ಕೊಲ್ಲಾಪುರ ಜೈಲಿನಲ್ಲಿ 1993 ಮುಂಬೈ ಬಾಂಬ್ ಸ್ಫೋಟದ ಅಪರಾಧಿ ಹತ್ಯೆ
1993 ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಮುನ್ನಾ ಅಲಿಯಾಸ್ ಮೊಹಮ್ಮದ್ ಅಲಿ ಖಾನ್ ಅಲಿಯಾಸ್ ಮನೋಜ್ಕುಮಾರ್ ಭವರ್ಲಾಲ್ ಗುಪ್ತಾ (59) ಅವರನ್ನು ಜೈಲಿನಲ್ಲಿ ಹತ್ಯೆ ಮಾಡಲಾಗಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಲಾಂಬಾದಲ್ಲಿರುವ ಕೊಲ್ಲಾಪುರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ತಂಡ ಭಾನುವಾರ ಬೆಳಿಗ್ಗೆ ಮುನ್ನಾರನ್ನು ಹತ್ಯೆ ಮಾಡಿದೆ ಎಂದು ವರದಿಯಾಗಿದೆ.

ಬೆಳಗ್ಗೆ 6.30ರ ಸುಮಾರಿಗೆ ಜೈಲು ಕೈದಿಗಳ ಹಾಜರಾತಿ ದಾಖಲಿಸಿಕೊಂಡು ಕಾರಾಗೃಹದ ಸರ್ಕಲ್ ನಂಬರ್ 2ರಲ್ಲಿರುವ ನೀರಿನ ಟ್ಯಾಂಕ್ ಬಳಿಯ ಬಯಲಿಗೆ ಕರೆತಂದ ಕೆಲ ಸಮಯದ ಬಳಿಕ ಈ ಘಟನೆ ನಡೆದಿದೆ ಎಂದು ಕೊಲ್ಲಾಪುರ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ತಲೆಗೆ ಹೊಡೆದು ಹತ್ಯೆ
ಸ್ನಾನಕ್ಕೆಂದು ನೀರಿನ ಟ್ಯಾಂಕ್ ಬಳಿ ಹೋಗಿದ್ದ ಸಂದರ್ಭದಲ್ಲಿ ಮುನ್ನಾ ಮತ್ತು ಐವರು ಅಪರಾಧಿಗಳ ನಡುವೆ ಜಗಳ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಜಗಳದ ವೇಳೆ ಆರೋಪಿಗಳು ಮುನ್ನಾ ಅವರ ತಲೆಗೆ ಮ್ಯಾನ್ಹೋಲ್ ಮುಚ್ಚಳದಿಂದ ಹೊಡೆದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೊಲೆ ಮಾಡಿದವರನ್ನು ಪ್ರತೀಕ್ ಅಲಿಯಾಸ್ ಪಿಲ್ಯ ಸುರೇಶ್ ಪಾಟೀಲ್, ದೀಪಕ್ ನೇತಾಜಿ ಖೋಟ್, ಸಂದೀಪ್ ಶಂಕರ್ ಚವಾಣ್, ಋತುರಾಜ್ ವಿನಾಯಕ್ ಇನಾಮದಾರ್ ಮತ್ತು ಸೌರಭ್ ವಿಕಾಸ್ ಎಂದು ಗುರುತಿಸಲಾಗಿದೆ.
ಕೊಲ್ಲಾಪುರ ಪೊಲೀಸರು ಐವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾರ್ಚ್ 12, 1993 ರಂದು ಮುಂಬೈನಲ್ಲಿ ನಡೆದ ಒಂದೇ ದಿನದ ಸರಣಿ ಬಾಂಬ್ ಸ್ಫೋಟದಲ್ಲಿ 257 ಜನ ಸಾವನ್ನಪ್ಪಿದ್ದರೆ ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡರು.












Click it and Unblock the Notifications