ಲೋಕಸಭೆ ಚುನಾವಣೆ: ಅರ್ಧದಷ್ಟು ಟಿಕೆಟ್ ಹೊಸಬರಿಗೆ ನೀಡಲಿದೆ ಬಿಜೆಪಿ
ನವದೆಹಲಿ, ಅಕ್ಟೋಬರ್ 13: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಹೊಸ ಮುಖಗಳಿಗೆ ಮಣೆ ಹಾಕುವ ದಿಟ್ಟ ನಿರ್ಧಾರ ಕೈಗೊಂಡಿದ್ದು, ಪಕ್ಷಕ್ಕಾಗಿ ಭವಿಷ್ಯದ ನಾಯಕರನ್ನು ತಯಾರಿಸಲು ಈ ನಿರ್ಣಯ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.
ಹೌದು, 50 ಕ್ಕಿಂತಲೂ ಕಡಿಮೆ ವಯಸ್ಸಿನ ಶೇ.50 ಅಭ್ಯರ್ಥಿಗಳನ್ನು ಈ ಬಾರಿ ಲೋಕಸಭೆ ಚುನಾವಣೆಗೆ ಕಣಕ್ಕಿಳಿಸಲು ಅಮಿತ್ ಶಾ ಯೋಜನೆ ತಯಾರಿಸಿದ್ದಾರೆ. ಹೆಚ್ಚು ವಯಸ್ಸಾಗಿರುವ ಹಾಗೂ ಕ್ಷೇತ್ರದ ಮತದಾರರ ವಿಶ್ವಾಸ ಕಳೆದುಕೊಂಡಿರುವ ಹಲವು ಹಾಲಿ ಸಂಸದರಿಗೆ ಟಿಕೆಟ್ ತಪ್ಪಲಿದೆ.
ಪಕ್ಷದ ಭವಿಷ್ಯದ ದೃಷ್ಠಿಯಿಂದ ಈ ಕಠಿಣ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೊಸ ರಾಜಕೀಯ ನಾಯಕರನ್ನು ಹುಟ್ಟುಹಾಕುವುದು ಕೂಡ ಪಕ್ಷದ ಪ್ರಮುಖ ಕಾರ್ಯವೆಂಬ ಕಾರಣದಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈಗಾಗಲೇ ಅಮಿತ್ ಶಾ ಅವರು ಎಲ್ಲ ರಾಜ್ಯ ಬಿಜೆಪಿ ಮುಖಂಡರೊಂದಿಗೆ ಈ ಬಗ್ಗೆ ಮಾತನಾಡಿದ್ದು, ಹೊಸ ಮುಖಗಳ ಪಟ್ಟಿ ನೀಡುವಂತೆ ಕೇಳಿದ್ದಾರೆ. ಆರ್ಎಸ್ಎಸ್ ಸಹ ಈ ವಿಷಯದಲ್ಲಿ ಬಿಜೆಪಿಗೆ ನೆರವು ನೀಡುತ್ತಿದೆ.

ಆಯ್ಕೆ ಹೇಗೆ?
ಬಿಜೆಪಿಯ ವಿವಿಧ ಘಟಕಗಳಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಐಟಿ, ಸಾಮಾಜಿಕ ಜಾಲತಾಣ, ಎಸ್ಎಸಿ ಎಸ್ಟಿ, ಕಾರ್ಮಿಕ ಘಟಕ, ವಿದ್ಯಾರ್ಥಿ ಘಟಕ, ಮಹಿಳಾ ಘಟಕ ಹೀಗೆ ಪ್ರತಿಯೊಂದು ಘಟಕಕ್ಕೂ ಪ್ರಾಧಾನ್ಯತೆ ನೀಡಿ ಎಲ್ಲ ಘಟಕಗಳಿಂದಲೂ ಕೆಲವರನ್ನು ಆಯ್ಕೆ ಮಾಡಿ ಟಿಕೆಟ್ ನೀಡುವ ಕಾರ್ಯ ಈಗಾಗಲೇ ಚಾಲ್ತಿಯಲ್ಲಿದೆ.

