ಮುಂಬೈ ದಾಳಿ ನೆನಪು: ಹುತಾತ್ಮ ತುಕಾರಾಂ ಒಂಬಳೆಗೆ ಕಾಯುತ್ತಿರುವ ಕುಟುಂಬ
ಲಷ್ಕರ್ ಇ ತೈಬಾದ ಹತ್ತು ಉಗ್ರಗಾಮಿಗಳು 26/11ರ ಮುಂಬೈ ದಾಳಿ ನಡೆಸಿ ಒಂಬತ್ತು ವರ್ಷಗಳಾಗಿವೆ. ಉಗ್ರ ಅಜ್ಮಲ್ ಕಸಬ್ ನ ಹಿಡಿಯುವ ವೇಳೆ ಮೃತಪಟ್ಟ ತುಕಾರಾಂ ಒಂಬಳೆ ಕುಟುಂಬದವರು ಅವರಿಗಾಗಿ ಕಾಯುತ್ತಿದ್ದಾರೆ.
"ಅಪ್ಪಾ ಮನೆಗೆ ಬರ್ತಾರೆ ಅಂತಲೇ ನಾವು ಅಂದುಕೊಂಡಿದ್ದೀವಿ" ಎಂದು ಒಂಬಳೆ ಅವರ ಮಗಳು ಈಗಲೂ ಹೇಳುತ್ತಾರೆ. "ನಮ್ಮ ಅಪ್ಪಾ ಯಾವ ಕ್ಷಣದಲ್ಲಾದರೂ ಮನೆಗೆ ಬರಬಹುದು ಅನ್ನಿಸುತ್ತಲೇ ಇರುತ್ತದೆ. ನಮ್ಮ ಹೃದಯಕ್ಕೆ ಆಳದಿಂದ ಗೊತ್ತಿದೆ, ನಮ್ಮ ಮನೆಗೆ ಅವರು ಯಾವತ್ತೂ ವಾಪಸ್ ಬರಲ್ಲ" ಎಂದು ಹನಿಗೂಡಿದ ಕಣ್ಣುಗಳಲ್ಲಿ ಹತಾಶೆ ಹೊರಹಾಕದೆ ಹೇಳುತ್ತಾರೆ ಒಂಬಳೆ ಹಿರಿಯ ಮಗಳು ವೈಶಾಲಿ.
ಉಗ್ರ ಕಸಬ್ ಹಿಡಿದ ಓಂಬಳೆ ಸಾಹಸ ಸ್ಮರಣೀಯ
"ಅವರು ಕೆಲಸದ ಮೇಲೆ ಹೋಗಿದ್ದಾರೆ, ವಾಪಸ್ ಮನೆಗೆ ಬರುತ್ತಾರೆ ಅಂತಲೇ ಮನಸು ಹೇಳುತ್ತದೆ. ನಮ್ಮ ಮನೆಯಲ್ಲಿ ಇವತ್ತಿಗೂ ಅವರ ವಸ್ತುಗಳನ್ನು ಹಾಗೇ ಇಟ್ಟಿದ್ದೇವೆ. ಅಪ್ಪನ ತ್ಯಾಗದ ಬಗ್ಗೆ ನಮ್ಮ ಕುಟುಂಬಕ್ಕೆ ಹೆಮ್ಮೆ ಇದೆ" ಎನ್ನುತ್ತಾರೆ ವೈಶಾಲಿ. ಸದ್ಯಕ್ಕೆ ಎಂ.ಎಡ್ ಮುಗಿಸಿದ್ದು, ಉಪನ್ಯಾಸಕಿ ಆಗುವ ಗುರಿ ಹೊಂದಿದ್ದಾರೆ.
ಕಸಬ್ ನ ಮೇಲೆ ಮುಗಿಬಿದ್ದಿದ್ದ ಒಂಬಳೆ
ಒಂಬಳೆ ಸಹಾಯಕ ಸಬ್ ಇನ್ ಸ್ಪೆಕ್ಟರ್ ಆಗಿದ್ದರು. ಮುಂಬೈ ದಾಳಿ ವೇಳೆ ಕಸಬ್ ನ ಗುಂಡಿಗೆ ಬಲಿಯಾದರು. ಮುಂದಿನ ಪರಿಣಾಮ ಏನು ಅಂತ ಕೂಡ ಯೋಚಿಸದೆ ಕಸಬ್ ನ ಮೇಲೆ ಮುಗಿಬಿದ್ದಿದ್ದರು. ಅವರ ಧೈರ್ಯದ ಫಲಿತವಾಗಿ ಕಸಬ್ ನನ್ನು ಜೀವಂತವಾಗಿ ಹಿಡಿಯಲು ಸಾಧ್ಯವಾಯಿತು.
