ್ಣಯ ಬಂದಿದೆ. ರಾಷ್ಟ್ರೀಯ ಸುರಕ್ಷತೆ ಬಗ್ಗೆ ಇರುವ ಸೆಕ್ಷನ್ 33(2) ಹಾಗೂ ಖಾಸಗಿ ಸಂಸ್ಥೆಗಳು ಆಧಾರ್ ಮಾಹಿತಿ ಕೋರುವ ಸೆಕ್ಷನ್ 57ರ ಬಗ್ಗೆ ಸ್ಪಷ್ಟ ನಿರ್ದೇಶನ ಸಿಕ್ಕಿದೆ ಎಂದರು.

ನ್ಯಾ. ಪುಟ್ಟಸ್ವಾಮಿ ಹಿನ್ನೆಲೆ: 1926ರಲ್ಲಿ ಜನಿಸಿದ ನ್ಯಾ. ಕೆಎಸ್ ಪುಟ್ಟಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯವರು. ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು, 1952ರಲ್ಲಿ ವೃತ್ತಿ ಜೀವನ ಆರಂಭಿಸಿದರು. 1977ರಿಂದ 1988ರವರೆಗೆ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದರು.
ನಿವೃತ್ತಿ ಬಳಿಕ ಬೆಂಗಳೂರಿನ ಸಿಎಟಿ ಪೀಠದ ಉಪಾಧ್ಯಕ್ಷರಾಗಿ, ಆಂಧ್ರಪ್ರದೇಶ ಆಡಳಿತಾತ್ಮಕ ನ್ಯಾಯ ಮಂಡಳಿ ಅಧ್ಯಕ್ಷರಾಗಿ, ಆಂಧ್ರಪ್ರದೇಶ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
2012ರಲ್ಲಿ ಆಧಾರ್ ಕುರಿತಂತೆ ರಿಟ್ ಅರ್ಜಿ ಹಾಕಿದರು. ಇದಾದ ಬಳಿಕ ಕಳೆದ ಐದು ವರ್ಷಗಳಲ್ಲಿ 26 ಇನ್ನಿತರ ಅರ್ಜಿಗಳು ಇದೇ ಕೇಸಿಗೆ ಸಂಬಂಧಿಸಿದಂತೆ ವಿಚಾರಣೆಗೆ ಬಂದಿವೆ.












Click it and Unblock the Notifications