14ರ ಯುವ ವಿಜ್ಞಾನಿ ಆವಿಷ್ಕಾರದಿಂದ ಕೊವಿಡ್-19 ಚಿಕಿತ್ಸೆಗೆ ಸಹಾಯ?
ನವದೆಹಲಿ, ಅಕ್ಟೋಬರ್.19: ಕೊರೊನಾವೈರಸ್ ಸೋಂಕಿಗೆ ಲಸಿಕೆ ಯಾವಾಗ ಸಿಗುತ್ತದೆ ಎಂದು ಇಡೀ ಜಗತ್ತು ಎದುರು ನೋಡುತ್ತಿದೆ. ಅಮೆರಿಕಾದಲ್ಲಿರುವ 14 ವರ್ಷದ ಭಾರತೀಯನ ಆವಿಷ್ಕಾರವು ಹೊಸ ಆಶಾಕಿರಣವನ್ನು ಮೂಡಿಸಿದೆ.
ಅಮೆರಿಕಾದ ಟೆಕ್ಸಾಸ್ ನಲ್ಲಿರುವ ಫ್ರಿಸ್ಕೋದಲ್ಲಿ 8ನೇ ತರಗತಿ ಓದುತ್ತಿರುವ ಅನಿಕಾ ಚೆಬ್ರೋಲು ಅವರು ಮಧ್ಯಮ ಶಿಕ್ಷಣ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ. ಕೊರೊನಾವೈರಸ್ ಸೋಂಕಿಗೆ ಸಂಭಾವ್ಯ ಚಿಕಿತ್ಸೆ ನೀಡಬಲ್ಲ ಕಾರ್ಯಕ್ಕಾಗಿ "3ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್" ನಲ್ಲಿ ಗೆದ್ದಿದ್ದಾರೆ.
ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಸಮುದಾಯ ಪ್ರಸರಣ
3M ಚಾಲೆಂಜ್ ವೆಬ್ಸೈಟ್ನಲ್ಲಿ ಉಲ್ಲೇಖಿಸಿರುವ ಪ್ರಕಾರ, ಕೊರೊನಾವೈರಸ್ ಬೆಳವಣಿಗೆಯನ್ನು ನಿರ್ಬಂಧಿಸುವುದಕ್ಕೆ ಮತ್ತು ಮಹಾಮಾರಿ ವಿರುದ್ಧ ಹೋರಾಡಬಲ್ಲ ಪ್ರೋಟಿನ್ ಪ್ರಮಾಣ ಹೆಚ್ಚಿಸುವುದಕ್ಕಾಗಿ ಸೀಸದ ಅಣು ಕಂಡುಹಿಡಿಯಲು ಅನಿಕಾ ಚೆಬ್ರೋಲು, ಇನ್-ಸಿಲಿಕಾ ವಿಧಾನವನ್ನು ಬಳಕೆ ಮಾಡಿದ್ದಾರೆ.

ಶೀತಜ್ವರಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಪ್ರಯತ್ನ
ಕಳೆದ ವರ್ಷ ಯುವ ವಿಜ್ಞಾನಿ ಎನಿಸಿರುವ ಅನಿಕಾ ಚೆಬ್ರೋಲು ಕೂಡಾ ಸುದೀರ್ಘ ಅವಧಿವರೆಗೂ ಶೀತಜ್ವರದ ಕಾಯಿಲೆಯಿಂದ ಬಳಲಿದ್ದರು. ಅಂದು ಶೀತಜ್ವರಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವುದಕ್ಕೆ ಬಯಸಿದ್ದರು. ಆದರೆ ಈ ವರ್ಷಾರಂಭದಲ್ಲೇ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಎಲ್ಲವೂ ಬದಲಾಗಿ ಹೋಯಿತು. "ಅಲ್ಪಾವಧಿಯಲ್ಲೇ ಕೊವಿಡ್-19 ಸಾಂಕ್ರಾಮಿಕ ಪಿಡುಗು ತೀವ್ರ ಪರಿಣಾಮ ಬೀರಿದ್ದನ್ನು ಸೂಕ್ಷ್ಮವಾಗಿ ಗಮನಿಸಿದೆ. ಈ ಹಿನ್ನೆಲೆ ಸಾರ್ಸ್ ಕೊರೊನಾವೈರಸ್-2 ಬಗ್ಗೆ ನನ್ನ ಲಕ್ಷ್ಯವನ್ನು ಕೇಂದ್ರೀಕರಿಸಿದೆನು" ಎಂದು ಅನಿಕಾ ತಿಳಿಸಿದ್ದಾರೆ.