ನೆನಪಿಸಿಕೊಳ್ಳದ ದಿನವೇ ಇಲ್ಲ
"ಈ ಒಂಬತ್ತು ವರ್ಷದಲ್ಲಿ ಅವರನ್ನು ನೆನಪಿಸಿಕೊಳ್ಳದೆ ಒಂದು ದಿನವೂ ಇಲ್ಲ" ಎನ್ನುವ ವೈಶಾಲಿ ಒಂಬಳೆ, ಸದ್ಯ ವರ್ಲಿ ಪೊಲೀಸ್ ಕ್ಯಾಂಪ್ ನಲ್ಲಿ ತಾಯಿ ತಾರಾ ಹಾಗೂ ಸೋದರಿ ಭಾರತಿ (ರಾಜ್ಯ್ ಜಿಎಸ್ ಟಿ ಇಲಾಖೆಯಲ್ಲಿ ಅಧಿಕಾರಿ) ಜತೆಗೆ ವಾಸವಿದ್ದಾರೆ.
ಸನ್ನಿವೇಶ ಬದಲಾಗಬೇಕು
"ಇನ್ನೂ ಎಷ್ಟು ಕಾಲ ಪೊಲೀಸರು ಅಥವಾ ಸಶಸ್ತ್ರ ಮೀಸಲು ಪಡೆಯ ಅಧಿಕಾರಿಗಳು ತ್ಯಾಗದ ಹೆಸರಲ್ಲಿ ತಮ್ಮ ಜೀವವನ್ನು ಬಲಿ ಕೊಡಬೇಕು? ಇದು ನಿಲ್ಲಬೇಕು. ಈ ಸನ್ನಿವೇಶ ಬದಲಾಗಬೇಕು. ನಮ್ಮ ಜನರನ್ನು ಕಳೆದುಕೊಳ್ಳುತ್ತಿರುವ ಘಟನೆಗಳನ್ನು ವಿಫಲಗೊಳಿಸಬೇಕು" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಹುತಾತ್ಮ ಕುಟುಂಬದ ಹಿನ್ನೆಲೆ
"ಪಶ್ಚಿಮ ಮಹಾರಾಷ್ಟ್ರದ ಸತಾರಾ ಜಿಲ್ಲೆಯು ನಮ್ಮ ಕುಟುಂಬದ ಮೂಲ. ನಮ್ಮ ಕುಟುಂಬದಲ್ಲಿ ಹುತಾತ್ಮರಾದವರು ಸಾಕಷ್ಟು ಮಂದಿ ಇದ್ದಾರೆ. ಇತ್ತೀಚೆಗೆ ಸಿಆರ್ ಪಿಎಫ್ ಕಾನ್ ಸ್ಟೇಬಲ್ ರವೀಂದ್ರ ಧನವಾಡೆ ಹುತಾತ್ಮರಾದರು. ಕಾಶ್ಮೀರದಲ್ಲಿ ಕಳೆದ ಆಗಸ್ಟ್ ನಲ್ಲಿ ಉಗ್ರರ ಜತೆ ಹೋರಾಡುತ್ತಾ ಹುತಾತ್ಮರಾದರು. ಎರಡು ವರ್ಷದ ಹಿಂದ ಕಾಶ್ಮೀರದಲ್ಲಿ ಕರ್ನಲ್ ಸಂತೋಷ್ ಮಹದಿಕ್ ಹುತಾತ್ಮರಾದರು. ಈ ಪಟ್ಟಿ ಹೇಳುತ್ಟಾ ಹೋದರೆ ನನ್ನ ಮನಸು ಕಲಕುತ್ತದೆ" ಎನ್ನುತ್ತಾರೆ ವೈಶಾಲಿ.
ಮಕ್ಕಳಿಗೆ ಪಾಠ ಹೇಳುವ ವೈಶಾಲಿ
"ಹುತಾತ್ಮರಾದವರ ಕುಟುಂಬ ಸದಸ್ಯರನ್ನು ನಮ್ಮ ಕುಟುಂಬದವರು ಅಂದುಕೊಳ್ತೀವಿ. ಅವರ ದುಃಖದಿಂದ ಹೊರಬರಲು ನೆರವಾಗುತ್ತೀವಿ" ಎನ್ನುತ್ತಾರೆ ಆಕೆ. ಸದ್ಯಕ್ಕೆ ವೈಶಾಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ. ಆ ಮೂಲಕ ತಮ್ಮ ನೋವನ್ನು ಮರೆಯುವ ಪ್ರಯತ್ನ ಪಡುತ್ತಿದ್ದಾರೆ.
ಸಮುದ್ರದ ಮೂಲಕ ಮುಂಬೈಗೆ ಬಂದಿದ್ದ ಉಗ್ರರು
ನವೆಂಬರ್ 26, 2008ರಂದು 10 ಪಾಕಿಸ್ತಾನಿ ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬೈಗೆ ಬಂದವರೇ ಜನರ ಮೇಲೆ ಗುಂಡು ಹಾರಿಸಿದ್ದರು. ಆ ವೇಳೆ 166 ಮಂದಿ ಸಾವನ್ನಪ್ಪಿದ್ದರು. ಅದರಲ್ಲಿ ಹದಿನೆಂಟು ಮಂದಿ ರಕ್ಷಣಾ ಸಿಬ್ಬಂದಿ ಒಳಗೊಂಡಿದ್ದರು. ಹಲವಾರು ಮಂದಿ ಗಾಯಗೊಂಡು, ಕೋಟ್ಯಂತರ ರುಪಾಯಿ ನಷ್ಟವಾಗಿತ್ತು.