ಇನ್ಫಿ ಮೂರ್ತಿ ಮೋದಿ ಸಮರ್ಥನೆಗೆ ಸೇನ್ ವಿರೋಧ
ನವದೆಹಲಿ, ಡಿ.19: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ದೇಶದ ಮುಂದಿನ ಪ್ರಧಾನಿಯಾಗುವುದಕ್ಕೆ 2002ರ ಗೋಧ್ರೋತ್ತರ ಕೋಮುಗಲಭೆಯು ಯಾವುದೇ ಕಂಟಕವನ್ನು ತಂದೊಡ್ಡುವುದಿಲ್ಲ ಎಂಬ ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್.ನಾರಾಯಣ ಮೂರ್ತಿಯವರ ಅಭಿಪ್ರಾಯವನ್ನು ನೊಬೆಲ್ ಪುರಸ್ಕೃತ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ತಳ್ಳಿಹಾಕಿದ್ದಾರೆ.
ಗುಜರಾತ್ ಕೋಮು ಹಿಂಸಾಚಾರವನ್ನು 1984ರ ಸಿಖ್ ವಿರೋಧಿ ದಂಗೆಗೆ ಹೋಲಿಸಲು ಸಾಧ್ಯವಿಲ್ಲ ಎಂದು ಸೇನ್ ಹೇಳಿದ್ದಾರೆ. 1984ರ ಸಂತ್ರಸ್ತರಿಗೆ ನ್ಯಾಯ ಮರೀಚಿಕೆಯಾಗಿರುವುದನ್ನು 'ಸಂಪೂರ್ಣ ಅವಮಾನ' ಎಂದು ಬಣ್ಣಿಸಿದ ಸೇನ್, ಮುಖ್ಯಮಂತ್ರಿ ನರೇಂದ್ರ ಮೋದಿ ನಿಗಾದಲ್ಲಿ ನಡೆದ ಗುಜರಾತ್ ದಂಗೆ ಹಾಗೂ 1984ರ ಸಿಖ್ ವಿರೋಧಿ ದಂಗೆ ನಡುವಿನ ವ್ಯತ್ಯಾಸವನ್ನು ಮನಗಾಣಬೇಕು ಎಂದು ಕೋರಿದರು.
ಪ್ರಸ್ತುತ ಚುನಾವಣೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಮನ್ ಮೋಹನ್ ಸಿಂಗ್ ಹಾಗೂ ರಾಹುಲ್ ಗಾಂಧಿ ಸಿಖ್ ವಿರೋಧಿ ದಂಗೆಗೆ ಹೊಣೆಗಾರರಲ್ಲ ಎಂದು ಪ್ರತಿಪಾದಿಸಿದ ಅವರು, ಅವರ ವಿರುದ್ಧ ಯಾರೂ ಈ ಬಗ್ಗೆ ಆಪಾದಿಸುವುದಿಲ್ಲ ಎಂದು ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಸೇನ್ ಹೇಳಿದ್ದಾರೆ.

ಆದರೆ ಗುಜರಾತ್ ದಂಗೆಯ ವೇಳೆ ನರೇಂದ್ರ ಮೋದಿ ಅಲ್ಲಿನ ಮುಖ್ಯಮಂತ್ರಿಯಾಗಿದ್ದರು ಎನ್ನುವುದನ್ನು ನಾವಿಲ್ಲಿ ಪರಿಗಣಿಸಬೇಕು ಎಂದು ಅವರು ವಾದಿಸಿದರು. ಸಿಖ್ ವಿರೋಧಿ ದಂಗೆಯು ಕಾಂಗ್ರೆಸ್ನ ತತ್ವಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಹೇಳಿದರು. ಸಿಖ್ ರನ್ನು ಕೊಲ್ಲುವ ಯಾವುದೇ ತತ್ವಗಳು ಕಾಂಗ್ರೆಸ್ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಗುಜರಾತ್ ಮುಸ್ಲಿಮರನ್ನು ಆ ರಾಜ್ಯದಲ್ಲಿ ದ್ವಿತೀಯ ದರ್ಜೆಯ ಪ್ರಜೆಗಳಾಗಿ ನಡೆಸಿಕೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ, ಇದು ಮುಂದುವರಿಯುತ್ತಿರುವ ಸಮಸ್ಯೆ ಎಂದು ಪ್ರತಿಕ್ರಿಯಿಸಿದರು. ನಾರಾಯಣ ಮೂರ್ತಿ ತನ್ನ ಬಲುದೊಡ್ಡ ಸ್ನೇಹಿತನಾದರೂ ಈ ವಿಷಯದಲ್ಲಿ ತಾನು ಅವರನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸಾರಿದರು. (ಪಿಟಿಐ)












Click it and Unblock the Notifications