ಉತ್ತರಾಖಂಡ, ಹಿಮಾಚಲದಲ್ಲಿ ಮಳೆಯ ಆರ್ಭಟಕ್ಕೆ 66 ಸಾವು; ಶಿಮ್ಲಾ, ಜೋಶಿಮಠದಲ್ಲಿ ಮನೆ ಕುಸಿತ!
ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಿರಂತರ ಮಳೆ ಮತ್ತು ಭೂಕುಸಿತದಿಂದ 66 ಜನರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ರಕ್ಷಿಸಲು ಮತ್ತು ಹಲವಾರು ಸ್ಥಳಗಳಲ್ಲಿ ಮನೆ ಕುಸಿದು ಅವಶೇಷಗಳಿಂದ ದೇಹಗಳನ್ನು ಹೊರತೆಗೆಯಲು ಕಾರ್ಯಾಚರಣೆ ನಡೆದಿದೆ.
ಹಿಮಾಚಲ ಪ್ರದೇಶದಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ. ಆಗಸ್ಟ್ 13 ರಿಂದ ಭಾರೀ ಮಳೆಗೆ ಈವರೆಗೆ 60 ಜನರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಮತ್ತು ಮುಂದಿನ ನಾಲ್ಕು ದಿನಗಳಲ್ಲಿ ಉತ್ತರಾಖಂಡದಲ್ಲಿ ಪ್ರತ್ಯೇಕವಾದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಕಚೇರಿ ಮುನ್ಸೂಚನೆ ನೀಡಿದೆ.

ಹಿಮಾಚಲದಲ್ಲಿ ಹೊಸದಾಗಿ 3 ಮೃತದೇಹಗಳು ಪತ್ತೆ
ಮಂಗಳವಾರ ರಕ್ಷಣಾ ಕಾರ್ಯಕರ್ತರು ಭೂಕುಸಿತದಿಂದಾಗಿ ಮೂರು ದೇಹಗಳನ್ನು ಅವಶೇಷಗಳಿಂದ ಹೊರತೆಗೆದಿದ್ದಾರೆ. ಶಿಮ್ಲಾದಲ್ಲಿ ಕುಸಿದ ಶಿವ ದೇವಾಲಯದ ಅವಶೇಷಗಳಿಂದ ಒಬ್ಬರ ದೇಹವನ್ನು ಹೊರತೆಗೆಯಲಾಗಿದೆ. ನಗರದಲ್ಲಿ ಹೊಸದಾಗಿ ಭೂಕುಸಿತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಶಿಮ್ಲಾದ ಕೃಷ್ಣನಗರ ಪ್ರದೇಶದಲ್ಲಿ ಭೂಕುಸಿತದ ನಂತರ ಆರು ತಾತ್ಕಾಲಿಕ ಮನೆಗಳು ಸೇರಿದಂತೆ ಕನಿಷ್ಠ ಎಂಟು ಮನೆಗಳು ಕುಸಿದಿವೆ ಮತ್ತು ಕಸಾಯಿಖಾನೆ ಅವಶೇಷಗಳ ಅಡಿಯಲ್ಲಿ ಹೂತುಹೋಗಿದೆ.
ಸೋಮವಾರದಿಂದ ಇಲ್ಲಿಯವರೆಗೆ ಒಟ್ಟು 19 ಮೃತದೇಹಗಳು, ಸಮ್ಮರ್ ಹಿಲ್ನ ಶಿವ ದೇವಾಲಯದ ಸ್ಥಳದಲ್ಲಿ 12, ಫಾಗ್ಲಿಯಲ್ಲಿ ಐದು ಮತ್ತು ಕೃಷ್ಣಾನಗರದಲ್ಲಿ ಎರಡು ಶವಗಳನ್ನು ಹೊರತೆಗೆಯಲಾಗಿದೆ. ಸೋಮವಾರ ಕುಸಿದ ಶಿವ ದೇವಾಲಯದಲ್ಲಿ ಇನ್ನೂ 10 ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ಇದೆ.
