ಹಿಮಾಚಲದ ಬೌದ್ಧ ವಿಹಾರದಲ್ಲಿ 154 ಬಿಕ್ಕುಗಳಿಗೆ ಕೊರೊನಾ ಸೋಂಕು
ಶಿಮ್ಲಾ, ಮಾರ್ಚ್ 02: ಎರಡು ವಾರಗಳಿಂದೀಚೆಗೆ ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣ ಏರಿಕೆಯಾಗಿದ್ದು, ಮಂಗಳವಾರ ಹಿಮಾಚಲ ಪ್ರದೇಶದ ಧರ್ಮಶಾಲಾ ಸಮೀಪದ ಬೌದ್ಧ ವಿಹಾರ ಧಾಮದಲ್ಲಿ 154 ಬೌದ್ಧ ಬಿಕ್ಕುಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಸಿಧ್ಭರಿಯಲ್ಲಿನ ಗ್ಯೂಟೋ ತಾಂತ್ರಿಕ ಬೌದ್ಧ ವಿಹಾರದ 154 ಬೌದ್ಧ ಬಿಕ್ಕುಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಹಿಮಾಚಲ ಪ್ರದೇಶ ಕಾಂಗ್ರಾ ಜಿಲ್ಲೆಯ ವೈದ್ಯಾಧಿಕಾರಿ ಗುರುದರ್ಶನ್ ಗುಪ್ತಾ ತಿಳಿಸಿದ್ದಾರೆ.
ಒಬ್ಬ ಬಿಕ್ಕುವಿನ ಸ್ಥಿತಿ ಗಂಭೀರವಾಗಿದ್ದು, ತಾಂಡಾ ಮೆಡಿಕಲ್ ಕಾಲೇಜಿಗೆ ಸೇರಿಸಲಾಗಿದೆ. ಇಡೀ ಬೌದ್ಧ ವಿಹಾರವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಎಲ್ಲರಿಗೂ ಐಸೊಲೇಷನ್ನಲ್ಲಿರುವಂತೆ ಸೂಚಿಸಲಾಗಿದೆ. ಇಲ್ಲಿಗೆ ಯಾರೂ ಬರದಂತೆ ಹಾಗೂ ಯಾರೂ ಹೊರ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ.

ಫೆ.23ರಿಂದ ಬೌದ್ಧ ವಿಹಾರದ 330 ಬಿಕ್ಕುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 154 ಬಿಕ್ಕುಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟಿರುವ ಹಲವು ಬಿಕ್ಕುಗಳು ಹೊಸ ವರ್ಷಾಚರಣೆ ಸಂದರ್ಭ ಕರ್ನಾಟಕ ಹಾಗೂ ದೆಹಲಿಯಿಂದ ಬಂದಿದ್ದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಹುಪಾಲು ಬಿಕ್ಕುಗಳಿಗೆ ಯಾವುದೇ ಲಕ್ಷಣವಿಲ್ಲದೇ ಸೋಂಕು ಕಾಣಿಸಿಕೊಂಡಿದೆ.
ಮಂಗಳವಾರದವರೆಗೂ ಹಿಮಾಚಲ ಪ್ರದೇಶದಲ್ಲಿ 434 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಇದುವರೆಗೂ 57,347 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 996 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.












Click it and Unblock the Notifications