ಪಂಚ ರಾಜ್ಯದ ಚುನಾವಣೆ; ಪ್ರಚಾರ ತಂತ್ರ ಬದಲಿಸಿದ ಬಿಜೆಪಿ
ನವದೆಹಲಿ, ಜನವರಿ 19; ದೇಶದಲ್ಲಿನ ಕೋವಿಡ್ ಪರಿಸ್ಥಿತಿಯ ನಡುವೆಯೇ 5 ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಅದರಲ್ಲೂ ಉತ್ತರ ಪ್ರದೇಶದ ಚುನಾವಣೆ ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಚುನಾವಣಾ ಆಯೋಗ ದೊಡ್ಡ ದೊಡ್ಡ ಸಮಾವೇಶಗಳಿಗೆ ನಿರ್ಬಂಧ ಹೇರಿದೆ. ಇದರಿಂದಾಗಿ ಚುನಾವಣಾ ಪ್ರಚಾರ ನಡೆಸಲು ಬೇರೆ ಮಾರ್ಗ ಹುಡುಕುವುದು ಪಕ್ಷಗಳಿಗೆ ಅನಿವಾರ್ಯವಾಗಿದೆ.
ಚುನಾವಣಾ ಸಮೀಕ್ಷೆ; ಗೋವಾದಲ್ಲಿ ಅತಂತ್ರ ಫಲಿತಾಂಶ!
ಬಿಜೆಪಿ ಆನ್ಲೈನ್ ಮೂಲಕ ಐದು ರಾಜ್ಯಗಳಲ್ಲಿ ಪ್ರಚಾರ ಚುರುಕುಗೊಳಿಸಲು ತೀರ್ಮಾನಿಸಿದೆ. ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಪಕ್ಷ ತಲುಪಲಿದ್ದು, ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಲಿದೆ.
ಉತ್ತರ ಪ್ರದೇಶದಲ್ಲಿ 3 ದಿನದಲ್ಲೇ ಬಿಜೆಪಿಗೆ ಬಾಯ್ ಬಾಯ್ ಹೇಳಿದ 11 ಶಾಸಕರು!
ಉತ್ತರ ಪ್ರದೇಶ, ಗೋವಾ, ಮಣಿಪುರ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
ಪಂಜಾಬ್ ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮನ್ ಯಾರು?
5 ರಾಜ್ಯಗಳ ಪೈಕಿ ಪಂಜಾಬ್ ಹೊರತಪಡಿಸಿ ಉಳಿದ ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಅಲ್ಲದೇ 403 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದ ಚುನಾವಣೆ ರಾಷ್ಟ್ರಮಟ್ಟದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಚಿಕ್ಕ-ಚಿಕ್ಕ ಸಮಾವೇಶ
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಚುನಾವಣಾ ಪ್ರಚಾರ ತಂತ್ರವನ್ನು ಸಹ ಬದಲಾವಣೆ ಮಾಡುವ ಅನಿವಾರ್ಯತೆ ಪಕ್ಷಗಳಿಗೆ ಎದುರಾಗಿದೆ. ಬಿಜೆಪಿ ಪ್ರಚಾರದ ವೈಖರಿ ಬದಲಾಯಿಸಿದ್ದು, ಚಿಕ್ಕ-ಚಿಕ್ಕ ಸಮಾವೇಶಗಳನ್ನು ಮಾಡಲಿದೆ. ಈ ಸಮಾವೇಶಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ. ಒಂದು ಅಥವ ಎರಡು ಲಕ್ಷ ಜನರಿಗೆ ಈ ಸಮಾವೇಶ ತಲುಪುವಂತೆ ವ್ಯವಸ್ಥೆ ಮಾಡಲಾಗುತ್ತದೆ.
ಹಿರಿಯ ನಾಯಕರ ಜೊತೆ ಸಭೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಪಕ್ಷದ ಹಿರಿಯ ನಾಯಕರ ಜೊತೆ ಪ್ರಚಾರ ತಂತ್ರದ ಬಗ್ಗೆ ಸಭೆ ನಡೆಸಿದ್ದಾರೆ. ಪ್ರಚಾರ ನಡೆಸುವ ನಾಯಕರು ಮಾಡುವ ಭಾಷಣ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪುವಂತೆ ಮಾಡಲು ಸೂಚನೆ ಕೊಟ್ಟಿದ್ದಾರೆ.
2021ರ ಆರಂಭದಲ್ಲಿ ಕೋವಿಡ್ ಪರಿಸ್ಥಿತಿಯ ನಡುವೆಯೂ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆದಿತ್ತು. ಆಗಲೂ ಸಹ ಬಿಜೆಪಿ ವರ್ಚುವಲ್ ಸಮಾವೇಶಗಳಿಗೆ ಆದ್ಯತೆ ನೀಡಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಸಮಾವೇಶಗಳನ್ನು ನೇರ ಪ್ರಸಾರ ಮಾಡಿತ್ತು.
