ಸಮೀಕ್ಷೆ: ಕೇಜ್ರಿವಾಲ್ ಗೆ ಮೋದಿ ನಂತರದ ಸ್ಥಾನ
ನವದೆಹಲಿ, ಜ.9: ದೇಶದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಹೈದರಾಬಾದ್, ಪುಣೆ ಹಾಗೂ ಅಹಮದಾಬಾದ್ ಜನತೆಯ ಅಭಿಪ್ರಾಯ ಸಂಗ್ರಹಿಸಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ಜನಪ್ರಿಯತೆ ಹೆಚ್ಚಳ ಕಂಡು ಬಂದಿದೆ.
IPSOS ನೆರವಿನಿಂದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಈ ಸಮೀಕ್ಷೆ ನಡೆಸಿದ್ದು, ಚುನಾವಣಾ ಪೂರ್ವ ಸಮೀಕ್ಷೆ ನಡೆಸದಂತೆ ಕೇಂದ್ರ ಚುನಾವಣಾ ಆಯೋಗ ವಿಧಿಸಿರುವ ನಿಯಮಗಳನ್ನು ಪಾಲಿಸಿಕೊಂಡು ಸಮೀಕ್ಷೆ ನಡೆಸಲಾಗಿದೆಯಂತೆ. ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಎಷ್ಟು ಮತ ಸಿಗಬಹುದು. ಎಷ್ಟು ಜನ ಮತ ಹಾಕಬಹುದು, ಪ್ರಧಾನಿ ಅಭ್ಯರ್ಥಿಯಾಗಿ ಯಾರು ಸೂಕ್ತ, ಯಾವ ಪಕ್ಷಕ್ಕೆ ಆಮ್ ಆದ್ಮಿ ಪಕ್ಷ ಹಾನಿಕಾರಕ ಮುಂತಾದ ವಿವರಗಳು ಮುಂದಿವೆ

ಲೋಕಸಭೆ ಚುನಾವಣೆ : ಟೈಮ್ಸ್ ಆಫ್ ಇಂಡಿಯಾ ಸಮೀಕ್ಷೆ
ದೆಹಲಿಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಆಮ್ ಆದ್ಮಿ ಪಕ್ಷಕ್ಕೆ ಮುಂಬರುವ ಲೋಕ ಸಭೆ ಚುನಾವಣೆಯಲ್ಲಿ ಶೇ 44ರಷ್ಟು ಮಂದಿ ಮತ ಚಲಾಯಿಸಲು ಮುಂದಾಗಿದ್ದಾರೆ.ಶೇ 27ರಷ್ಟು ಜನ ಮತ ಹಾಕುವ ಸಾಧ್ಯತೆಯಿದೆ ಎಂದಿದ್ದಾರೆ. ಅಭ್ಯರ್ಥಿಯ ಪೂರ್ವಪರ ತಿಳಿದ ಮೇಲೆ ಎಎಪಿ ಪರ ಅಭ್ಯರ್ಥಿಗೆ ಮತ ಹಾಕುತ್ತೇವೆ ಎಂದಿದ್ದಾರೆ. ಶೇ 23ರಷ್ಟು ಜನ ಮಾತ್ರ ಅಮ್ ಆದ್ಮಿ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಮೋದಿ ನಂತರದ ಸ್ಥಾನ ಪಡೆದ ಕೇಜ್ರಿವಾಲ್
ಪ್ರಧಾನಿ ಯಾರಾಗಬೇಕು ಎಂಬುದರ ಬಗ್ಗೆ ನಡೆಸಿದ ಸಮೀಕ್ಷೆಯಂತೆ ಶೇ 58ರಷ್ಟು ಮಂದಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರೇ ಸೂಕ್ತ ಎಂದಿದ್ದಾರೆ. ಶೇ 25ರಷ್ಟು ಮತ ಪಡೆದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಹಿಂದಿಕ್ಕಿದ್ದಾರೆ. ರಾಹುಲ್ ಗಾಂಧಿಗೆ ಶೇ 14ರಷ್ಟು ಮತಗಳು ಬಿದ್ದಿದೆ.

ಎಎಪಿಗೆ ಎಷ್ಟು ಮತ ಸಿಗಬಹುದು?
* ಶೇ 25ರಷ್ಟು ಮಂದಿ ಎಎಪಿಗೆ 25ಕ್ಕಿಂತ ಅಧಿಕ ಸ್ಥಾನ ಸಿಗಲಿದೆ ಎಂದಿದ್ದಾರೆ.
* ಶೇ 26ರಷ್ಟು ಮಂದಿ ಎಎಪಿಗೆ 26-50ರ ಅಂತರದಲ್ಲಿ ಸ್ಥಾನ ಸಿಗಲಿದೆ ಎಂದಿದ್ದಾರೆ.
* ಶೇ 33ರಷ್ಟು ಮಂದಿ ಎಎಪಿಗೆ 51-100ರ ಅಂತರದಲ್ಲಿ ಸ್ಥಾನ ಸಿಗಲಿದೆ ಎಂದಿದ್ದಾರೆ.
* ಶೇ 11ರಷ್ಟು ಮಂದಿ ಎಎಪಿಗೆ 100ಕ್ಕಿಂತ ಅಧಿಕ ಸ್ಥಾನ ಸಿಗಲಿದೆ ಎಂದಿದ್ದಾರೆ.
* ಶೇ 5ರಷ್ಟು ಮಂದಿ ಮಾತ್ರ ಎಎಪಿಗೆ ಸಂಪೂರ್ಣ ಬಹುಮತ ಸಿಗಲಿದೆ ಎಂದಿದ್ದಾರೆ

ಎಎಪಿಯಿಂದ ಯಾವ ಪಕ್ಷಕ್ಕೆ ಸರಿಯಾದ ಪೆಟ್ಟು ಬೀಳಲಿದೆ
* ಶೇ 31 ರಷ್ಟು ಮಂದಿ ಬಿಜೆಪಿಗೆ ಸರಿಯಾದ ಹೊಡೆತ ಎಂದಿದ್ದಾರೆ.
* ಶೇ 26 ರಷ್ಟು ಮಂದಿ ಕಾಂಗ್ರೆಸ್ಸಿಗೆ ಸರಿಯಾದ ಹೊಡೆತ ಎಂದಿದ್ದಾರೆ.
* ಶೇ 26 ರಷ್ಟು ಮಂದಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡಕ್ಕೂ ಸರಿಯಾದ ಹೊಡೆತ ಎಂದಿದ್ದಾರೆ.
* ಶೇ 81ರಷ್ಟು ಮಂದಿ ರಾಷ್ಟ್ರೀಯ ಪಕ್ಷವಾಗಿ ಎಎಪಿ ಹೊರಹೊಮ್ಮಬೇಕಾಗಿದೆ ಎಂದಿದ್ದಾರೆ.












Click it and Unblock the Notifications