90% ಕೊರೊನಾ ರೋಗಿಗಳು ಮನೆಯಲ್ಲೇ ಗುಣಮುಖರಾಗಬಹುದು; ವೈದ್ಯರ ಸಲಹೆ
ನವದೆಹಲಿ, ಏಪ್ರಿಲ್ 26: ಕೊರೊನಾ ಸೋಂಕಿನ ಎರಡನೇ ಅಲೆ ದೇಶದಲ್ಲಿ ಆತಂಕಕಾರಿ ಮಟ್ಟದಲ್ಲಿ ಪಸರಿಸುತ್ತಿದ್ದು, ದಿನನಿತ್ಯ ಮೂರು ಲಕ್ಷಕ್ಕೂ ಮೀರಿ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ. ಮರಣ ಪ್ರಮಾಣದಲ್ಲಿಯೂ ಏರಿಕೆಯಾಗಿದೆ.
ಸೋಂಕಿನ ಪ್ರಮಾಣ ಹೆಚ್ಚಾದಂತೆ ಆಸ್ಪತ್ರೆ ಸೇರುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ದೇಶಾದ್ಯಂತ ಆಸ್ಪತ್ರೆಗಳಲ್ಲಿ ಹಾಸಿಗೆ ಹಾಗೂ ವೈದ್ಯಕೀಯ ಆಮ್ಲಜನಕದ ಕೊರತೆ ತೀವ್ರವಾಗಿ ಕಾಡುತ್ತಿದೆ. ಆದರೆ ಕೊರೊನಾ ಕಾಣಿಸಿಕೊಂಡವರೆಲ್ಲರೂ ಆಸ್ಪತ್ರೆ ಸೇರುವ ಅಗತ್ಯವಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೊರೊನಾ ತಗುಲಿದ ಶೇ 90ರಷ್ಟು ರೋಗಿಗಳು ಮನೆಯಲ್ಲಿಯೇ ಗುಣಮುಖರಾಗಬಹುದು ಎಂದಿದ್ದಾರೆ. ಮುಂದೆ ಓದಿ...

"ರೆಮ್ಡೆಸಿವಿರ್ ಕೊರೊನಾಗೆ ರಾಮಬಾಣವಲ್ಲ"
ಕೊರೊನಾ ಸೋಂಕಿಗೆ ಔಷಧಿಯಾಗಿ ರೆಮ್ಡೆಸಿವಿರ್ ಪರಿಣಾಮಕಾರಿ ಔಷಧ ಎನ್ನುತ್ತಿದ್ದಂತೆ ಏಕಾಏಕಿ ಔಷಧಕ್ಕೆ ಬೇಡಿಕೆ ಹೆಚ್ಚಾಗಿದೆ. ಈ ಕುರಿತು ದೆಹಲಿಯ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಮಾತನಾಡಿದ್ದು, "ಕೊರೊನಾ ಸೋಂಕಿಗೆ ರೆಮ್ಡೆಸಿವರ್ ಔಷಧಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ಇದು ಕೊರೊನಾಗೆ ಮ್ಯಾಜಿಕ್ ಬುಲೆಟ್ ಅಲ್ಲ. ಇದನ್ನು ಆಸ್ಪತ್ರೆ ಸೇರುವ ರೋಗಿಗಳಿಗೆ ಹಾಗೂ ಆಮ್ಲಜನಕ ಮಟ್ಟವು 93 ಒಳಗೆ ಇದ್ದರೆ ಮಾತ್ರ ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ರೆಮ್ಡೆಸಿವಿರ್ ಹಾಗೂ ಆಮ್ಲಜನಕವನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ಕೊರೊನಾ ತಗುಲಿದ ಹಲವು ರೋಗಿಗಳು ಮನೆಯಲ್ಲಿಯೇ ಗುಣಮುಖರಾಗಬಹುದು ಎಂದಿದ್ದಾರೆ.

