ಮಧ್ಯಪ್ರದೇಶ: ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ, ಐವರ ಸಾವು, 8 ಮಂದಿಗೆ ಗಾಯ- ಕಾರಣ ತಿಳಿಯಿರಿ
ದಾತಿಯಾ, ಸೆಪ್ಟೆಂಬರ್ 13: ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ಬುಧವಾರ ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಸಾಕು ಪ್ರಾಣಿಗಳನ್ನು ಮೇಯಿಸುವ ವಿಚಾರದಲ್ಲಿ ಎರಡು ಗುಂಪುಗಳು ಪರಸ್ಪರ ಗುಂಡು ಹಾರಿಸಿವೆ. ಇದರ ಪರಿಣಾಮ ಐವರು ಸಾವನ್ನಪ್ಪಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ತವರು ಕ್ಷೇತ್ರದ ರೆಂಡಾ ಗ್ರಾಮದಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಡಾಂಗಿ ಮತ್ತು ಪಾಲ್ ಸಮುದಾಯದ ಸದಸ್ಯರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಪ್ರಾಥಮಿಕ ತನಿಖೆಯನ್ನು ಉಲ್ಲೇಖಿಸಿ ಮಾತನಾಡಿರುವ ದಾತಿಯಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪ್ರದೀಪ್ ಶರ್ಮಾ, 'ಮೂರು ದಿನಗಳ ಹಿಂದೆ ಸಾಕು ಪ್ರಾಣಿಗಳನ್ನು ಮೇಯಿಸುವ ವಿಷಯದಲ್ಲಿ ಪ್ರಕಾಶ್ ಡಾಂಗಿ ಮತ್ತು ಪ್ರೀತಮ್ ಪಾಲ್ ನಡುವೆ ವಾಗ್ವಾದ ನಡೆದಿತ್ತು' ಎಂದು ತಿಳಿಸಿದ್ದಾರೆ.
ತೀವ್ರ ವಾಗ್ವಾದದ ಸಂದರ್ಭದಲ್ಲಿ, ಪ್ರಕಾಶ್ ಪ್ರೀತಮ್ಗೆ ಕಪಾಳಮೋಕ್ಷ ಮಾಡಿದ್ದನು. ಆ ನಂತರ ಎರಡೂ ಸಮುದಾಯದ ಜನರು ಹೊಡೆದಾಡಿಕೊಂಡಿದ್ದರು. ಈ ಕುರಿತು ದೂರುಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಎರಡೂ ಸಮುದಾಯಗಳ ವಿರುದ್ಧ ಎಫ್ಐಆರ್ಗಳನ್ನೂ ಸಹ ಮಾಡಿದ್ದೆವು ಎಂದು ಎಸ್ಪಿ ಪ್ರದೀಪ್ ಶರ್ಮಾ ಹೇಳಿದ್ದಾರೆ.
ಬುಧವಾರ ಬೆಳಗ್ಗೆ ಎರಡು ಸಮುದಾಯಗಳ ಸದಸ್ಯರು ಮತ್ತೊಮ್ಮೆ ಮುಖಾಮುಖಿಯಾಗಿ ಗುಂಡಿನ ಚಕಮಕಿಯಲ್ಲಿ ತೊಡಗಿದ್ದಾರೆ. ಈ ಘಟನೆಯಲ್ಲಿ ಐವರು ಮೃತ ಪಟ್ಟಿದ್ದಾರೆ. ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರದೀಪ್ ಶರ್ಮಾ ಮಾಹಿತಿ ನೀಡಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಪ್ರಕಾಶ್ ಡಂಗಿ, ರಾಮ್ ನರೇಶ್ ಡಂಗಿ, ಸುರೇಂದ್ರ ಡಂಗಿ, ರಾಜೇಂದ್ರ ಪಾಲ್ ಮತ್ತು ರಾಘವೇಂದ್ರ ಪಾಲ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮೃತರೆಲ್ಲರೂ 30 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಘಟನೆ ಮಧ್ಯಪ್ರದೇಶದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇಲ್ಲವೆಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಘಟನಾ ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಶಾಂತಿ ಸುವ್ಯವಸ್ಥೆಗೆ ದಕ್ಕೆಯಾಗದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಮಧ್ಯ ಪ್ರದೇಶ ಗೃಹ ಇಲಾಖೆ ಸೂಚನೆ ನೀಡಿದೆ.












Click it and Unblock the Notifications