ಓಡಿಶಾ ದುರಂತ ಬಳಿಕ ಮಹಾರಾಷ್ಟ್ರದಲ್ಲಿ ಹಳಿ ತಪ್ಪಿದ ರೈಲು!
ಮುಂಬೈ, ಜೂನ್ 6: ಮಹಾರಾಷ್ಟ್ರದ ಜನಪ್ರಿಯ ಮಾಥೆರಾನ್ ಗಿರಿಧಾಮದಿಂದ ನೆರಲ್ಗೆ ತೆರಳುತ್ತಿದ್ದ ರೈಲು ಹಳಿತಪ್ಪಿದ್ದು, ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಮುಂಬೈನಿಂದ ಸುಮಾರು 95 ಕಿಮೀ ದೂರದಲ್ಲಿರುವ ಜುಮ್ಮಾ ಪಟ್ಟಿ ನಿಲ್ದಾಣದ ಬಳಿ ಆಟಿಕೆ ರೈಲಿನ ಎಂಜಿನ್ನ ಒಂದು ಚಕ್ರ ಹಳಿತಪ್ಪಿದಾಗ ಶನಿವಾರ ಸಂಜೆ 5.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಒಡಿಶಾದಲ್ಲಿ ನಡೆದಿದ್ದ ಮೂರು ರೈಲುಗಳ ಅಪಘಾತದಲ್ಲಿ 278 ಜನರು ಸಾವನ್ನಪ್ಪಿ 1,100 ಜನರು ಗಾಯಗೊಂಡಿದ್ದರು. ಈಗ ಒಂದು ದಿನದ ನಂತರ ಮಹಾರಾಷ್ಟ್ರದಲ್ಲಿ ರೈಲು ಹಳಿ ತಪ್ಪಿರುವ ಘಟನೆ ಸಂಭವಿಸಿದೆ. ಶನಿವಾರ ಸಂಜೆ 4 ಗಂಟೆಗೆ ಮಾಥೆರಾನ್ನಿಂದ ಹೊರಟ ಟಾಯ್ ರೈಲಿನಲ್ಲಿ 90 ರಿಂದ 95 ಪ್ರಯಾಣಿಕರಿದ್ದರು. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಪ್ರಯಾಣಿಕರು ತಕ್ಷಣವೇ ರೈಲಿನಿಂದ ಇಳಿದು ಕ್ಯಾಬ್ಗಳ ಮೂಲಕ ತಾವು ತಲುಪಬೇಕಾದ ಸ್ಥಳಕ್ಕೆ ತೆರಳಿದರು ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.
ರೈಲನ್ನು ರಾತ್ರಿ 9 ಗಂಟೆ ಸುಮಾರಿಗೆ ಹಳಿ ಮೇಲೆ ಮತ್ತೆ ತರಲಾಗಿದ್ದು, ರಾತ್ರಿ 10.30 ರ ಹೊತ್ತಿಗೆ ಮಾಥೆರಾನ್ ಬೆಟ್ಟಗಳ ತಪ್ಪಲಿನಲ್ಲಿರುವ ನೇರಲ್ ನಿಲ್ದಾಣಕ್ಕೆ ತರಲಾಯಿತು. ಈ ಘಟನೆಯ ಬಳಿಕ ನೇರಲ್ನಿಂದ ಮಾಥೆರಾನ್ಗೆ ಕೊನೆಯ ರೈಲನ್ನು ರದ್ದುಪಡಿಸಲಾಯಿತು. ಎರಡೂ ರೈಲುಗಳ ಪ್ರಯಾಣಿಕರ ಪ್ರಯಾಣ ದರವನ್ನು ಮರುಪಾವತಿಸಲಾಯಿತು ಎಂದು ಅವರು ಹೇಳಿದರು.
ಆಟಿಕೆ ರೈಲು ನಿಧಾನಗತಿಯಲ್ಲಿ ಚಲಿಸುತ್ತದೆ ಮತ್ತು ಕೆಲವೊಮ್ಮೆ ಕೋಚ್ಗಳು ಹಳಿತಪ್ಪಿದಾಗ ರೈಲಿನ ಜೊತೆಗೆ ಪ್ರಯಾಣಿಸುವ ಸಹಾಯಕ ಸಿಬ್ಬಂದಿ ಅವುಗಳನ್ನು ಎತ್ತಿ ಹಳಿಗಳ ಮೇಲೆ ಹಾಕುತ್ತಾರೆ. ಮಳೆಗಾಲದಲ್ಲಿ ನೆರಲ್ ಮತ್ತು ಮಾಥೆರಾನ್ ನಡುವೆ ಆಟಿಕೆ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೇರಲ್-ಮಾಥೆರಾನ್ ಆಟಿಕೆ ರೈಲು 100 ವರ್ಷಗಳಿಗಿಂತಲೂ ಹಳೆಯದು. ಇದು ಭಾರತದ ಕೆಲವು ಪರ್ವತ ರೈಲುಮಾರ್ಗಗಳಲ್ಲಿ (ವಿಭಾಗ) ಒಂದಾಗಿದೆ. 21 ಕಿಮೀ ಉದ್ದದ ನೇರಲ್-ಮಾಥೆರಾನ್ ನ್ಯಾರೋ ಗೇಜ್ ಟ್ರ್ಯಾಕ್ ಗಿರಿಧಾಮದ ಸುಂದರವಾದ ಘಾಟ್ ಮೂಲಕ ಹಾದುಹೋಗುತ್ತದೆ. ಸುರಕ್ಷತಾ ಕಾರಣಗಳಿಗಾಗಿ ಸಾಮಾನ್ಯವಾಗಿ ಜೂನ್ ನಿಂದ ಅಕ್ಟೋಬರ್ ವರೆಗೆ ಮಳೆಗಾಲದಲ್ಲಿ ನೆರಲ್ ಮತ್ತು ಮಾಥೆರಾನ್ ನಡುವೆ ಆಟಿಕೆ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುತ್ತದೆ.












Click it and Unblock the Notifications