'ಹಿಂದೂ ಭಯೋತ್ಪಾದಕ ಆಗಲ್ಲ, 'ಹಿಂದೂ ಭಯೋತ್ಪಾದನೆ' ಕಾಂಗ್ರೆಸ್ ಸೃಷ್ಟಿ
ಚಂಡೀಗಢ, ಜೂನ್ 21: ಒಬ್ಬ ಹಿಂದೂ ಭಯೋತ್ಪಾದಕ ಆಗುವುದಕ್ಕೆ ಸಾಧ್ಯವೇ ಇಲ್ಲ. ಹಿಂದೂ ಭಯೋತ್ಪಾದನೆ ಅನ್ನೋದು ಕಾಂಗ್ರೆಸ್ ನ ಸೃಷ್ಟಿ ಎಂದು ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಚಾನೆಲ್ ವೊಂದರ ಸಂದರ್ಶನದ ವೇಳೆ ಹೇಳಿದ್ದಾರೆ.
ಹಿಂದೂ ಭಯೋತ್ಪಾದನೆ ಎಂಬ ಪದವೇ ಇರಲು ಸಾಧ್ಯವಿಲ್ಲ. ಹಿಂದೂವೊಬ್ಬ ಭಯೋತ್ಪಾದಕ ಆಗಲು ಸಾಧ್ಯವಿಲ್ಲ. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಸೃಷ್ಟಿ ಮಾಡಿದ್ದು ಹಿಂದೂ ಭಯೋತ್ಪಾದನೆ ಎಂಬ ಪದ. ಮುಸ್ಲಿಮರು ಭಾಗಿಯಾಗಿದ್ದ ಭಯೋತ್ಪಾದನಾ ಕೃತ್ಯಗಳಿಗೆ ಪ್ರತಿಯಾಗಿ ಇಂಥ ಹುನ್ನಾರ ನಡೆಸಿತು ಎಂದಿದ್ದಾರೆ.

ಹತ್ತು ವರ್ಷದ ಹಿಂದೆ ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟದಲ್ಲಿ ಅರವತ್ತೆಂಟು ಮಂದಿ ಮೃತಪಟ್ಟಿದ್ದರು. ಆ ಘಟನೆ ಬಗ್ಗೆ ಮಾತನಾಡಿದ ಅವರು, ಆ ಕೃತ್ಯದಲ್ಲಿ ಹಿಂದೂ ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂಬ ಆಯಾಮವನ್ನು ನಿರಾಕರಿಸಿದರು. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ನಡೆದ ತನಿಖೆ ಸರಿಯಾಗಿ ಆಗಿಲ್ಲ ಎಂದು ಕೂಡ ದೂರಿದರು.
ಭಯೋತ್ಪಾದನೆ ಕೃತ್ಯಗಳ ತನಿಖೆ ವೇಳೆ ಮಂಪರು ಪರೀಕ್ಷೆ, ಬ್ರೈನ್ ಮ್ಯಾಪಿಂಗ್ ಮಾಡುತ್ತಾರೆ. ಆದರೆ ಪಾಕಿಸ್ತಾನ ಮೂಲದ ವ್ಯಕ್ತಿಗಳ ಮಂಪರು ಪರೀಕ್ಷೆ ಈ ಪ್ರಕರಣದಲ್ಲಿ ಮಾಡಿಲ್ಲ. ಏಕೆಂದರೆ ಅವರಿಗೆ (ಕಾಂಗ್ರೆಸ್ ಗೆ) ಹಿಂದೂ ಭಯೋತ್ಪಾದನೆ ಎಂಬ ಪದ ಸೃಷ್ಟಿ ಮಾಡಬೇಕಿತ್ತು ಎಂದಿದ್ದಾರೆ.
ಕಳೆದ ವರ್ಷ ಕೂಡ ಅನಿಲ್ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ನರೇಂದ್ರ ಮೋದಿ ಅವರಿಗೆ ಮಹಾತ್ಮ ಗಾಂಧಿಗಿಂತ ಒಳ್ಳೆ ಬ್ರ್ಯಾಂಡ್ ಮೌಲ್ಯ ಇದೆ ಎಂದು ಆತ ಹೇಳಿದ್ದರು. ಆ ಹೇಳಿಕೆಗೆ ವಿಪರೀತ ವಿರೋಧ ಕೇಳಿಬಂದ ನಂತರ ತಮ್ಮ ಮಾತನ್ನು ವಾಪಸ್ ಪಡೆದಿದ್ದರು.
ಸಂಜೋತ್ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಹಲವು ಬಲಪಂಥೀಯರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಅದರಲ್ಲಿ ಸ್ವಾಮಿ ಅಸೀಮಾನಂದ್ ಕೂಡ ಇದ್ದರು. ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣದಲ್ಲಿ ಈ ವರ್ಷದ ಆರಂಭದಲ್ಲಿ ಅವರು ಖುಲಾಸೆಯಾಗಿದ್ದಾರೆ.












Click it and Unblock the Notifications