ಸಮಾವೇಶಗಳಿಗೆ ನಿರ್ಬಂಧ
ಕೇಂದ್ರ ಚುನಾವಣಾ ಆಯೋಗ ಜನವರಿ 15ರಂದು ಹೊರಡಸಿದ ಆದೇಶ ಪ್ರಕಾರ ಜನವರಿ 22ರ ತನಕ ಚುನಾವಣಾ ಘೋಷಣೆಯಾಗಿರುವ ರಾಜ್ಯಗಳಲ್ಲಿ ದೊಡ್ಡ ಸಮಾವೇಶಗಳನ್ನು ಆಯೋಜನೆ ಮಾಡುವಂತಿಲ್ಲ. ಆದರೆ 10 ರಂದು ಚುನಾವಣೆ ನಡೆಯುವ ರಾಜ್ಯಗಳಲ್ಲಿ ಪ್ರಚಾರ ನಡೆಸಲು ಕೆಲವು ನಿಯಮಗಳನ್ನು ಸಡಿಲಿಸಲಾಗಿದೆ.
ಜನವರಿ 8ರಂದು ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆ ಮಾಡಿದ್ದ ಕೇಂದ್ರ ಚುನಾವಣಾ ಆಯೋಗ ಜನವರಿ 15ರ ತನಕ ದೊಡ್ಡ ಸಮಾವೇಶಗಳನ್ನು ನಿರ್ಬಂಧಿಸಿತ್ತು. ಬಳಿಕ ಈ ಆದೇಶವನ್ನು ಜನವರಿ 22ರ ತನಕ ವಿಸ್ತರಣೆ ಮಾಡಲಾಗಿದೆ.
ಎಲ್ಲಿ ಯಾವಾಗ ಮತದಾನ?
ಉತ್ತರ ಪ್ರದೇಶದ 403 ಕ್ಷೇತ್ರಗಳಿಗೆ ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯಲಿದೆ. ಮಣಿಪುರದ 60 ಸ್ಥಾನಗಳಿಗೆ ಫೆಬ್ರವರಿ 27, ಮಾರ್ಚ್ 3ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ.
ಪಂಜಾಬ್ನ 117 ಕ್ಷೇತ್ರಗಳಿಗೆ ಮೊದಲು ಫೆಬ್ರವರಿ 14ರಂದು ಚುನಾವಣೆ ನಡೆಸುವುದಾಗಿ ಘೋಷಣೆ ಮಾಡಲಾಗಿತ್ತು. ಬಳಿಕ ವಿವಿಧ ರಾಜಕೀಯ ಪಕ್ಷಗಳ ಮನವಿ ಹಿನ್ನಲೆಯಲ್ಲಿ ದಿನಾಂಕ ಬದಲಾವಣೆ ಮಾಡಲಾಗಿದ್ದು ಫೆಬ್ರವರಿ 20ರಂದು ಚುನಾವಣೆ ನಡೆಯುತ್ತಿದೆ.
ಉತ್ತರಾಖಂಡದ 70 ಮತ್ತು ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆಬ್ರವರಿ 14ರಂದು ಚುನಾವಣೆ ನಡೆಯುತ್ತಿದೆ. ಎಲ್ಲಾ ರಾಜ್ಯಗಳಲ್ಲಿ ಮತ ಎಣಿಕೆ ಒಂದೇ ಬಾರಿಗೆ ಅಂದರೆ ಮಾರ್ಚ್ 10ರಂದು ನಡೆಯಲಿದೆ.
ಕೋವಿಡ್ ಪ್ರಕರಣಗಳು ಏರಿಕೆ
ಚುನಾವಣೆ ಘೋಷಣೆಯಾಗಿರುವ ರಾಜ್ಯಗಳು ಸೇರಿದಂತೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ. ಮಂಗಳವಾರದ ಹೆಲ್ತ್ ಬುಲೆಟಿನ್ ಪ್ರಕಾರ ದೇಶದಲ್ಲಿ 2,38,018 ಹೊಸ ಕೋವಿಡ್ ಪ್ರಕರಣ ದಾಖಲಾಗಿತ್ತು. 24 ಗಂಟೆಯಲ್ಲಿ 310 ಜನರು ಸಾವುನ್ನಪ್ಪಿದ್ದು, 1,57,421 ಜನರು ಗುಣಮುಖಗೊಂಡಿದ್ದರು.
ದೇಶದ ಸಕ್ರಿಯ ಪ್ರಕರಣಗಳು 17,36,628 ಆಗಿದೆ ಮತ್ತು ಪಾಸಿಟಿವಿಟಿ ದರ ಶೇ 14.43. ದೇಶದಲ್ಲಿನ ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 8,891 ಆಗಿದೆ. ವಿವಿಧ ರಾಜ್ಯಗಳು ಕೋವಿಡ್ ಸೋಂಕು ಹರಡುವಿಕೆ ತಡೆಗೆ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿವೆ.
Recommended Video