ಲಸಿಕೆ, ರೋಗಾಣು, ಸಂಶೋಧನೆ ಬಗ್ಗೆ ಹೆಚ್ಚಿನ ಆಲೋಚನೆ
"ಸಾಂಕ್ರಾಮಿಕ ಪಿಡುಗು, ಲಸಿಕೆ, ಔಷಧಿ, ರೋಗಾಣು ಮತ್ತು ಸಂಶೋಧನೆಯ ಬಗ್ಗೆ ಆಲೋಚಿಸುವುದಕ್ಕೆ ಹೆಚ್ಚು ಸಮಯವನ್ನು ಮೀಸಲು ಇರಿಸುತ್ತಿದ್ದೆನು. ಆದರೆ ಈ ರೀತಿಯ ಆಲೋಚನೆಯು ನನಗೆ ಕೆಲವು ಬಾರಿ ಹುಚ್ಚುತನದಂತೆ ಭಾಸವಾಗುತ್ತಿತ್ತು" ಎಂದು ಸಿಎಎನ್ ನ್ಯೂಸ್ ಗೆ ಅನಿಕಾ ತಿಳಿಸಿದ್ದಾರೆ.

ಅನಿಕಾ ಚೆಬ್ರೋಲುರಿಗೆ 25 ಸಾವಿರ ಡಾಲರ್ ಬಹುಮಾನ
ಈ ವರ್ಷದ ಸ್ಪರ್ಧೆಯಲ್ಲಿ ಅಂತಿಮಗೊಳಿಸಿದ 10 ಸ್ಪರ್ಧಿಗಳಲ್ಲಿ ಅನಿಕಾ ಚೆಬ್ರೋಲು ಕೂಡಾ ಒಬ್ಬರಾಗಿದ್ದರು. 3ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಅವರಿಗೆ 25,000 ಡಾಲರ್ ಹಣವನ್ನು ಬಹುಮಾನವಾಗಿ ನೀಡಲಾಗಿದೆ. ಇನ್ನು, ಅನಿಕಾ ಚೆಬ್ರೋಲು ಸಂಶೋಧನಾತ್ಮಕ ಮನೋಭಾವವನ್ನು ಹೊಂದಿದ್ದಾರೆ. ಕೊವಿಡ್-19 ಲಸಿಕೆ ಬಗ್ಗೆ ಕೇಳಿದ ಪ್ರಶ್ನೆಗಳು ವಿಶ್ಲೇಷಣಾಶೀಲ ಮನೋಭಾವವನ್ನು ತೋರಿಸುತ್ತದೆ ಎಂದು ತೀರ್ಪುಗಾರ ಡಾ.ಸಿಂಡಿ ಮಾಸ್ ತಿಳಿಸಿದ್ದಾರೆ.

ಅನಿಕಾ ಚೆಬ್ರೋಲು ಬಗ್ಗೆ ತೀರ್ಪುಗಾರರ ಪ್ರಶಂಸೆ
ಕೊರೊನಾವೈರಸ್ ಸೋಂಕು ಜಗತ್ತನ್ನು ಆತಂಕಕ್ಕೆ ದೂಡಿರುವ ಸಂದರ್ಭದಲ್ಲಿ ಅನಿಕಾ ಚೆಬ್ರೋಲು ಅವರ ಸಂಶೋಧನಾತ್ಮಕ ಆಲೋಚನೆಗಳು ಲಸಿಕೆ ಪತ್ತೆಗೆ ಪೂರಕ ಎನಿಸಿವೆ. ಸಮಗ್ರ ಮತ್ತು ಸಂಶೋಧನಾಶೀಲ ದತ್ತಾಂಶಗಳು ಹೊಸ ಆವಿಷ್ಕಾರಕ್ಕೆ ನಾಂದಿ ಹಾಡುವ ಸೂಚನೆಗಳನ್ನು ನೀಡುತ್ತಿವೆ. ತಮ್ಮ ಸಮಯ ಮತ್ತು ಜ್ಞಾನವನ್ನು ಬಳಸಿಕೊಳ್ಳುತ್ತಿರುವ ರೀತಿಯನ್ನು ನೋಡಿದ್ದಲ್ಲಿ ಆತಂಕದಲ್ಲಿರುವ ಜಗತ್ತಿಗೆ ಹೊಸ ಭರವಸೆಯನ್ನು ಹುಟ್ಟಿಸುತ್ತದೆ ಎಂದು ಡಾ. ಸಿಂಡಿ ಮಾಸ್ ತಿಳಿಸಿದ್ದಾರೆ.

