ದೇಶದಲ್ಲಿ ಮತ್ತೆ ಏರಿಕೆಯಾದ ಕೊರೊನಾ; 44,230 ಹೊಸ ಪ್ರಕರಣ ದಾಖಲು
ನವದೆಹಲಿ, ಜುಲೈ 30: ದೇಶದಲ್ಲಿ ಕೆಲವು ವಾರಗಳಿಂದ ಇಳಿಕೆಯಾಗಿದ್ದ ಕೊರೊನಾ ಪ್ರಕರಣಗಳಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಕಳೆದ ಎರಡು ದಿನಗಳಿಂದ ದೇಶದಲ್ಲಿ ದಾಖಲಾಗುತ್ತಿರುವ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕೇರಳ ರಾಜ್ಯವೊಂದರಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸದ್ದಿಲ್ಲದೇ ಏರಿಕೆ ಹಾದಿ ಹಿಡಿದಿವೆ.
ಕಳೆದ 24 ಗಂಟೆಗಳಲ್ಲಿ 44,230 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 42,360 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದು ದಿನದ ಅವಧಿಯಲ್ಲಿ ಸೋಂಕಿನಿಂದ 555 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
60 ವರ್ಷ ಮೇಲ್ಪಟ್ಟವರಲ್ಲಿ ಕೊವಿಶೀಲ್ಡ್ ಪರಿಣಾಮ ಎಷ್ಟು ವಾರ ಇರುತ್ತೆ!?
ಶುಕ್ರವಾರದ ಅಂಕಿಸಂಖ್ಯೆ ಪ್ರಕಾರ, ಇದುವರೆಗೂ ದೇಶದಲ್ಲಿ ಒಟ್ಟು 3,15,72,344 ಕೊರೊನಾ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷ ದಾಟಿದ್ದು, ಸದ್ಯ 4,05,155 ಪ್ರಕರಣಗಳಿವೆ.
ಇಲ್ಲಿಯವರೆಗೆ ದೇಶದಲ್ಲಿ ಸೋಂಕಿನಿಂದ 4,23,217 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 195 ದಿನಗಳೇ ಕಳೆದಿದ್ದು, ಈವರೆಗೂ 45 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ಗುರುವಾರ ರಾತ್ರಿ 7 ಗಂಟೆ ವೇಳೆಗೆ 46,52,914 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಈವರೆಗೂ 45,60,33,754 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಇದರೊಂದಿಗೆ, ಭಾರತದಲ್ಲಿ ಕೊರೊನಾ ಲಸಿಕೆಗಳ ಸಂಯೋಜನೆಯ ಪ್ರಯೋಗ ನಡೆಸಲು ಅನುಮತಿ ನೀಡಲಾಗಿದೆ. ಕೊರೊನಾ ಸೋಂಕಿನ ವಿರುದ್ಧ ಲಸಿಕೆಗಳ ದಕ್ಷತೆ ಪರಿಶೀಲಿಸಲು ಎರಡು ಭಿನ್ನ ಲಸಿಕೆಗಳ ಸಂಯೋಜನೆಯ ಪ್ರಯೋಗಕ್ಕೆ ಕೇಂದ್ರ ಔಷಧ ನಿಯಂತ್ರಕ ಮಂಡಳಿ ಶಿಫಾರಸು ಮಾಡಿದೆ. ಭಾರತದಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳ ಸಂಯೋಜನೆಯ ಪ್ರಯೋಗ ನಡೆಸಲು ಶಿಫಾರಸು ಮಾಡಿರುವುದಾಗಿ ವರದಿಗಳು ತಿಳಿಸಿವೆ. ಕೇಂದ್ರ ಔಷಧ ನಿಯಂತ್ರಕ ಮಂಡಳಿಯ ವಿಷಯ ತಜ್ಞರು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ಈ ಲಸಿಕೆಗಳ ಸಂಯೋಜನೆ ಸಂಬಂಧ ಪ್ರಯೋಗ ನಡೆಸಲು ಅನುಮತಿ ನೀಡಿದ್ದಾರೆ. ಭಾರತದ ಸೆರಂ ಇನ್ಸ್ಟಿಟ್ಯೂಟ್ನ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆಗಳ ನಾಲ್ಕನೇ ಹಂತದ ಪ್ರಯೋಗವನ್ನು ಸುಮಾರು 300 ಆರೋಗ್ಯವಂತ ಸ್ವಯಂ ಸೇವಕರ ಮೇಲೆ ನಡೆಸಲು ಅನುಮತಿ ನೀಡಲಾಗಿದೆ.