ಮೋದಿ ತಡೆಯಲು ವಿಪಕ್ಷಗಳ ಮಹಾ ಪ್ಲಾನ್: ಇತಿಹಾಸದಲ್ಲೇ ತೀರಾ ಅಪರೂಪ
Recommended Video
ಇದುವರೆಗೆ ಹೊರಬಿದ್ದಿರುವ ಚುನಾವಣಾ ಸಮೀಕ್ಷೆಗಳನ್ನೇ ಆಧಾರವಾಗಿಟ್ಟುಕೊಂಡು, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಹೊರತಾದ ಎಲ್ಲಾ ಪಕ್ಷಗಳ ಮುಖಂಡರು ಒಂದಾಗಿ, ರಾಷ್ಟ್ರಪತಿಯವರನ್ನು ಭೇಟಿಯಾಗಲು ಮುಂದಾಗಿದ್ದಾರೆಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಭಾರತದ ರಾಜಕೀಯ ಇತಿಹಾಸದಲ್ಲಿ ತೀರಾ ಅಪರೂಪದ ವಿದ್ಯಮಾನವಿದು ಎಂದೇ ಹೇಳಲಾಗುತ್ತಿದ್ದು, ಚುನಾವಣಾಪೂರ್ವ ಮೈತ್ರಿಯ ಪ್ರಕಾರ ಸರಳ ಬಹುಮತ ಬರುವ ಪಕ್ಷಕ್ಕೆ ಸರಕಾರ ರಚಿಸಲು ಅವಕಾಶ ನೀಡಬೇಕೆಂದು ವಿಪಕ್ಷಗಳು ರಾಷ್ಟ್ರಪತಿ ಕೋವಿಂದ್ ಅವರಿಗೆ ಮನವಿ ಸಲ್ಲಿಸುವ ಸಾಧ್ಯತೆಯಿದೆ.
ಮೋದಿಯ ಹೊಸ ಸವಾಲು ಸ್ವೀಕರಿಸಲು ಕಾಂಗ್ರೆಸ್ಸಿಗೆ ಸಾಧ್ಯವೇ?
ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದರೂ, ಸರಳ ಬಹುಮತ ಸಿಗುವ ಸಾಧ್ಯತೆ ಕಮ್ಮಿ ಎನ್ನುವ ಸಮೀಕ್ಷೆಗಳು ಹೊರಬೀಳುತ್ತಿರುವುದರಿಂದ, ಮೋದಿಯನ್ನು ಮತ್ತೆ ಪ್ರಧಾನಿಯಾಗದಂತೆ ತಡೆಯಲು, ವಿಪಕ್ಷಗಳು ಈ ಮಾಸ್ಟರ್ ಪ್ಲಾನ್ ಹಾಕಿಕೊಂಡಿವೆ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಬಿಜೆಪಿಗೇ "ಗ್ಯಾರಂಟಿಯಿಲ್ಲ"
ಇನ್ನೂ ಎರಡು ಹಂತದ ಚುನಾವಣೆ ಬಾಕಿಯಿರುವುದರಿಂದ, ಕೊನೆಯ ಹಂತದ ಚುನಾವಣೆಯ ದಿನವಾದ ಮೇ 19ರ ನಂತರ, ವಿಪಕ್ಷಗಳು ರಾಷ್ಟ್ರಪತಿಯವರನ್ನು ಭೇಟಿಯಾಗುವ ಸಾಧ್ಯತೆಯಿಲ್ಲದಿಲ್ಲ ಎಂದು ಕೆಲವು ಮಾಹಿತಿ/ವರದಿಗಳನ್ನು ಆಧರಿಸಿ ಎನ್ಡಿಟಿವಿ ವರದಿ ಮಾಡಿದೆ.
ಆಯಾಯ ಪಕ್ಷದ ಪ್ರತಿನಿಧಿಗಳು, ರಾಷ್ಟ್ರಪತಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಯೋಜನೆ
ಬಿಜೆಪಿಯೇತರ 21ಪಕ್ಷಗಳ ಮುಖಂಡರು ಸಹಿಹಾಕಿರುವ ಮನವಿ ಪತ್ರದೊಂದಿಗೆ, ಜೊತೆಗೆ ಆಯಾಯ ಪಕ್ಷದ ಪ್ರತಿನಿಧಿಗಳು, ರಾಷ್ಟ್ರಪತಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಯೋಜನೆ ರೂಪಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜೊತೆಗೆ, ಈ ಎಲ್ಲಾ ಪಕ್ಷಗಳು, ಬಿಜೆಪಿಯೇತರ ಸರಕಾರಕ್ಕೆ ಬೆಂಬಲ ಸೂಚಿಸುತ್ತೇವೆ ಎನ್ನುವ ಲಿಖಿತ ಬೆಂಬಲಪತ್ರವನ್ನೂ ಕೋವಿಂದ್ ಅವರಿಗೆ ಸಲ್ಲಿಸಲಿದ್ದಾರೆ.
ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎನ್ನುವ ಸಮೀಕ್ಷಾ ವರದಿ
ಅತಿದೊಡ್ಡ ಪಕ್ಷಕ್ಕೆ ಮೊದಲು ಸರಕಾರ ರಚಿಸಲು ಆಹ್ವಾನ ನೀಡುವ ಪದ್ದತಿಯನ್ನು ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಹಾಗಾಗಿ, ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎನ್ನುವ ಸಮೀಕ್ಷಾ ವರದಿಯನ್ನು ಆಧರಿಸಿ, ಅತಿದೊಡ್ಡ ಪಕ್ಷ ಬಿಟ್ಟು, ಬಹುಮತ ಇರುವ ಪಕ್ಷ/ಮೈತ್ರಿಕೂಟವನ್ನು ಮೊದಲು ಆಹ್ವಾನಿಸಬೇಕು ಎನ್ನುವ ಅಪರೂಪದ ಮನವಿಯನ್ನು ಸಲ್ಲಿಸಲು ನಿರ್ಧರಿಸಲಾಗಿದೆ.
ಅಟಲ್ ಸರಕಾರ ಒಂದು ಮತದಿಂದ ಸೋಲು ಅನುಭವಿಸಿ, ಸರಕಾರ ಪತನಗೊಂಡಿತ್ತು
1998ರಲ್ಲಿ ಅಂದಿನ ರಾಷ್ಟ್ರಪತಿ ಕೆ ಆರ್ ನಾರಾಯಣನ್ ಅವರು ಅಟಲ್ ಬಿಹಾರಿ ವಾಜಪೇಯಿಯವರನ್ನು ಸರಕಾರ ರಚಿಸಲು ಆಹ್ವಾನಿಸುವ ಮುನ್ನ 272 ಸದಸ್ಯರ ಬೆಂಬಲವಿರುವ ಪತ್ರವನ್ನು ಸಲ್ಲಿಸಲು ಸೂಚಿಸಿದ್ದರು. ಆ ವೇಳೆ, ಬಿಜೆಪಿ ಅತಿದೊಡ್ಡ ಪಕ್ಷವಾಗಿ 178 ಸೀಟನ್ನು ಪಡೆದಿದ್ದರೆ, ವಿಪಕ್ಷಗಳು 252 ಸದಸ್ಯ ಬಲವನ್ನು ಹೊಂದಿದ್ದರು. ಈ ವೇಳೆ, ಅವಿಶ್ವಾಸ ಗೊತ್ತುವಳಿಯಲ್ಲಿ ಅಟಲ್ ಸರಕಾರ ಒಂದು ಮತದಿಂದ ಸೋಲು ಅನುಭವಿಸಿ, ಸರಕಾರ ಪತನಗೊಂಡಿತ್ತು.
ಆಪರೇಶನ್ ಕಮಲ ಆಗದಂತೆ ತಡೆಯುವ ಮುಂದಾಲೋಚನೆ
ಒಂದು ವೇಳೆ, ಸರಕಾರ ರಚನೆ ಮಂಡನೆ ಸಲ್ಲಿಸುವ ವೇಳೆ ಬಿಜೆಪಿಗೆ ಸರಳ ಬಹುಮತವಿಲ್ಲದಿದ್ದರೂ, ವಿಶ್ವಾಸ ಗೊತ್ತುವಳಿಯ ವೇಳೆ, ಬಿಜೆಪಿ, ಪ್ರಾದೇಶಿಕ ಪಕ್ಷಗಳನ್ನು ಒಡೆಯುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ ಮುಂದಾಲೋಚನೆ ಮಾಡಿರುವ ವಿಪಕ್ಷಗಳು, ಆಪರೇಶನ್ ಕಮಲ ಆಗದಂತೆ ತಡೆಯಲು ರಾಷ್ಟ್ರಪತಿಯವರನ್ನು ಭೇಟಿಯಾಗಲು ನಿರ್ಧರಿಸಿದೆ.
ಸರಕಾರ ರಚನೆಯ ಸಂಬಂಧ ಆಗಿರುವ ಗೊಂದಲವನ್ನು ತಡೆಯಲು ವಿಪಕ್ಷಗಳು ಈ ನಿರ್ಧಾರಕ್ಕೆ ಬಂದಿವೆ
ಮಣಿಪುರ, ಗೋವಾ, ಕರ್ನಾಟಕದಲ್ಲಿ ಸರಕಾರ ರಚನೆಯ ಸಂಬಂಧ ಆಗಿರುವ ಗೊಂದಲವನ್ನು ತಡೆಯಲು ವಿಪಕ್ಷಗಳು ಈ ನಿರ್ಧಾರಕ್ಕೆ ಬಂದಿವೆ. ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳು ಒಗ್ಗಟ್ಟಾಗಿ ರಾಷ್ಟ್ರಪತಿಗಳನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಮೇ 19ರಂದು ಎಲ್ಲಾ ಹಂತದ ಚುನಾವಣೆ ಮುಕ್ತಾಯಗೊಳ್ಳಲಿದ್ದು, ಮೇ 23ರಂದು ಫಲಿತಾಂಶ ಹೊರಬೀಳಲಿದೆ.