ರೈಲ್ವೇ ಟಿಕೆಟ್ ರಿಯಾಯಿತಿ ಕೈಬಿಟ್ಟ 42 ಲಕ್ಷ ಹಿರಿಯರು: ಮೋದಿ
ನವದೆಹಲಿ, ಜೂನ್ 29: 42 ಲಕ್ಷ ಹಿರಿಯ ನಾಯಕರು ಸ್ವಯಂ ಪ್ರೇರಿತರಾಗಿ ರೈಲ್ವೇ ಟಿಕೆಟ್ ರಿಯಾಯಿತಿಯನ್ನು ಕೈ ಬಿಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದರು. ಕಳೆದ 9 ತಿಂಗಳ ಹಿಂದೆ ಸ್ವಯಂ ಪ್ರೇರಿತರಾಗಿ ರೈಲ್ವೇ ರಿಯಾಯಿತಿಗಳನ್ನು ಕೈ ಬಿಡುವಂತೆ ಅಭಿಯಾನ ಕೈಗೊಳ್ಳಲಾಗಿತ್ತು. ಇದೀಗ ಇದರ ಪರಿಣಾಮ ಎಂಬಂತೆ ದೊಡ್ಡ ಪ್ರಮಾಣದ ಜನರು ರಿಯಾಯಿತಿಯನ್ನು ಕೈಬಿಟ್ಟಿದ್ದಾರೆ.
ಇದೇ ವೇಳೆ 1.25 ಕೋಟಿ ಜನರು ಗ್ಯಾಸ್ ಸಬ್ಸಿಡಿಯನ್ನೂ ಸ್ವಯಂ ಪ್ರೇರಿತವಾಗಿ ಕೈ ಬಿಟ್ಟಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು.
ದೇಶದಲ್ಲಿ ಪ್ರಾಮಾಣಿಕತೆಯ ವಾತಾವರಣ ಹೆಚ್ಚಾಗುತ್ತಿದೆ. ದೇಶದ ಜನರು ಸ್ವಯಂ ಪ್ರೇರಿತಾಗಿ ಸಬ್ಸಿಡಿಗಳನ್ನು ತೊರೆದು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

"ರೈಲ್ವೇ ವಿಚಾರದಲ್ಲಿ ನಾನು ಏನನ್ನೂ ಘೋಷಣೆ ಮಾಡಿರಲಿಲ್ಲ. ಆದರೆ ರೈಲ್ವೇಯವರು ಅವರದೇ ರೀತಿಯಲ್ಲಿ ಹಿರಿಯ ನಾಗರಿಕರು ರಿಯಾಯಿತಿಗಳನ್ನು ಬಿಡಬಹುದೇ ಎಂದು ಕೇಳಿದರು. ಕಳೆದ 8-9 ತಿಂಗಳಲ್ಲಿ 42 ಲಕ್ಷ ರಿಯಾಯಿತಿಯ ಟಿಕೆಟ್ ಗಳನ್ನು ಹಿರಿಯರು ಸ್ವಯಂ ಪ್ರೇರಿತವಾಗಿ ಕೈ ಬಿಟ್ಟಿದ್ದಾರೆ. ನನಗೆ ಇದರ ಬಗ್ಗೆ ಹೆಮ್ಮೆಯಾಗುತ್ತಿದೆ," ಎಂದು ಮೋದಿ ಹೇಳಿದರು.
ಇದೇ ವೇಳೆ ತಾವು ತಿಂಗಳಿಗೆ ಒಮ್ಮೆ ಗರ್ಭಿಣಿ ಮಹಿಳೆಯರಿಗೆ ಉಚಿತವಾಗಿ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಮನವಿ ಮಾಡಿಕೊಂಡಿದ್ದೆ. ಇದಕ್ಕೆ ಸ್ಪಂದಿಸಿ 1.25 ಕೋಟಿ ಮಹಿಳೆಯರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.
"ಇದು ಸರಕಾರದ ಮೇಲೆ ಜನರು ಇಟ್ಟಿರುವ ನಂಬಿಕೆ ಬೆಳೆಯುತ್ತಿರುವ ಸೂಚಕ. ನಾವು ಕಟ್ಟುವ ತೆರಿಗೆಯಲ್ಲಿ ಪ್ರತೀ ಪೈಸೆಯೂ ಅಭಿವೃದ್ಧಿ ಕೆಲಸಕ್ಕೆ ಉಪಯೋಗವಾಗುತ್ತಿದೆ ಎಂಬ ನಂಬಿಕೆ ಜನರಿಗಿದೆ,"' ಎಂದು ಅಭಿಪ್ರಾಯಪಟ್ಟರು.












Click it and Unblock the Notifications