ಹಿಮಾಚಲದಲ್ಲಿ ಶಾಲೆಗಳಿಗೆ ರಜೆ
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ಸೇನೆಯು ಪೊಲೀಸ್ ಮತ್ತು ಎಸ್ಡಿಆರ್ಎಫ್ನೊಂದಿಗೆ ಬೆಳಿಗ್ಗೆ 6 ಗಂಟೆಗೆ ಸಮ್ಮರ್ ಹಿಲ್ನಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ ಎಂದು ಶಿಮ್ಲಾದ ಡೆಪ್ಯುಟಿ ಕಮಿಷನರ್ ಆದಿತ್ಯ ನೇಗಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಹವಾಮಾನ ಇಲಾಖೆ ಮಂಗಳವಾರ (ಆಗಸ್ಟ್ 15) ಆರೆಂಜ್ ಅಲರ್ಟ್ ನೀಡಿದ್ದು, ಆಗಸ್ಟ್ 19 ರವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯವು ಆಗಸ್ಟ್ 19 ರವರೆಗೆ ಬೋಧನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ವಿಶ್ವವಿದ್ಯಾನಿಲಯದ ಗ್ರಂಥಾಲಯ ಆಗಸ್ಟ್ 20 ರವರೆಗೆ ಮುಚ್ಚಿರುತ್ತದೆ. ಆದಾಗ್ಯೂ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಎಂದಿನಂತೆ ವಿಶ್ವವಿದ್ಯಾಲಯಕ್ಕೆ ಹಾಜರಾಗುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಉತ್ತರಾಖಂಡ ಸಾವಿನ ಸಂಖ್ಯೆ 6ಕ್ಕೆ ಏರಿಕೆ
ನೆರೆಯ ಉತ್ತರಾಖಂಡದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಆರಕ್ಕೆ ಏರಿದೆ. ಇನ್ನೂ ಎರಡು ಶವಗಳು ಪತ್ತೆಯಾಗಿವೆ ಮತ್ತು ಏಳು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಸೋಮವಾರದಿಂದ ಭಾರೀ ಮಳೆಯಾಗುತ್ತಿದೆ.
ಉತ್ತರಕಾಶಿ ಜಿಲ್ಲೆಯ ಅರಕೋಟ್ ಪ್ರದೇಶದ ಗ್ರಾಮಗಳಿಗೆ ಪವಾರ್ ನದಿಯಿಂದ ನೀರು ನುಗ್ಗಿ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಮಂಗಳವಾರ ಪತ್ತೆಯಾಗಿದೆ ಎಂದು ಡೆಹ್ರಾಡೂನ್ನ ವಿಪತ್ತು ನಿಯಂತ್ರಣ ಕೊಠಡಿ ತಿಳಿಸಿದೆ. 14 ವರ್ಷದ ತೇಜಸ್ವಿನಿ ಎಂಬ ಬಾಲಕಿಯ ಮತ್ತೊಂದು ಶವವನ್ನು ರಿಷಿಕೇಶದ ಲಕ್ಷ್ಮಣ್ ಜುಲಾ ಪ್ರದೇಶದಲ್ಲಿ ಮಳೆಯಾಶ್ರಿತ ಹೊಳೆಯಿಂದ ಹೊರತೆಗೆಯಲಾಗಿದೆ.
ಸೋಮವಾರದಂದು ತೇಜಸ್ವಿನಿ ಎಂಬ ಬಾಲಕಿ ತನ್ನ ತಾಯಿ ಮತ್ತು ಸಹೋದರನೊಂದಿಗೆ ಪ್ರಯಾಣಿಸುತ್ತಿದ್ದ ಕಾರು ಹೊಳೆಯ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಳು. ಅವರು ರಿಷಿಕೇಶದ ರಾಣಿ ಮಂದಿರ ಪ್ರದೇಶದ ನಿವಾಸಿಗಳು ಎಂದು ತಿಳಿದು ಬಂದಿದೆ. ಆಕೆಯ ತಾಯಿ ಮತ್ತು ಸಹೋದರನ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿದೆ.
ಮುಂದಿನ ನಾಲ್ಕು ದಿನಗಳ ಕಾಲ ಉತ್ತರಾಖಂಡದ ಹಲವು ಸ್ಥಳಗಳಿಗೆ ಆಗಸ್ಟ್ 19 ರವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಾಲಕ್ರಮೇಣ ಮಳೆಯ ತೀವ್ರತೆ ಕಡಿಮೆಯಾಗಬಹುದು, ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜನರು ಹೊರಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.












Click it and Unblock the Notifications