ಪಕ್ಷಕ್ಕೆ ಹಿನ್ನಡೆ ಆಗಬಹುದೆ?
ಶೇ 50 ರಷ್ಟು ಹೊಸ ಮುಖಗಳಿಗೆ ಅವಕಾಶ ನೀಡಿದರೆ ಪಕ್ಷಕ್ಕೆ ಹಿನ್ನಡೆ ಆಗುತ್ತದೆ ಎಂಬ ವಾದ ಸಹ ಪಕ್ಷದಲ್ಲಿ ಜೋರಾಗಿ ಕೇಳಿಬರುತ್ತಿದೆ. ಆದರೆ ಪ್ರಧಾನಿ ಮೋದಿ ಅವರ ಅಲೆ ಇರುವ ಕಾರಣ ಹೊಸ ಮುಖಗಳು ಗೆಲ್ಲುವ ಸಾಧ್ಯತೆ ಇದೆ ಎಂಬುದು ಹೈಕಮಾಂಡ್ ವಾದ ಅಷ್ಟೆ ಅಲ್ಲದೆ. ಹೊಸ ಮುಖಗಳೆಂದ ಮಾತ್ರಕ್ಕೆ ಅಜ್ಞಾತವಾಸಿಗಳಿಗೆ ಟಿಕೆಟ್ ನೀಡುವುದಿಲ್ಲ. ಜನಪರಿಚಿತರಿಗೆ ಟಿಕೆಟ್ ನೀಡುವುದಾಗಿ ಬಿಜೆಪಿ ಹೈಕಮಾಂಡ್ ಚಿಂತಿಸಿದೆ.

ಆಂತರಿಕ ಸಮೀಕ್ಷೆ
ಟಿಕೆಟ್ ವಿತರಣೆಗೆ ಮುನ್ನಾ ಅಮಿತ್ ಶಾ ಸೂಚನೆಯಂತೆ ಎಲ್ಲ ರಾಜ್ಯಗಳ ಎಲ್ಲ ಕ್ಷೇತ್ರಗಳಲ್ಲಿ ಸಮೀಕ್ಷೆಯೊಂದ ನಡೆಯುತ್ತದೆ. ಸಮೀಕ್ಷೆಯ ಆಧಾರದಲ್ಲಿ ಟಿಕೆಟ್ ವಿತರಣೆ ಮಾಡಲಾಗುತ್ತದೆ. ಯಾವ ಬಿಜೆಪಿ ಸಂಸದ ಕ್ಷೇತ್ರದ ಜನರ ವಿಶ್ವಾಸ ಉಳಿಸಿಕೊಳ್ಳಲು ಎಡವುತ್ತಾವೆಯೋ ಆತನಿಗೆ ಟಿಕೆಟ್ ಸಾರಸಗಟು ನಿರಾಕರಿಸಲಾಗುತ್ತದೆ. ರಾಜ್ಯ ಬಿಜೆಪಿ ಸಹ ಸಮೀಕ್ಷೆ ಮಾಡುತ್ತದೆ.

ಕರ್ನಟದಲ್ಲೂ ಜಾರಿ
ಕರ್ನಾಟಕದಲ್ಲಿ ಟಿಕೆಟ್ ಉಸ್ತುವಾರಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರದ್ದಾದರೂ ಸಹ ಇಲ್ಲೂ ಕೆಲವು ನಿಷ್ಕ್ರಿಯ ಹಾಗೂ ವಿವಾದಾತ್ಮಕ ಸಂಸದರು ತಮ್ಮ ಟಿಕೆಟ್ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಟಿಕೆಟ್ ವಿತರಣೆ ಮಾನದಂಡಗಳ ಬಗ್ಗೆ ಹೈಕಮಾಂಡ್ನಿಂದ ರಾಜ್ಯಕ್ಕೆ ಸ್ಪಷ್ಟ ಸೂಚನೆಗಳು ಬಂದಿದ್ದು ಯಡಿಯೂರಪ್ಪ ಅವರು ಅದೇ ಮಾನದಂಡಗಳ ಅನ್ವಯ ಟಿಕೆಟ್ ವಿತರಣೆ ಮಾಡಲಿದ್ದಾರೆ ಎನ್ನಲಾಗಿದೆ.

ಖ್ಯಾತನಾಮರಿಗೆ ಟಿಕೆಟ್
'ಸತ್ತಾ ಕೇ ಲಿಯೆ ಸಂಪರ್ಕ್' ಹೆಸರಿನಲ್ಲಿ ವಿವಿಧ ಕ್ಷೇತ್ರಗಳ ಖ್ಯಾತನಾಮರನ್ನು ಭೇಟಿಯಾಗಿ ಮೋದಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದ ಬಿಜೆಪಿ. ಚುನಾವಣೆ ಸಮೀಪವಾಗುತ್ತಿದ್ದಂತೆ ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರಿಗೆ ಟಿಕೆಟ್ ನೀಡಿ ತಮ್ಮತ್ತ ಸೆಳೆದುಕೊಳ್ಳುವ ಯತ್ನ ಮಾಡಲಾಗುತ್ತಿದೆ. ಮೈಸೂರಿನ ರಾಜ ಯಧುವೀರ ಅವರನ್ನೂ ಬಿಜೆಪಿ ಸಂಪರ್ಕಿಸಿತ್ತು. ಕ್ರಿಕೆಟಿಗ ದ್ರಾವಿಡ್ ಅವರಿಗೂ ವಿಧಾನಸಭೆ ಟಿಕೆಟ್ ಆಫರ್ ಮಾಡಿತ್ತು.












Click it and Unblock the Notifications