"90% ರೋಗಿಗಳು ಮನೆಯಲ್ಲಿಯೇ ಗುಣಮುಖರಾಗಬಹುದು"
ಸೂಕ್ತ ಸಮಯಕ್ಕೆ ಸರಿಯಾದ ಔಷಧ ನೀಡಿದರೆ 90% ಕೊರೊನಾ ರೋಗಿಗಳು ಮನೆಯಲ್ಲಿಯೇ ಸೋಂಕಿನಿಂದ ಗುಣಮುಖರಾಗಬಹುದು ಎಂದು ಮೆದಂತಾ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ.
ಆರ್ಟಿಪಿಸಿಆರ್ ವರದಿ ಪಾಸಿಟಿವ್ ಬರುತ್ತಿದ್ದಂತೆ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ. ಎಲ್ಲಾ ವೈದ್ಯರಿಗೂ ಕೊರೊನಾ ಪ್ರೊಟೊಕಾಲ್ ತಿಳಿದಿದೆ. ಅದರಂತೆ ನಿಮ್ಮ ಚಿಕಿತ್ಸೆ ಆರಂಭಿಸಬಹುದು ಎಂದು ಡಾ. ಟ್ರೆಹಾನ್ ತಿಳಿಸಿದ್ದಾರೆ. ಕೊರೊನಾ ಲಸಿಕೆ ಹಾಗೂ ಕೊರೊನಾ ನಿಯಮಗಳ ಪಾಲನೆಯಿಂದಷ್ಟೇ ಕೊರೊನಾ ಹರಡುವಿಕೆ ತಪ್ಪಿಸಲು ಸಾಧ್ಯ ಎಂದು ಮತ್ತೊಬ್ಬ ವೈದ್ಯರು ತಿಳಿಸಿದ್ದಾರೆ.

"ವದಂತಿಗಳನ್ನು ನಂಬಬೇಡಿ"
ಆತಂಕಕಾರಿ ಸುದ್ದಿಗಳನ್ನು ಹೆಚ್ಚು ನೋಡಬೇಡಿ. ವಾಟ್ಸಪ್ ಸಂದೇಶಗಳನ್ನು ನಂಬಬೇಡಿ. ಕೊರೊನಾದಿಂದ ದೂರವುಳಿಯಲು ಏನೇನು ನಿಯಮಗಳನ್ನು ಪಾಲಿಸಬೇಕೋ ಅದರೆಡೆಗೆ ಗಮನ ನೀಡಿ. ಈ ಎಲ್ಲಾ ನಡವಳಿಕೆಗಳನ್ನು ನೀವು, ವೈದ್ಯರು ಹಾಗೂ ಇಡೀ ಸಮಾಜ ಅನುಸರಿಸಬೇಕಿದೆ. ಕೊರೊನಾ ಲಸಿಕೆ ಕುರಿತು ಇರುವ ವದಂತಿಗಳನ್ನು ನಂಬಬೇಡಿ ಎಂದು ವೈದ್ಯರು ಹೇಳಿದ್ದಾರೆ.

"ಮುಂದಿನ ಮೂರು ವಾರಗಳಲ್ಲಿ ಪಾಸಿಟಿವಿಟಿ ದರ ಇಳಿಕೆ"
ಕೊರೊನಾ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಿದರೆ, ದೇಶದಲ್ಲಿ ಕೊರೊನಾ ಪಾಸಿಟಿವಿಟಿ ದರವು ಮುಂದಿನ ಮೂರು ವಾರಗಳಲ್ಲಿ 5% ಇಳಿಕೆ ಕಾಣುತ್ತದೆ ಎಂದು ಏಮ್ಸ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ರೋಗವನ್ನು ಸೋಲಿಸಬೇಕೆಂದರೆ, ನಮ್ಮ ಆರೋಗ್ಯ ಸಿಬ್ಬಂದಿಗಳ ಆರೋಗ್ಯದ ಕುರಿತು ಕಾಳಜಿ ವಹಿಸಬೇಕಾಗಿದೆ. ಹಲವು ಆರೋಗ್ಯ ಕಾರ್ಯಕರ್ತರಿಗೂ ಸೋಂಕು ತಗುಲುತ್ತಿದೆ. ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸಿದರೆ ರೋಗಿಗಳನ್ನು ರಕ್ಷಿಸಬಹುದು ಎಂದು ಏಮ್ಸ್ ಡಾ. ವನೀತ್ ವಿಗ್ ಹೇಳಿದ್ದಾರೆ.












Click it and Unblock the Notifications