ಯುವ ವಿಜ್ಞಾನಿಯ ಸಂಶೋಧನೆಗೆ ಪ್ರೇರೇಪಣೆ
ಕಳೆದ 1918ರಲ್ಲೂ ಶೀತಜ್ವರಕ್ಕೆ ಸಾವಿರಾರು ಜನರು ಪ್ರಾಣ ಬಿಟ್ಟಿದ್ದರು. ಅಂದಿನಿಂದ ಇಂದಿನವರೆಗೂ ಪ್ರತಿವರ್ಷವೂ ಸಾಮಾನ್ಯ ಶೀತದಜ್ವರದ ಕಾರಣದಿಂದಲೇ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಎಲ್ಲ ದೇಶಗಳ ಮಾರುಕಟ್ಟೆಗಳಲ್ಲಿ ಲಸಿಕೆ ಮತ್ತು ಔಷಧಿಗಳು ಲಭ್ಯವಿದ್ದರೂ, ಜನರು ಶೀತಜ್ವರದಿಂದ ಮೃತಪಡುತ್ತಿರುವುದೇಕೆ ಎಂಬ ವಿಷಯವೇ ಸಂಶೋಧನೆಗೆ ಪ್ರೇರೇಪಣೆಯಾಯಿತು ಎಂದು ಅನಿಕಾ ಚೆಬ್ರೋಲು ತಿಳಿಸಿದ್ದಾರೆ.

ಬಹುಮಾನ ಪಡೆದಿದ್ದರೂ ಸಾಧನೆ ಪೂರ್ಣಗೊಂಡಿಲ್ಲ
"ನಾನು ಪ್ರಶಸ್ತಿ ಮತ್ತು ಬಹುಮಾನವನ್ನು ಪಡೆದಿರುವುದಕ್ಕೆ ಸಂತಸವಾಗುತ್ತದೆ. ಆದರೆ ನನ್ನ ಕಾರ್ಯವನ್ನು ನಾನಿನ್ನೂ ಪೂರ್ಣಗೊಳಿಸಿಲ್ಲ. ಸಾಂಕ್ರಾಮಿಕ ಪಿಡುಗಿನಿಂದ ಪ್ರಾಣ ಬಿಡುತ್ತಿರುವವರ ಸಂಖ್ಯೆ ಕಡಿಮೆಗೊಳಿಸುವ ಬಗ್ಗೆ ಮತ್ತು ಕೊವಿಡ್-19 ಲಸಿಕೆ ಮತ್ತು ಔಷಧಿ ಸಂಶೋಧನೆ ನಡೆಸುವ ವಿಜ್ಞಾನಿಗಳು ಮತ್ತು ಸಂಶೋಧಕರ ಜೊತೆಗೆ ನಾನು ಕಾರ್ಯಾರಂಭ ಮಾಡುತ್ತೇನೆ. "ಈ ಬೇಸಿಗೆಯಲ್ಲಿ SARS-CoV-2 ವೈರಸ್ ಪ್ರಮಾಣವನ್ನು ಬಂಧಿಸುವಂತಾ ಸೀಸದ ಸಂಯುಕ್ತವನ್ನು ಕಂಡುಹಿಡಿಯುವ ನನ್ನ ಪ್ರಯತ್ನವು ಹುಚ್ಚುತನ ಎನಿಸಬಹುದು. ಆದರೆ ಈ ಎಲ್ಲಾ ಪ್ರಯತ್ನಗಳನ್ನು ಮುಂದುವರಿಸುತ್ತೇನೆ. ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ಔಷಧ ಅಭಿವೃದ್ಧಿ ತಜ್ಞರ ಸಹಾಯದಿಂದ ಅಣುವನ್ನು ಹೇಗೆ ಅಭಿವೃದ್ಧಿಪಡಿಸುತ್ತೇನೆ ಎಂಬುದು ಈ ಪ್ರಯತ್ನಗಳ ಯಶಸ್ಸನ್ನು ನಿರ್ಧರಿಸುತ್ತದೆ" ಎಂದು ಚೆಬ್ರೋಲು ತಿಳಿಸಿದ್ದಾರೆ.