ಹಬ್ಬಕ್ಕೆ ಬಂಪರ್: ಭಾರತೀಯ ರೈಲ್ವೆಯಿಂದ 200 ಹೊಸ ರೈಲು ಸಂಚಾರ
ನವದೆಹಲಿ, ಅಕ್ಟೋಬರ್.04: ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ ದಸರಾ ಮತ್ತು ದೀಪಾವಳಿ ಹಬ್ಬಕ್ಕೆ ಭಾರತೀಯ ರೈಲ್ವೆ ಇಲಾಖೆ ಭರ್ಜರಿ ಕೊಡುಗೆ ನೀಡಿದೆ. ಅಕ್ಟೋಬರ್.15 ರಿಂದ ಹಬ್ಬದ ಪ್ರಯುಕ್ತ ದೇಶಾದ್ಯಂತ 200 ವಿಶೇಷ ಶ್ರಮಿಕ್ ರೈಲುಗಳು ಸಂಚರಿಸಲಿದೆ.
ಭಾರತೀಯ ರೈಲ್ವೆ ಮಂಡಳಿಯ ಸಿಇಓ ವಿ.ಕೆ ಯಾದವ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಕ್ಟೋಬರ್.15 ರಿಂದ ಅಕ್ಟೋಬರ್.30ರವರೆಗೂ 200 ವಿಶೇಷ ಶ್ರಮಿಕ್ ರೈಲುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಪ್ರತಿವರ್ಷವೂ ದಸರಾ ಹಬ್ಬ, ದುರ್ಗಾ ಪೂಜೆ, ದೀಪಾವಳಿ ಅವಧಿಯಲ್ಲಿ ವಿಶೇಷ ರೈಲುಗಳು ಸಂಚರಿಸುತ್ತಿದ್ದವು. ಈ ಬಾರಿ ಕೊವಿಡ್-19 ಸೋಂಕಿನ ಭೀತಿಯಲ್ಲಿ ರೈಲ್ವೆ ಸಂಚಾರವನ್ನೇ ಸ್ಥಗಿತಗೊಳಿಸಿದ್ದು, ಶ್ರಮಿಕ್ ರೈಲುಗಳ ಪ್ರಯಾಣಕ್ಕೆ ಮಾತ್ರ ಅವಕಾಶ ಕಲ್ಪಿಸಿ ಕೊಡಲಾಗಿದೆ.

ರೈಲ್ವೆ ಸಂಚಾರ ಬಂದ್ ಆಗಿದ್ದು ಯಾವಾಗ:
ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ಹಿನ್ನೆಲೆ ಮಾರ್ಚ್.25ರಂದು ಮೊದಲ ಬಾರಿಗೆ ಭಾರತ್ ಲಾಕ್ ಡೌನ್ ಘೋಷಿಸಲಾಗಿತ್ತು. ಅಲ್ಲಿಂದ ಸಾರ್ವಜನಿಕ ರೈಲ್ವೆ ಪ್ರಯಾಣವನ್ನು ಬಂದ್ ಮಾಡಲಾಗಿದ್ದು, ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಮೇ.01ರ ಕಾರ್ಮಿಕ ದಿನಾಚರಣೆ ಅಂಗವಾಗಿ ಶ್ರಮಿಕ್ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ಅವಧಿಯಲ್ಲಿ ರಾಜ್ಯಗಳಿಂದ ರಾಜ್ಯಕ್ಕೆ ವಲಸೆ ತೆರಳಿದ್ದ ಕಾರ್ಮಿಕರನ್ನು ತಮ್ಮ ಗ್ರಾಮಗಳಿಗೆ ತಲುಪಿಸುವ ಕಾರ್ಯವನ್ನು ಶ್ರಮಿಕ್ ರೈಲುಗಳ ಮೂಲಕ ಮಾಡಲಾಗಿತ್ತು.












Click it and Unblock the Notifications